ತಿರುಪತಿ, ಕಾಶಿ ರೀತಿ ದತ್ತಪೀಠ ಧಾರ್ಮಿಕ ಸ್ಥಳವಾಗಬೇಕು: ಆರ್. ಅಶೋಕ್ ಒತ್ತಾಯ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಸಂಭ್ರಮ ಮನೆ ಮಾಡಿದ್ದು ಇದೇ ಮೊದಲ ಬಾರಿಗೆ ವಿಪಕ್ಷ ನಾಯಕ ಆರ್.ಅಶೋಕ್ ದತ್ತಮಾಲೆ ಹಾಕಿದ್ದಾರೆ. ಚಿಕ್ಕಮಗಳೂರು ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಮಾಲೆ ಧರಿಸಿದ್ದಾರೆ.
ಸೋಮವಾರ ಮಾಲಾಧಾರಿಯಾಗಿ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಸಾವಿರಾರು ಜನರ ಬೃಹತ್ ಶೋಭಾಯಾತ್ರೆಯಲ್ಲೂ ಭಾಗಿಯಾಗಲಿದ್ದಾರೆ. ದತ್ತಮಾಲೆ ಧರಿಸುವ ಸಂದರ್ಭದಲ್ಲಿ ಉಡುಪಿಯ ಪ್ರಮೋದ್ ಮಧ್ವರಾಜ್, ಬಜರಂಗದಳ, ವಿ.ಎಚ್.ಪಿ. ಬಿಜೆಪಿ ಮುಖಂಡರು ಜೊತೆಯಾಗಿದ್ದರು. ಸೋಮವಾರ ಸಾವಿರಾರು ಜನರ ಜೊತೆ ಆರ್.ಅಶೋಕ್ ದತ್ತ ಪೀಠಕ್ಕೆ ತೆರಳಲಿದ್ದಾರೆ.

ತಿರುಪತಿ, ಕಾಶಿ ರೀತಿ ಅಭಿವೃದ್ಧಿಯಾಗಬೇಕು
ದತ್ತಮಾಲಾಧಾರಣೆ ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಇದೇ ಮೊದಲ ಬಾರಿಗೆ ದತ್ತಮಾಲೆ ಸ್ವೀಕಾರ ಮಾಡಿದ್ದೇನೆ. ಈ ಹಿಂದೆ ಕಂದಾಯ ಸಚಿವನಾಗಿದ್ದಾಗ ಭೇಟಿ ನೀಡಿದ್ದೆ ಎಂದು ಸಂತಸ ವ್ಯಕ್ತಪಡಿಸಿದರು.
ಒಬ್ಬ ಕಂದಾಯ ಸಚಿವನಾಗಿ ನನಗೆ ಕಂಡಿದ್ದು ದತ್ತಪೀಠ ಹಿಂದೂಪೀಠವಾಗಿದೆ, ಹಿಂದೂಗಳ ದತ್ತಪೀಠವನ್ನು ಅತಿ ಕ್ರಮಣ ಮಾಡಲಾಗಿದೆ. ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಅರ್ಚಕರ ನೇಮಕ ಮಾಡಿದ್ದೇವೆ, ಸೋಮವಾರ ನಡೆಯುವ ಹೋಮದಲ್ಲಿ ನಾನು ಭಾಗಿಯಾಗುತ್ತೇವೆ ಎಂದು ಹೇಳಿದರು.
ಬಿಜೆಪಿಯ ಕೆಲ ಶಾಸಕರು ದತ್ತಜಯಂತಿಯಲ್ಲಿ ಭಾಗಿಯಾಗುತ್ತಾರೆ ಎಂದ ಅಶೋಕ, ದತ್ತಪೀಠ ತಿರುಪತಿ, ಕಾಶಿ ರೀತಿ ಧಾರ್ಮಿಕ ಸ್ಥಳವಾಗಬೇಕು ಎಂದು ಒತ್ತಾಯಿಸಿದ್ದಾರೆ. ಅದೇ ರೀತಿ ಇಲ್ಲಿ ಕೂಡ ಅಭಿವೃದ್ಧಿಯಾಗಲಿ ಎಂದು ಹೇಳಿದರು.
ಹಿಂದೂಗಳ ಶ್ರದ್ಧಾ ಪವಿತ್ರ ದತ್ತಪೀಠ ಭಾವನೆಯನ್ನು ಮಟ್ಟ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ದತ್ತಪೀಠ ಬೇರೆ ದರ್ಗಾ ಬೇರೆ ಎನ್ನುವುದಕ್ಕೆ ದಾಖಲೆಗಳಿವೆ. ದತ್ತಪೀಠಕ್ಕಾಗಿ ನಿರಂತರವಾಗಿ ಸಾವಿರಾರು ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ. ದತ್ತಪೀಠ ಹಿಂದೂ ಪೀಠವಾಗಿಯೇ ಉಳಿಯಬೇಕು. ದತ್ತಪೀಠದ ಗೌರವ-ಘನತೆ ಎತ್ತಿ ಹಿಡಿಯುವ ಕೆಲಸವನ್ನ ಈ ರಾಜ್ಯ ಸರ್ಕಾರವು ಮಾಡಬೇಕು ಎಂದು ವಿಪಕ್ಷ ನಾಯಕ ಅಶೋಕ್ ಒತ್ತಾಯಿಸಿದರು.
ಚಿಕ್ಕಮಗಳೂರಿನಲ್ಲಿ ಹೆಚ್ಚಾದ ಸಂಭ್ರಮ
ದತ್ತಜಯಂತಿ ಅಂಗವಾಗಿ ಭಾನುವಾರ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಸಂಕಿರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಸಂಕೀರ್ತನಾ ಯಾತ್ರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಸಿ.ಟಿ.ರವಿ ಭಾಗಿಯಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸೋಮವಾರ ಕೂಡ ನಗರದಲ್ಲಿ ಸಾವಿರಾರು ಮಂದಿ ದತ್ತಪೀಠಕ್ಕೆ ಶೋಭಾಯಾತ್ರೆ ನಡೆಸಲಿದ್ದು, ಮುಂಜಾಗ್ರತಾ ಕ್ರಮವಾಗಿ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದೆ.












Click it and Unblock the Notifications