ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಇನ್ನಷ್ಟು ಬಲಗೊಳಸಬೇಕಿದೆ - ಸಿ.ಟಿ.ರವಿ
ಚಿಕ್ಕಮಗಳೂರು, ಅಕ್ಟೋಬರ್ 24: ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಇನ್ನಷ್ಟು ಬಲಗೊಳಸಿ ಅದರ ಮಹತ್ವವನ್ನು ಅರ್ಥ ಮಾಡಿಕೊಂಡು ಬದುಕಿನ ಭಾಗವಾಗಿ ಜೋಡಿಸಿಕೊಳ್ಳಬೇಕಿದೆ ಎಂದು ಶಾಸಕ ಸಿ.ಟಿ.ರವಿ ಕರೆ ನೀಡಿದರು.
ಧನ್ವಂತರಿ ಜಯಂತಿ ಅಂಗವಾಗಿ ನಗರದ ಹಿರೇಮಗಳೂರು ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಗೂ ಶ್ರೀಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತಾಶ್ರಯದಲ್ಲಿ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸಿ.ಟಿ ರವಿ, " ಜಗತ್ತಿಗೆ ಭಾರತ ಕೊಟ್ಟ ಹಲವು ಕೊಡುಗೆಗಳಲ್ಲಿ ಆಯುರ್ವೇದ ಸಹ ಒಂದು. ಭಾರತೀಯ ಪಾರಂಪರಿಕ ಚಿಂತನೆ ಮತ್ತು ನಂಬಿಕೆಗನುಗುಣವಾಗಿ ಚಿಕಿತ್ಸಾ ಪದ್ಧತಿ ಬೆಳೆದು ಬಂತು. ಸೃಷ್ಠಿ, ಪೃಕೃತಿ ನಮಗಾಗಿ ಇರುವುದಲ್ಲ. ಅದನ್ನು ನಾಶ ಮಾಡುವ ಅಧಿಕಾರ ನಮಗೆ ಕೊಟ್ಟಿಲ್ಲ. ಉಳಿಸಿಕೊಳ್ಳುವ ಜವಾಬ್ದಾರಿಯನ್ನು ನಮಗೆ ಕೊಟ್ಟಿದೆ. ಈ ಚಿಕಿತ್ಸಾ ಪದ್ಧತಿ ಆ ಚಿಂತನೆ ಹಿನ್ನೆಲೆಯಲ್ಲಿ ಮೂಡಿಬಂದಿದೆ. ನಮ್ಮ ಆರೋಗ್ಯ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸವನ್ನು ಆಯುರ್ವೇದ ಮಾಡುತ್ತದೆ. ರೋಗದ ವಿರುದ್ಧ ಸ್ವಯಂ ಹೋರಾಡುವ ಶಕ್ತಿಯನ್ನು ಕೊಡುತ್ತದೆ. ಪ್ರಕೃತಿಗೆ ಇದು ಪೂರಕವಾಗಿರುವ ಚಿಕಿತ್ಸೆ, ಇದು ರಾಸಾಯನಿಕ ಮೂಲದ್ದಲ್ಲ. ಪ್ರಕೃತಿಯ ಜೊತೆಗಿರುವಂತಹದ್ದು, ವ್ಯಾಪಾರಿ ಉದ್ದೇಶದಿಂದ ಸ್ಥಾಪಿತವಾಗಿರುವ ಚಿಕಿತ್ಸಾ ಪದ್ಧತಿ ಅಲ್ಲ ಇದು," ಎಂದು ಆರ್ಯುವೇದ ಪದ್ಧತಿಯ ಮಹತ್ವವನ್ನು ಹೇಳಿದರು.

7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್," ವೇದ ಕಾಲದಲ್ಲೂ ಸಹ ಆಯುರ್ವೇದ ಆರೋಗ್ಯ ಪದ್ಧತಿಯ ಉಲ್ಲೇಖವಿದೆ. ಚರಕ ಸಂಹಿತೆ, ಸುಶ್ರೂಷಾ ಸಂಹಿತೆ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಧನ್ವಂತರಿ ಇಡೀ ವಿಶ್ವಕ್ಕೆ ವೈದ್ಯಕೀಯ ಚಿಕಿತ್ಸೆಯನ್ನು ಪರಿಚಯ ಮಾಡಿಸಿದಂತಹ ಹರಿಕಾರ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲಿ ನಾವು ಆಯುಷ್ ಪದ್ಧತಿ ಸಿಗಬೇಕಾದ ಮಾನ್ಯತೆಯನ್ನು ಕೊಟ್ಟಿದೇವೆಯೇ ಎನ್ನುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ," ಎಂದರು.
"2014ರಲ್ಲಿ ಭಾರತ ಸರ್ಕಾರ ಆಯುಷ್ ಸಚಿವಾಲಯ ಅಸ್ಥಿತ್ವಕ್ಕೆ ತಂದಿತು. ಅಲ್ಲಿವರೆಗೆ ಈ ಪದ್ಧತಿ ಬಗ್ಗೆ ಆಸಕ್ತಿ ಇದ್ದಂತೆ ಕಾಣುವುದಿಲ್ಲ. ಅಲ್ಲಿಂದೀಚೆಗೆ ಕೇಂದ್ರ, ರಾಜ್ಯ ಸರ್ಕಾರದಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2021 ರಲ್ಲಿ ಪ್ರಧಾನ ಮಂತ್ರಿಗಳು ಜೈಪುರದಲ್ಲಿ ರಾಷ್ಟ್ರೀಯ ಆಯುರ್ವೇದ ಸಂಸ್ಥೆ ಮತ್ತು ಜಾಮ್ನಾ ನಗರದಲ್ಲಿ ಆಯುರ್ವೇದ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಇಡೀ ಪ್ರಪಂಚಕ್ಕೆ ಭಾರತೀಯ ಆಯುಷ್ ಪದ್ಧತಿಯನ್ನು ಪರಿಚಯಿಸುವ ಕೆಲಸ ಆಗುತ್ತಿದೆ," ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, "ಮಾರ್ಚ್ 22ರಲ್ಲಿ ಡಬ್ಲ್ಯೂಹೆಚ್ಓ ಜೊತೆ ಭಾರತ ಸರ್ಕಾರ ಭಾರತೀಯ ಪಾರಂಪರಿಕ ವೈದ್ಯ ಪದ್ಧತಿಯನ್ನ ಇಡೀ ಪ್ರಪಂಚಕ್ಕೆ ಪರಿಚಯಿಸಬೇಕು ಎನ್ನುವ ನಿಟ್ಟಿನಲ್ಲಿ ಒಂದು ಒಪ್ಪಂದ ಮಾಡಿಕೊಂಡು ಏಪ್ರಿಲ್ 2022 ರಲ್ಲಿ ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ನ್ನು ಗುಜರಾತಿನಲ್ಲಿ ಸ್ಥಾಪಿಸಲಾಗಿದೆ" ಎಂದು ತಿಳಿಸಿದರು.












Click it and Unblock the Notifications