ಸಿ.ಟಿ ರವಿ ಹುಟ್ಟೂರಿನ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ; ಬ್ಯಾನರ್ ಕಟ್ಟಿದ ಗ್ರಾಮಸ್ಥರು
ಚಿಕ್ಕಮಗಳೂರು ಏಪ್ರಿಲ್ 4: ಕಾಫಿನಾಡು ಚಿಕ್ಕಮಗಳೂರಿನ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ನಿಷೇಧ ಕೂಗು ಮತ್ತೆ ಜೋರಾಗಿದೆ. ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹುಟ್ಟೂರಾದ ಚಿಕ್ಕಮಗಳೂರು ತಾಲೂಕಿನ ಚಿಕ್ಕಮಾಗರವಳ್ಳಿ ಗ್ರಾಮದಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿದ್ದೇವೆ ಎಂದು ಬ್ಯಾನರ್ ಕಟ್ಟಲಾಗಿದೆ.
ಇಂದಿನಿಂದ ಆರಂಭವಾಗುವ ದೇವೀರಮ್ಮನ ಸುಗ್ಗಿ ಹಬ್ಬಕ್ಕೆ ಮುಸ್ಲಿಮರಿಗೆ ವ್ಯಾಪಾರ ನಡೆಸಲು ಅವಕಾಶವಿಲ್ಲ ಎಂದು ಊರಿನ ಆರಂಭದಲ್ಲೇ ಸ್ಥಳೀಯರು ಬೋರ್ಡ್ ಹಾಕಿದ್ದಾರೆ. ಜಾತ್ರೆ ಒಂದು ವಾರಗಳ ಕಾಲ ನಡೆಯಲಿದೆ.
ಗುರುವಾರದಿಂದ ಜಾತ್ರೆ ನಡೆಯಲಿದ್ದು, ಜಾತ್ರೆಗೆ ಸಾವಿರಾರು ಜನ ಸೇರುತ್ತಾರೆ. ಈ ಬಾರಿಯ ಸುಗ್ಗಿ ಹಬ್ಬಕ್ಕೆ ಮುಸ್ಲಿಮರಿಗೆ ನಮ್ಮ ಊರಿನಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶವಿಲ್ಲವೆಂದು ಹಳ್ಳಿಯ ದ್ವಾರದ ಬಾಗಿಲಿನಲ್ಲೇ ಬ್ಯಾನರ್ ಹಾಕಿದ್ದಾರೆ. ಈ ದೇಶದ ಕಾನೂನನ್ನು ಗೌರವಿಸದ, ನಾವು ಪೂಜಿಸುವ ಗೋವುಗಳನ್ನು ಕೊಲ್ಲುವ ಹಾಗೂ ದೇಶದ ಅಖಂಡತೆಗೆ ಸವಾಲು ಎಸೆಯುವ ಮುಸ್ಲಿಂ ಗೋಕಟುಕರ ಜೊತೆ ನಾವು ವ್ಯವಹರಿಸುವುದಿಲ್ಲ ಹಾಗೂ ಅವರು ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಊರಿನ ಮುಂದೆಯೇ ದೊಡ್ಡ ಬ್ಯಾನರ್ ಹಾಕಿದ್ದಾರೆ.

ಚಿಕ್ಕಮಾಗರವಳ್ಳಿ, ದೊಡ್ಡಮಾಗರವಳ್ಳಿ, ದೋಣಗೂಡಿಗೆ, ಸಾರಳ್ಳಿ ಹಾಗೂ ಹಳಿಯೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳೆಲ್ಲಾ ಸೇರಿ ಈ ಜಾತ್ರೆ ನಡೆಸುತ್ತಿದ್ದು, ಈವರೆಗೆ ಮುಸ್ಲಿಮರು ಇಲ್ಲಿ ವ್ಯಾಪಾರ- ವಹಿವಾಟು ನಡೆಸುತ್ತಿದ್ದರು. ಈ ಬಾರಿ ಈ ಜಾತ್ರೆಗೆ ಮುಸ್ಲಿಮರಿಗೆ ಅವಕಾಶವಿಲ್ಲದಂತಾಗಿದೆ.
ಪ್ರತಿ ವರ್ಷ ಈ ಜಾತ್ರೆಯಲ್ಲಿ ಹತ್ತಾರು ಮುಸ್ಲಿಮರು ವಿವಿಧ ರೀತಿಯ ಅಂಗಡಿ ಹಾಕಿ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಆದರೆ, ಈ ಬಾರಿ ಹಿಜಬ್ ವಿವಾದಕ್ಕೆ ಹೈಕೋರ್ಟ್ ನೀಡಿದ ತೀರ್ಪನ್ನ ಗೌರವಿಸದ ಹಿನ್ನೆಲೆ ಜಾತ್ರೆಯಲ್ಲಿ ಮುಸ್ಲಿಮರು ವ್ಯಾಪಾರ-ವಹಿವಾಟು ನಡೆಸದಂತಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮಸ್ಥ ತುಡಕೂರು ಮಂಜುನಾಥ್, "ಕೋರ್ಟ್ ಆದೇಶಕ್ಕೆ ಗೌರವ ಕೊಡದಿದ್ದಕ್ಕೆ ಈ ರೀತಿ ಮಾಡುತ್ತಿದ್ದೇವೆ. ಹಿಂದೂಗಳ ತಾಕತ್ತು ಏನು ಅಂತಾ ಮುಸ್ಲಿಮರಿಗೆ ತೋರಿಸುತ್ತಿದ್ದೇವೆ. ಕೋರ್ಟ್ ಆದೇಶ ಧಿಕ್ಕರಿಸಿ ಅಂಗಡಿ ಮುಂಗಟ್ಟುಗಳನ್ನು ಮುಸ್ಲಿಮರು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಈ ಪರಿಣಾಮ ಮಲೆನಾಡಲ್ಲಿ ಈ ರೀತಿಯ ನಿರ್ಬಂಧಗಳು ಹೆಚ್ಚಾಗಿವೆ. ಯಾವುದೇ ಕಾರಣಕ್ಕೂ ಜಾತ್ರೆಗಳಲ್ಲಿ ಮುಸ್ಲಿಮರಿಗೆ ಅಂಗಡಿ ಹಾಕಲು ಅವಕಾಶ ನೀಡುವುದಿಲ್ಲ," ಎಂದರು.
5 ಲಕ್ಷ ರೂ. ಮೌಲ್ಯದ ಮಿಲನ್ ಸಾವು, ಜೋಡೆತ್ತಿನ ಓಟದಲ್ಲಿ ಮಿಂಚಿದ್ದ ಮಿಲನ್
ಜೋಡಿತ್ತಿನ ಗಾಡಿ ಸ್ಪರ್ಧೆಯಲ್ಲಿ ಇಡೀ ರಾಜ್ಯಕ್ಕೆ ಖ್ಯಾತಿಯಾಗಿದ್ದ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪಿದ ನಿಂಗೇನಹಳ್ಳಿ ಗ್ರಾಮದ ನಿಂಗೇಗೌಡರ ಎತ್ತು ಮಿಲನ್ ಅನಾರೋಗ್ಯದಿಂದ ಸಾವನ್ನಪ್ಪಿದೆ. ರಾಸುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ, ಅವರು ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಲಿಲ್ಲ ಎಂದು ರಾಸುವಿನ ಮಾಲೀಕ ಆರೋಪಿಸಿದ್ದಾರೆ.

ಚಿಕ್ಕಮಗಳೂರು, ಮೈಸೂರು, ಹಾಸನ, ಅಜ್ಜಂಪುರ, ಕಡೂರು ಹಾಗೂ ತರೀಕೆರೆ ಸೇರಿದಂತೆ ರಾಜ್ಯದಂತೆ ಜೋಡಿತ್ತಿನ ಗಾಡಿ ಸ್ಪರ್ಧೆಗಳಲ್ಲಿ ಸಾಕಷ್ಟು ಘಟಾನುಘಟಿ ಹೋರಿಗಳಿಗೆ ಸೋಲಿನ ರುಚಿ ತೋರಿಸಿದ್ದ ಮಿಲನ್ ಸೋಮವಾರ ಸಾವನ್ನಪ್ಪಿದೆ. ಎತ್ತಿನ ಮಾಲೀಕ ನಿಂಗೇಗೌಡ ಕಳೆದ ಎರಡ್ಮೂರು ವರ್ಷಗಳಿಂದ ಎತ್ತಿನ ಹಾರೈಕೆಯಲ್ಲಿ ನಿರತರಾಗಿದ್ದರು.
ಈ ಎತ್ತನ್ನು ಸ್ಪರ್ಧೆಗೆ ಬಿಟ್ಟು ಬೇರೆ ಕೆಲಸಕ್ಕೆ ಬಳಸುತ್ತಿರಲಿಲ್ಲ. ಸುಮಾರು ನಾಲ್ಕುವರೆ ಲಕ್ಷ ಬೆಲೆ ಬಾಳುವ ಈ ಎತ್ತಿಗೆ ಕಳೆದ 2 ವಾರಗಳ ಹಿಂದಷ್ಟೆ ರಾಜ್ಯದ ಬೇರೆ-ಬೇರೆ ಹೋರಿ ಮಾಲೀಕರು 4 ಲಕ್ಷಗಳಷ್ಟು ಬೆಲೆಗೆ ಕೇಳಿದ್ದರು. ಸದೃಢ ಮೈಕಟ್ಟು ಹಾಗೂ ಸಾಕಷ್ಟು ಎತ್ತರವಿದ್ದ ಮಿಲನ್ ಅಖಾಡದಲ್ಲಿ ತನ್ನದೇ ಆದ ಹೆಸರು ಗಳಿಸಿತ್ತು. ಕಳೆದೊಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಈ ಹೋರಿಯನ್ನು ಉಳಿಸಿಕೊಳ್ಳಲಾಗದೆ ಮಾಲೀಕ ನಿಂಗೇಗೌಡನ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.












Click it and Unblock the Notifications