ನನ್ನನ್ನು ಮುಲ್ಲಾ ಅಂತಾ ಕರೆದರೆ ಮುಲ್ಲಾಗಳು ಒಪ್ಪುವುದಿಲ್ಲ, ನಾನು ಹಿಂದೂ ಹುಲಿ: ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ
ಚಿಕ್ಕಮಗಳೂರು, ಡಿಸೆಂಬರ್, 07: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೆಸರುಗಳ ಬಗ್ಗೆ ಟ್ವೀಟ್ ವಾರ್ ನಡೆಯುತ್ತಿದೆ. ನನ್ನನ್ನು ಮುಲ್ಲಾ ಅಂತಾ ಕರೆಯಲು ಸಾಧ್ಯವಿಲ್ಲ, ಹಾಗೆ ಕರೆದರೂ ಮುಲ್ಲಾಗಳು ಒಪ್ಪುವುದಿಲ್ಲ. ಆದ್ದರಿಂದ ನನ್ನನ್ನು ಹಿಂದೂ ಹುಲಿ ಅಂತಾ ಕರೆಯಬೇಕಷ್ಟೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಕಾಂಗ್ರೆಸ್ ಟ್ವೀಟ್ಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದರು.
ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಬಿಜೆಪಿ ನಾಯಕರ ಸ್ವಭಾವ ಹಾಗೆ ಇದ್ದರೇ ಖಂಡಿತ ಕರೆಯಲಿ. ನನ್ನ ಸ್ವಭಾವ ಹಾಗಿಲ್ಲ, ನನ್ನ ಮುಲ್ಲಾ ಅಂತಾ ಕರೆಯುವುದಕ್ಕೆ ಆಗಲ್ಲ, ಹಿಂದೂ ಹುಲಿ ಎಂದು ಕರೆಯಬೇಕು. ನನ್ನ ಮುಲ್ಲಾ ಅಂತಾ ಕರೆದರೇ ಮುಲ್ಲಾಗಳು ಒಪ್ಪಿಕೊಳ್ಳುವುದಿಲ್ಲ. ನಮ್ಮ ಸ್ವಭಾವಕ್ಕೆ ತಕ್ಕಂತೆ ಬಿರುದುಗಳು ಬರುತ್ತವೆ," ಎಂದು ವ್ಯಂಗ್ಯವಾಡಿದರು.
ಹೆಸರೇಳದೆ ಸಿದ್ದರಾಮಗೆ ಸಿ.ಟಿ. ರವಿ ಟಾಂಗ್
ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆ ಮಾಡಿದವರನ್ನು ಕನ್ನಡಪ್ರೇಮಿ ಎಂದು ಕರೆಯಲು ಆಗುತ್ತಾ? ಎಂದು ಪ್ರಶ್ನಿಸಿದ ಅವರು, ಮುಲ್ಲಾ ಅನ್ನುವ ಹೆಸರು ಯಾರಿಗೆ ಕನೆಕ್ಟ್ ಆಗುತ್ತದೆ ಅಂದರೆ, ಶಾದಿ ಭಾಗ್ಯ, ದೇ ಆರ್ ಆಲ್ ಮೈ ಬ್ರದರ್ಸ್ ಅನ್ನೋರಿಗೆ ಕನೆಕ್ಟ್ ಆಗುತ್ತೆ. ಬೆಂಕಿ ಹಾಕಿದರೂ ಕೂಡ ಅಮಾಯಕರು ಅನ್ನೋರಿಗೆ ಕನೆಕ್ಟ್ ಆಗುತ್ತದೆ. ಕೇಸರಿ, ಕುಂಕುಮವನ್ನ ದೂಡಿ ಟೋಪಿಯನ್ನ ಪ್ರೀತಿಯಿಂದ ಹಾಕಿಕೊಳ್ಳುವವರಿಗೆ ಕನೆಕ್ಟ್ ಆಗುತ್ತೆ ಎಂದು ಸಿದ್ದರಾಮಯ್ಯ ಹೆಸರೇಳದೆ ಟೀಕಿಸಿದರು.

ಇನ್ನು ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು. ಕರ್ನಾಟಕ ವಾಹನ ಅಥವಾ ಮಹಾರಾಷ್ಟ್ರ ವಾಹನಕ್ಕೆ ಮಸಿ ಬಳಿಯಬಾರದು. ಪ್ರಚೋದನೆ ಮಾಡುವ ಕೆಲಸ ಮಾಡಬಾರದು. ಆಯಾ ರಾಜ್ಯಗಳು ಇಂತಹ ಕೃತ್ಯಗಳಿಗೆ ಅವಕಾಶ ನೀಡಬಾರದು ಎಂದರು.

ಸಮಸ್ಯೆ ಬಗೆಹರಿಸುವ ದಾರಿ ಹುಡುಕಬೇಕು
ಈಗಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದೇವೇಂದ್ರ ಫಡ್ನವಿಸ್ ಇಬ್ಬರೂ ಮಾತುಕತೆ ನಡೆಸಿದ್ದಾರೆ. ಗಡಿವಿಚಾರವನ್ನು ಕಾನೂನಾತ್ಮಕವಾಗಿ ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಬೇಕು. ಗಡಿ ಗೋಡೆಯನ್ನು ಎತ್ತಿ ಸಂಬಂಧ ಹಾಳು ಮಾಡಿಕೊಳ್ಳುವ ಕೆಲಸ ಯಾರು ಮಾಡಬಾರದು ಎಂದರು. ಅಲ್ಲದೇ ಕರ್ನಾಟಕ ನೆಲ ಜಲದ ರಕ್ಷಣೆ ವಿಷಯದಲ್ಲಿ ಯಾವತ್ತೂ ರಾಜೀ ಮಾಡಿಕೊಂಡಿಲ್ಲ. ಈ ವಿಷಯದಲ್ಲಿ ರಾಜಕೀಯ ಪಕ್ಷಗಳು ಒಂದಾಗಿ ನಮ್ಮ ನಿಲುವನ್ನು ವ್ಯಕ್ತಪಡಿಸಬೇಕು. ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವ ದಾರಿ ಹುಡುಕಬೇಕೇ ಹೊರತು ಸಂಘರ್ಷವೇ ದಾರಿಯಲ್ಲ ಎಂದರು.












Click it and Unblock the Notifications