ಖಾಸಗಿ ವ್ಯಕ್ತಿ ಬೇಡಿಕೆ ಇಡುತ್ತಾನೆಂದರೆ ಸಂಶಯಕ್ಕೆ ದಾರಿ: ಸಂಸದೆ ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು, ಡಿಸೆಂಬರ್ 14: ಸಾರಿಗೆ ನೌಕರರ ಹೋರಾಟದಲ್ಲಿ ಖಾಸಗಿ ವ್ಯಕ್ತಿ ಬೇಡಿಕೆ ಇಡುತ್ತಾನೆ ಅಂದರೆ ಎಲ್ಲವೂ ಸಂಶಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಸಾರಿಗೆ ನೌಕರರ ಬೇಡಿಕೆ ಮುಷ್ಕರದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಭಾಗಿಯಾಗಿದ್ದರಿಂದ ಅವರ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.
ಕೋಡಿಹಳ್ಳಿ ಚಂದ್ರಶೇಖರ್ ಅವರ ವ್ಯಕ್ತಿತ್ವದ ಮೇಲೆ ಕಪ್ಪು ಚುಕ್ಕಿ ಬರುವಂತಹ ಹೋರಾಟ ಇದಾಗಿದ್ದು, ಇದರ ಹಿಂದೆ ಕಾಂಗ್ರೆಸ್ ಇರುವ ಭಯ ಹಾಗೂ ಸಂಶಯ ಕಾಡುತ್ತಿದೆ ಎಂದು ಸಂಸದೆ ಅನುಮಾನ ವ್ಯಕ್ತಪಡಿಸಿದರು.

ಕೋಡಿಹಳ್ಳಿ ಚಂದ್ರಶೇಖರ್ ರೈತರ ಬಿಲ್ ಹಿಡಿದುಕೊಂಡು ಹೋರಾಟಕ್ಕೆ ಬಂದವರು, ಇದಕ್ಕೆ ಕಾಂಗ್ರೆಸ್ಸಿಗರು ಬೆಂಬಲ ಕೊಟ್ಟರು. ರೈತ ಹೋರಾಟಗಾರರು ಇದೀಗ ನೌಕರರ ಹೋರಾಟಕ್ಕೆ ಬಂದಿದ್ದಾರೆ. ಯಾವುದೋ ರಾಜಕೀಯ ಪಕ್ಷ ಅವರನ್ನು ನಿಯಂತ್ರಿಸುತ್ತಿದೆ ಎನ್ನುವ ಸಂಶಯವಿದೆ ಎಂದರು.
ರೈತರ ಬಗ್ಗೆ ಹೋರಾಟ ಮಾಡಿದರೆ ಗೌರವ ಇದೆ. ಇಂದು ಸಾರಿಗೆ ನೌಕರರನ್ನು ಲೀಡ್ ಮಾಡುತ್ತಿರುವುದು ಸಂಶಯಕ್ಕೆ ದಾರಿಯಾಗಿದೆ. ಕಾಂಗ್ರೆಸ್ ಪ್ರೇರಿತ ಪ್ರತಿಭಟನೆ ನಡೆಯುತ್ತಿದ್ದೀಯಾ ಅನ್ನುವ ಸಂಶಯ ಕಾಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಚಿಕ್ಕಮಗಳೂರಿನಲ್ಲಿ ಮಾತನಾಡುತ್ತಾ ಹೇಳಿದರು.
ಕೋಡಿಹಳ್ಳಿ ಚಂದ್ರಶೇಖರ್ ಅವರೇ, ಸಾರಿಗೆ ನೌಕರರಿಗೆ ಅವರದ್ದೇ ಆದ ಬೇಡಿಕೆಯಲ್ಲಿ ಇರಲಿ ಬಿಡಿ, ನೀವು ರೈತರ ಬೇಡಿಕೆ ಇಡಲು ಮುಕ್ತರಿದ್ದೀರಾ ಎಂದು ಉಡುಪಿ-ಚಿಕ್ಕಮಗಳೂರು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.












Click it and Unblock the Notifications