ನನಗೆ ಚಪ್ಪಲಿಯಲ್ಲಿ ಹೊಡೆದರು: ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ
ಚಿಕ್ಕಮಗಳೂರು, ನವೆಂಬರ್ 21: ಕಾಡಾನೆ ದಾಳಿಯಿಂದ ಮಹಿಳೆ ಸಾವು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಮೇಲೆ ಸಾರ್ವಜನಿಕರು ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಲ್ಲೇಮನೆ ಕುಂದೂರು ಗ್ರಾಮದಲ್ಲಿ ನಡೆದಿದೆ.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಯವರ ಮೇಲೆ ಉದ್ರಿಕ್ತ ಜನರು ಮುಗಿಬಿದ್ದಿದ್ದರು. ಕೋಪಗೊಂಡಿದ್ದ ಜನರು ಶಾಸಕ ಎಂ.ಪಿ ಕುಮಾರಸ್ವಾಮಿ ಬಟ್ಟೆ ಹರಿದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಮಾತನಾಡಿರುವ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ಎಲ್ಲರ ಕೈಯಲ್ಲೂ ದೊಣ್ಣೆ ಇತ್ತು. ಪ್ರತಿಭಟನೆ ನಡೆಸುತ್ತಿದ್ದ ಜನ ನನಗೆ ಚಪ್ಪಲಿಯಲ್ಲಿ ಹೊಡೆದರು ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.
ನಾನೇ ಓಡಿ ಬಂದು ಕಾರಿನಲ್ಲಿ ಕುಳಿತುಕೊಂಡೆ
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ನನಗೆ ಚಪ್ಪಲಿಯಲ್ಲಿ ಹೊಡೆದರು. ಎಲ್ಲರ ಕೈಯಲ್ಲೂ ದೊಣ್ಣೆ ಇತ್ತು ಕಳ್ಳ, ಹುಚ್ಚು ನಾಯಿ ರೀತಿ ನನ್ನನ್ನು ಅಟ್ಟಾಡಿಸಿದರು. ನಾನೇ ಓಡಿ ಬಂದು ಕಾರಿನಲ್ಲಿ ಕುಳಿತುಕೊಂಡೆ. ಜೀಪಿನ ಮೇಲೆ ತುಂಬಾ ಕಲ್ಲು ಎಸೆದರು. ಬಟ್ಟೆ ಹರಿದರು. ಇದು ಕಾಡಾನೆ ಪ್ರಕರಣ ಅಲ್ಲ, ರಾಜಕೀಯ ದಾಳಿ. ಬಟ್ಟೆ ಹರಿದರೆ ನಾನು ನೂರು ಬಟ್ಟೆ ತರುತ್ತೇನೆ. ಇಂತಹ ಘಟನೆಯಲ್ಲಿ ಕಣ್ಣ ಹಾಗೂ ಕೈ-ಕಾಲು ಹೋಗಿದ್ದರೆ..? ಬರೀ ನನಗೆ ಮಾತ್ರವಲ್ಲ, ಪೊಲೀಸರಿಗೂ ಹೊಡೆದಿದ್ದಾರೆ ಎಂದು ಹೇಳಿದ್ದಾರೆ.
ನಾನು ಕಾಡು ಕಾಯಲ್ಲ, ಆನೆ ಸಾಕಿಲ್ಲ ಎಂದ ಎಂ.ಪಿ ಕುಮಾರಸ್ವಾಮಿ
ಮಾತು ಮುಂದುವರಿಸಿದ ಅವರು, ರಾಜಕೀಯವಾಗಿ ನಾನು ಚುನಾವಣೆಗೆ ನಿಲ್ಲಬಾರದು ಎಂದು ವ್ಯವಸ್ಥಿತ ಹಲ್ಲೆ ನಡೆಸಿದ್ದಾರೆ. ಚುನಾವಣೆಗೆ ನಿಲ್ಲಲೇಬಾರದು ಎಂದು ಸಂಚು ಮಾಡಿ ಹಲ್ಲೆ ಮಾಡಿದ್ದಾರೆ. ಈ ವೇಳೆ ನಾನು ಒಂದೇ ಒಂದು ಮಾತನಾಡಿಲ್ಲ, ಬಹಳ ಸಂಚು ಮಾಡಿ ಹಲ್ಲೆ ಮಾಡಿದ್ದಾರೆ. ನನ್ನ ಮೂಲಕ ಎಲ್ಲಾ ಶಾಸಕರಿಗೂ ಸರ್ಕಾರ ಭದ್ರತೆ ನೀಡಬೇಕು. ನಾನು ಕಾಡು ಕಾಯಲ್ಲ, ಆನೆ ಸಾಕಿಲ್ಲ, ಸರ್ಕಾರಕ್ಕೆ ದೂರು ನೀಡಬಹುದು, ನೀಡುತ್ತೇನೆ. ಕ್ಷೇತ್ರಕ್ಕೆ ಸಾಕಷ್ಟು ಹಣ ತಂದಿದ್ದೇನೆ. ಆನೆ ಸ್ಥಳಾಂತರಕ್ಕೆ ನಾಳೆಯೇ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರಿಗೆ ಹೋಗುತ್ತೇನೆ. ಈ ಬಗ್ಗೆ ವರಿಷ್ಠರು, ಸಿಎಂ, ಗೃಹ ಮಂತ್ರಿ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.
ಹರಿದ ಬಟ್ಟೆಯಲ್ಲೇ ಘಟನೆ ಬಗ್ಗೆ ವಿವರಿಸಿದ ಶಾಸಕ ಕುಮಾರಸ್ವಾಮಿ
ಇನ್ನು ಜನ ಮುಗಿಬಿದ್ದ ಬಳಿಕ ಹರಿದ ಬಟ್ಟೆಯಲ್ಲೇ ನಿಂತು ಹೇಳಿಕೆ ನೀಡಿದ್ದ, ಎಂ.ಪಿ ಕುಮಾರಸ್ವಾಮಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವೇಳೆ ಬೇಕು ಅಂತಾ ಗುಂಪುಗೂಡಿ ಹಲ್ಲೆ ಮಾಡಿದ್ದಾರೆ. ನಾನು ಅಲ್ಲೇ ಇರುತ್ತಿದ್ದೆ, ನನ್ನನ್ನು ಪೊಲೀಸರು ಮಿಸ್ಗೈಡ್ ಮಾಡಿ ಹೊರಗೆ ಕಳಿಸಿದ್ದರು. ಇದು ಪೊಲೀಸರ ವೈಫಲ್ಯ ಎಂದು ಹೇಳಿದ್ದರು. ಇನ್ನು ಜನರು ಶಾಸಕರು ಆನೆ ಸಾಕಿದ್ದಾರೆ ಎಂದು ಜನರು ಹೊಡೆದು ಕಳುಹಿಸಿದ್ದಾರೆ. ಸಂಚು ಮಾಡಿ ಹಲ್ಲೆ ಮಾಡಲಾಗಿದೆ. ಸಾರ್ವಜನಿಕರ ಸೇವೆ ಮಾಡುವವರು ಎಲ್ಲ ತಾಗ್ಯಕ್ಕೂ ಸಜ್ಜಾಗಿರುತ್ತೇವೆ ಎಂದು ಹೇಳಿಕೆ ನೀಡಿದ್ದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಕುಮಾರಸ್ವಾಮಿ
ಹುಲ್ಲೇಮನೆ ಕುಂದೂರು ಗ್ರಾಮದಲ್ಲಿ ಭಾನುವಾರ ರೈತ ಮಹಿಳೆ ಶೋಭಾ (45 ವರ್ಷ) ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು. ಕಾಡಾನೆ ದಾಳಿಯಿಂದ ಮಹಿಳೆ ಸಾವು ಖಂಡಿಸಿ ಹುಲ್ಲೇಮನೆ ಕುಂದೂರು ಮತ್ತು ಸುತ್ತಮುತ್ತಲ ಗ್ರಾಮದ ಸಾವಿರಾರು ಜನರು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರು. ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸುವವರೆಗೆ ಕಾಡಾನೆ ದಾಳಿಯಿಂದ ಮೃತರಾದ ಮಹಿಳೆ ಶವವನ್ನು ಮೇಲೆತ್ತಲು ಬಿಡುವುದಿಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದಿದ್ದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಂ.ಪಿ ಕುಮಾರಸ್ವಾಮಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.