ಪತಿಯಿಂದ ದೂರಾಗಿ ಪ್ರಿಯಕರನ ಜೊತೆಗಿದ್ದ ಯುವತಿ ನಿಗೂಢ ಸಾವು
ಹಾಸನ, ಡಿಸೆಂಬರ್ 13: ಪತಿಯಿಂದ ದೂರಾಗಿ ಪ್ರಿಯಕರನ ಜೊತೆಗಿದ್ದ ಮಹಿಳೆ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಪಾರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾವ್ಯಾ (25) ಮೃತ ಯುವತಿ ಎಂದು ಗುರುತಿಸಲಾಗಿದೆ.
ಮೃತ ಕಾವ್ಯಾ ಪ್ರಿಯಕರ ಅವಿನಾಶ್ ವಿರುದ್ಧ ಕೊಲೆಯ ಆರೋಪ ಕೇಳಿಬಂದಿದೆ. ಸದ್ಯ ಅವಿನಾಶ್ನನ್ನು ವಶಕ್ಕೆ ಪಡೆದಿರುವ ಹೊಳೆನರಸೀಪುರ ನಗರ ಠಾಣೆ ಪೊಲೀಸರು ತಹಶೀಲ್ದಾರ್ ಕೃಷ್ಣಮೂರ್ತಿ ಸಮ್ಮುಖದಲ್ಲಿ ಹೂತಿದ್ದ ಶವವನ್ನು ಹೊರಗೆ ತೆಗೆದಿದ್ದಾರೆ. ಕಾವ್ಯಾ ಳನ್ನು ಕೊಲೆ ಮಾಡಿ ನಂತರ ಕಬ್ಬಿನಗದ್ದೆಯಲ್ಲಿ ಹೂತು ಹಾಕಲಾಗಿದೆ ಎಂದು ಶಂಕಿಸಲಾಗಿದೆ.

ತಾಯಿಯ ಬಳಿ ಹೇಳದೆ ಮದುವೆಯಾಗಿದ್ದ ಕಾವ್ಯಾ
ಹಾಸನ ಅರಕಲಗೂಡು ತಾಲೂಕಿನ ಮುದ್ಲಾಪುರ ಗ್ರಾಮದ ಕಲ್ಪನಾ ಎನ್ನುವವರ ಪುತ್ರಿ ಕಾವ್ಯಾ ಒಂದೂವರೆ ವರ್ಷವಿರುವಾಗಲೇ ತಂದೆಯನ್ನು ಕಳೆದುಕೊಂಡಿದ್ದಳು. ನಂತರ ದೊಡ್ಡಮ್ಮನ ಮನೆಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡಿದ್ದಳು. ಬಿಬಿಎಂ ಓದಿದ್ದ ಕಾವ್ಯಾ , ಅಕ್ಷಯ್ ಎನ್ನುವಾತನನ್ನು ಪ್ರೀತಿಸಿ ವಿವಾಹವಾಗಿದ್ದಳು. ಈ ವಿಷಯವನ್ನು ತಾಯಿಯ ಬಳಿವೂ ಹೇಳಿರಲಿಲ್ಲ. ಮದುವೆಯಾದ ಕೆಲವೇ ತಿಂಗಳಲ್ಲಿ ಸಂಸಾರದಲ್ಲಿ ಹೊಂದಾಣಿಕೆ ಬಾರದ ಕಾರಣ ಪೊಲೀಸ್ ಠಾಣೆಗೆ ದೂರು ನೀಡಿ ಅಕ್ಷಯ್ ಜೊತೆ ವಿವಾಹ ಸಂಬಂಧ ಮುರಿದುಕೊಂಡಿದ್ದಳು. ಈ ವಿಚಾರವನ್ನು ಕೂಡ ತನ್ನ ತಾಯಿಯಿಂದ ಮುಚ್ಚಿಟ್ಟಿದ್ದಳು ಎನ್ನಲಾಗಿದೆ.

ಅವಿನಾಶ್ ಪ್ರೀತಿಗೆ ಬಿದ್ದು ಆತನ ಮನೆ ಸೇರಿದ್ದ ಕಾವ್ಯಾ
ಬಳಿಕ ಕಾವ್ಯಾ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಬೆಂಗಳೂರಿನಲ್ಲಿ ಕೆಲ ತಿಂಗಳುಗಳ ಕಾಲ ಕೆಲಸ ಮಾಡಿದ ಕಾವ್ಯಾ ನಂತರ ಹಾಸನಕ್ಕೆ ವಾಪಾಸ್ಸಾಗಿದ್ದಳು. ಹೊಳೆನರಸೀಪುರ ತಾಲೂಕಿನ, ಪಾರಸನಹಳ್ಳಿ ಗ್ರಾಮದ ಅವಿನಾಶ್ನನ್ನು ಪ್ರೀತಿಸುತ್ತಿದ್ದಳು. ಕಳೆದ ಎರಡು ವರ್ಷಗಳಿಂದ ಅವಿನಾಶ್ ಮನೆಯಲ್ಲಿಯೇ ವಾಸವಿದ್ದು, ತಾಯಿಯ ಬಳಿ ನಾನು ಬೆಂಗಳೂರಿನಲ್ಲೇ ಇರುವುದಾಗಿ ಹೇಳಿದ್ದಳು ಎನ್ನಲಾಗಿದೆ.
ಕಳೆದ ಒಂದು ತಿಂಗಳಿನಿಂದ ತಾಯಿಯ ಬಳಿ ಫೋನ್ನಲ್ಲಿ ಮಾತನಾಡದೆ ವಾಯ್ಸ್ ಮೆಸೇಜ್ ಕಳುಹಿಸುತ್ತಿದ್ದಳು. ಮೊಬೈಲ್, ಲ್ಯಾಪ್ಟ್ಯಾಪ್ ತೆಗೆದುಕೊಳ್ಳಬೇಕೆಂದು ಇಪ್ಪತ್ತೈದು ಸಾವಿರ ಹಣವನ್ನು ಹಾಕಿಸಿಕೊಂಡಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ.

ಅನಾಮಧೇಯ ವ್ಯಕ್ತಿಯಿಂದ ಕಾವ್ಯ ತಾಯಿಗೆ ಕರೆ
ಕಳೆದ ಇಪ್ಪತ್ತು ದಿನಗಳಿಂದ ಕಾವ್ಯಾ ತನ್ನ ತಾಯಿಗೆ ಫೋನ್ ಮಾಡಿರಲಿಲ್ಲ. ಅವಳ ಫೋನ್ ಕೂಡ ಸ್ವಿಚ್ ಆಫ್ ಬರುತ್ತಿತ್ತು. ಇದರಿಂದ ಕಾವ್ಯಾಳ ಪೋಷಕರು ಆತಂಕಗೊಂಡಿದ್ದರು. ನಂತರ ಕಾವ್ಯಾ ತಾಯಿಗೆ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಫೋನ್ ಮಾಡಿ ನಿಮ್ಮ ಮಗಳನ್ನು ಹೂತು ಹಾಕಿದ್ದಾರೆ ಎಂದು ಗ್ರಾಮದಲ್ಲಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದರು. ನಂತರ ಮಗಳು ಕಾಣಿಯಾಗಿರುವ ಬಗ್ಗೆ ಕಲ್ಪನಾ ಹೊಳೆನರಸೀಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಅವಿನಾಶ್ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಕಬ್ಬಿನಗದ್ದೆಯಲ್ಲಿ ಹೂತು ಹಾಕಿರುವುದು ಬೆಳಕಿಗೆ ಬಂದಿದೆ. ಅವಿನಾಶ್ ಹಾಗೂ ಆತನ ಪೋಷಕರೇ ನನ್ನ ಮಗಳನ್ನು ಕೊಲೆ ಮಾಡಿ ಹೂತು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ತಹಶೀಲ್ದಾರ್ ಸಮ್ಮುಖದಲ್ಲಿ ಶವ ಹೊರತೆಗೆದ ಪೊಲೀಸರು
ನವೆಂಬರ್ 25ರಂದುಕಾವ್ಯಾಳ ತಾಯಿ ಕಲ್ಪನಾ ನೀಡಿದ ದೂರಿನ ಮೇರೆಗೆ ಡಿ.12 ರಂದು ಅವಿನಾಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳೆದ ಹದಿನೆಂಟು ದಿನಗಳ ಹಿಂದೆ ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ಕಾವ್ಯಾಳ ಶವವನ್ನು ಹೊತ್ತೊಯ್ದು ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿರುವುದಾಗಿ ತಿಳಿಸಿದ್ದು, ಹೂತು ಹಾಕಿದ್ದ ಜಾಗವನ್ನು ತೋರಿಸಿದ್ದಾನೆ ಎನ್ನಲಾಗಿದೆ. ತಹಶೀಲ್ದಾರ್ ಕೃಷ್ಣಮೂರ್ತಿ ಸಮ್ಮುಖದಲ್ಲಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಕಾವ್ಯಾಳದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ತಿಳಿಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಕಾವ್ಯಾಳ ಸಾವಿನ ಸುತ್ತ ಅನುಮಾನದ ಹುತ್ತವಿದ್ದು, ಪಾರಸನಹಳ್ಳಿಯಲ್ಲಿ ಕಾವ್ಯಾಳ ಜೊತೆ ಅವಿನಾಶ್ ಹಾಗೂ ಆತನ ಪೋಷಕರು ಜಗಳವಾಡಿ ಕೊಲೆ ಮಾಡಿ ಹೂತು ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಪ್ರಕರಣದ ತನಿಖೆ ನಂತರವಷ್ಟೇ ಸತ್ಯಾಂಶ ಹೊರ ಬೀಳಲಿದ್ದು, ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.












Click it and Unblock the Notifications