ಕಾಫಿನಾಡಿನಲ್ಲಿ ಧಾರಾಕಾರ ಮಳೆ: ಸಂಕಷ್ಟದಲ್ಲಿ ಭತ್ತ, ಕಾಫಿ, ಅಡಿಕೆ ಬೆಳೆಗಾರರು
ಚಿಕ್ಕಮಗಳೂರು, ಡಿಸೆಂಬರ್ 12 : ಕಾಫಿನಾಡಿನಲ್ಲಿ ಅಕಾಲಿಕ ಮಳೆಯ ಅಬ್ಬರ ಜೋರಾಗಿದೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲಾದ್ಯಂತ ನಿರ್ಮಾಣವಾಗಿದ್ದ ಮೋಡಕವಿದ ವಾತಾವರಣದಿಂದ ಕಂಗಾಲಾಗಿದ್ದ ಜನರು ಇಂದು ಸುರಿದ ಮಳೆಯಿಂದಾಗಿ ಮತ್ತಷ್ಟು ಚಿಂತೆಗೊಳಗಾಗಿದ್ದಾರೆ.
ರೈತರು ಬೆಳೆ ಸಂರಕ್ಷಣೆ ಮಾಡುವುದು ಹೇಗೆಂದು ಚಿಂತೆಗೆ ಬಿದ್ದಿದ್ದರೇ, ಸಾರ್ವಜನಿಕರು ಮೋಡ, ನಿರಂತರ ತುಂತುರು ಮಳೆ, ಚಳಿಯ ಆರ್ಭಟಕ್ಕೆ ರೋಸಿ ಹೋಗಿದ್ದಾರೆ.
ಹವಾಮಾನ ವೈಪರೀತ್ಯದ ಪರಿಣಾಮ ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದಲ್ಲಿ ಕಳೆದೊಂದು ವಾರದಿಂದ ದಟ್ಟ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಮೋಡಕವಿದ ವಾತಾವರಣದೊಂದಿಗೆ ತೀವ್ರ ಚಳಿಗೆ ಜನರು ತತ್ತರಿಸಿದ್ದಾರೆ. ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದ ಅಲ್ಲಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಲೆನಾಡು ಭಾಗದಲ್ಲಿ ಸದ್ಯ ಭತ್ತ, ಕಾಫಿ, ಅಡಿಕೆ ಕಟಾವಿನಂತಹ ಕೃಷಿ ಚಟುವಟಿಗಳು ಬಿರುಸಿನಿಂದ ನಡೆಯುತ್ತಿದ್ದು, ಹವಾಮಾನ ವೈಪರೀತ್ಯದಿಂದಾಗಿ ಸುರಿಯುತ್ತಿರುವ ಅಕಾಲಿಕ ಮಳೆ ಬೆಳೆ ಕಟಾವು ಹಾಗೂ ಸಂಸ್ಕರಣೆಗೆ ಭಾರಿ ಅಡ್ಡಿಯಾಗುತ್ತಿದೆ.

ಕಳೆದೊಂದು ವಾರದಿಂದ ಮಲೆನಾಡು ಭಾಗದಲ್ಲಿ ಬಿಸಿಲಿನ ವಾತಾವರಣ ಮಾಯವಾಗಿರುವುದರಿಂದ ಅಡಿಕೆ ಬೆಳೆಗಾರರು ಕಟಾವು ಮಾಡಿದ ಅಡಿಕೆಯನ್ನು ಸಂಸ್ಕರಣೆ ಮಾಡಲು ರೈತರು ಪರದಾಡುತ್ತಿದ್ದಾರೆ. ಮಳೆ ಹಾಗೂ ಶೀತ ವಾತಾವರಣದಿಂದಾಗಿ ಅಂಗಳದಲ್ಲಿ ಒಣಗಲು ಹಾಕಿರುವ ಅಡಿಕೆ ಕೊಳೆಯುತ್ತಿದೆ.
ಇನ್ನು ಕಾಫಿ ಬೆಳೆಗಾರರ ಪರಿಸ್ಥಿತಿಯೂ ಇದೇ ಆಗಿದ್ದು, ಕಟಾವು ಮಾಡಿರುವ ಕಾಫಿ ಹಣ್ಣುಗಳು ಕಾಫಿ ಕಣದಲ್ಲಿ ನೀರಿನಿಂದ ತೊಯ್ದು ಮಣ್ಣು ಪಾಲಾಗುತ್ತಿದೆ. ನಿರಂತರ ಮಳೆ ಹಾಗೂ ಮೋಡಕವಿದ ವಾತಾವರಣದಿಂದಾಗಿ ಕಾಫಿ, ಅಡಿಕೆ ಕಟಾವು ಕೆಲಸಕ್ಕೆ ಭಾರಿ ಹಿನ್ನಡೆಯಾಗಿದ್ದು, ಬೆಳೆ ಸಂರಕ್ಷಣೆಗೆ ಬೆಳೆಗಾರರು ಕಸರತ್ತು ಮಾಡುತ್ತಿದ್ದರೂ, ಕಟಾವು ಮಾಡಿದ ಬೆಳೆ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.
ಇನ್ನು ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದಲ್ಲಿ ಸದ್ಯ ಭತ್ತದ ಕಟಾವು, ಸಂಸ್ಕರಣೆ ಕೆಲಸ ಆರಂಭವಾಗಿದ್ದು, ಕಟಾವಿಗೆ ಬಂದಿರುವ ಭತ್ತದ ಬೆಳೆ ಮಳೆಯಿಂದಾಗಿ ಉದುರಿ ಮಣ್ಣು ಪಾಲಾಗುತ್ತಿರುವುದು ಒಂದೆಡೆಯಾದರೇ, ಮತ್ತೊಂದೆಡೆ ಕಟಾವು ಮಾಡಿರುವ ಭತ್ತವನ್ನು ಸಂಸ್ಕರಣೆ ಮಾಡಲು ಅಕಾಲಿಕ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ತೊಂದರೆಯಾಗಿದೆ.












Click it and Unblock the Notifications