ಏತ ನೀರಾವರಿಗೆ ಭೂಮಿ ನೀಡಿದ ರೈತರ ಪರದಾಟ: ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ
ಚಿಕ್ಕಮಗಳೂರು ಜನವರಿ 11: ಏತ ನೀರಾವರಿ ಯೋಜನೆಗಾಗಿ ಜಮೀನು ನೀಡಿ ದಶಕ ಕಳೆದರೂ ಪರಿಹಾರ ಬಂದಿಲ್ಲ. ಜನನಾಯಕರು-ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ಬದುಕು ಬಲು ದುಸ್ತರವಾಗಿದೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ಚಿಕ್ಕಮಗಳೂರಿನ ರೈತರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮಳಲೂರು ಗ್ರಾಮದ ಏತ ನೀರಾವರಿ ಯೋಜನೆಗಾಗಿ ರೈತರು ತಮ್ಮ ಕೃಷಿ ಭೂಮಿಯನ್ನ ಸರ್ಕಾರಕ್ಕೆ ನೀಡಿದ್ದರು. ರೈತರು ಭೂಮಿ ನೀಡಿ ಸುಮಾರು ಒಂದು ದಶಕವೇ ಕಳೆದಿದೆ. ಆದರೆ, ಅರ್ಧಂಬರ್ಧ ರೈತರಿಗೆ ಪರಿಹಾರ ನೀಡಿದ ಸರ್ಕಾರ ಬಹುತೇಕರಿಗೆ ಪರಿಹಾರ ನೀಡಿಲ್ಲ. ಬದಲಿ ಭೂಮಿಯೂ ಇಲ್ಲ. ಹಾಗಾಗಿ, ಕಳೆದೊಂದು ದಶಕದಿಂದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದು ಸುಸ್ತಾದ ರೈತರು ದಯಾಮರಣಕ್ಕೆ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ರೈತರ ಮನವಿ ಪತ್ರ ತಲುಪಿದ ಬಳಿಕ ರಾಷ್ಟ್ರಪತಿ ಕಚೇರಿಯಿಂದ ಕರ್ನಾಟಕ ಸರ್ಕಾರಕ್ಕೆ ಪತ್ರ ಬಂದಿದೆ. ಸರ್ಕಾರದಿಂದ ಜಿಲ್ಲಾಡಳಿತಕ್ಕೂ ಪತ್ರ ಬಂದಿದೆ. ಆದರೆ, ರಾಷ್ಟ್ರಪತಿ ಹಾಗೂ ಸರ್ಕಾರದ ಪತ್ರಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವುದೇ ಬೆಲೆ ನೀಡಿಲ್ಲ. ರಾಷ್ಟ್ರಪತಿಗೆ ಪತ್ರ ಬರೆದಿದ್ದೀರಾ?ಅಲ್ಲೇ ಹೋಗಿ ಕೆಲಸ ಮಾಡಿಸಿಕೊಳ್ಳಿ ಎಂದು ಅಧಿಕಾರಿಗಳು ಉಡಾಫೆಯ ಉತ್ತರ ನೀಡುತ್ತಾರೆ ಎಂದು ರೈತರು ಆರೋಪಿಸಿದ್ದಾರೆ.
ಅಧಿಕಾರಿಗಳ ಬೇಜಾವಾಬ್ದಾರಿಯಿಂದ ನೊಂದಿರುವ ರೈತರು ರಾಷ್ಟ್ರಪತಿಗೆ ಮತ್ತೆ ಪತ್ರ ಬರೆದು ನ್ಯಾಯ ಕೊಡಿಸಿ ಇಲ್ಲವಾದರೆ, ದಯಾಮರಣಕ್ಕೆ ಅನುಮತಿ ನೀಡಿ ಎಂದು ಮನವಿ ಮಾಡಲು ಮುಂದಾಗಿದ್ದಾರೆ. 1998ರಲ್ಲಿ ಈ ಯೋಜನೆಗೆ ಚಾಲನೆ ಸಿಕ್ಕಿದ್ದು. ಸುಮಾರು 1480 ಎಕರೆ ಪ್ರದೇಶಕ್ಕೆ ನೀರು ಒದಗಿಸುವ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ ಜಾಕ್ವೆಲ್, ಇಂಟೆಕ್ವೆಲ್, ಪೈಪ್ಗಳನ್ನು ಅಳವಡಿಸಿದ್ದರು. 2ನೇ ಹಂತದಲ್ಲಿ ಪಂಪ ಅಳವಡಿಕೆ, ವಿದ್ಯುತ್ ಕಾಮಗಾರಿ ಕೂಡ ನಡೆದಿದೆ. ಆದರೆ, ಈಗ ಅದೆಲ್ಲವೂ ಪಾಳುಬಿದ್ದಿದೆ.
ಈ ಯೋಜನೆಗಾಗಿ ಇಲ್ಲಿನ ರೈತರು ಕೃಷಿ ಭೂಮಿಯನ್ನೇ ನೀಡಿದ್ದರು. ಆದರೆ, ಬಹುತೇಕ ರೈತರಿಗೆ ಸರ್ಕಾರದಿಂದ ಪರಿಹಾರ ಬಂದಿಲ್ಲ. ಮಳಲೂರು, ಕಂಬಿಹಳ್ಳಿ, ತಡರೂರು, ಕದ್ರಿಮಿದ್ರಿ ಗ್ರಾಮದ 19 ಎಕರೆ ಭೂಮಿಯನ್ನು ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಈ ಯೋಜನೆ ಅನುಷ್ಠಾನಕ್ಕಾಗಿ ಜಮೀನು ಕಳೆದುಕೊಂಡ ರೈತರು ಇಂದು ನಿರ್ಗತಿಕರಾಗಿದ್ದಾರೆ.
ರೈತರಿಗೆ ಮಕ್ಕಳ ವಿದ್ಯಾಭ್ಯಾಸ ನೀಡಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಭೂಮಿಗೆ ನಮಗೆ ಪರಿಹಾರ ಕೊಡಿ, ನಮ್ಮ ಬದುಕು ನಾವು ನೋಡಿಕೊಳ್ಳುತ್ತೇವೆ ಅಂದರೆ ಸರ್ಕಾರ ಪರಿಹಾರ ನೀಡದ ಕಾರಣ ರೈತರು ಮತ್ತೆ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.