Datta Jayanti : ದತ್ತ ಜಯಂತಿ ಆಚರಣೆಗೆ ಅನುಮತಿ ನೀಡಿದ ಹೈಕೋರ್ಟ್
ಬೆಂಗಳೂರು, ನವೆಂಬರ್ 30; ಕರ್ನಾಟಕ ಹೈಕೋರ್ಟ್ ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ದತ್ತ ಪೀಠದಲ್ಲಿ ದತ್ತ ಜಯಂತಿ ಆಚರಣೆ ಮಾಡಲು ಅನುಮತಿ ನೀಡಿದೆ. ಡಿಸೆಂಬರ್ 6, 7, 8ರಂದು ದತ್ತ ಜಯಂತಿ ನಡೆಯಲಿದೆ.
ಬುಧವಾರ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿತು.

ದತ್ತ ಪಾದುಕೆಗೆ ಪೂಜೆ ಸಲ್ಲಿಸಲು ಮತ್ತು ಭಕ್ತ ಸಮುದಾಯ ದತ್ತ ಜಯಂತಿ ಆಚರಣೆ ಮಾಡಲು ಅನುಮತಿ ನೀಡಿದೆ. ಈಗಾಗಲೇ ಚಿಕ್ಕಮಗಳೂರು ಶಾಸಕ ಸಿ. ಟಿ. ರವಿ ಸೇರಿದಂತೆ ನೂರಾರು ಜನರು ದತ್ತಮಾಲೆ ಧರಿಸಿದ್ದಾರೆ.
ಹಿಂದೂ, ಮುಸ್ಲಿಂ ಸದಸ್ಯರ ಸಮಿತಿಯಿಂದ ಅರ್ಚಕ, ಮುಜಾವರ್ ನೇಮಕ ಮಾಡಲಾಗಿದೆ. ಪ್ರತಿದಿನ ಎರಡೂ ಸಮುದಾಯದವರು ಪೂಜೆ ಸಲ್ಲಿಸುತ್ತಾರೆ. ಆದ್ದರಿಂದ ದತ್ತ ಜಯಂತಿಗೆ ಅನುಮತಿ ನೀಡಲು ಮನವಿ ಸಲ್ಲಿಸಲಾಗಿತ್ತು.
ಕರ್ನಾಟಕ ಹೈಕೋರ್ಟ್ನಲ್ಲಿ ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ದತ್ತ ಜಯಂತಿ ಆಚರಣೆ ಮಾಡಲು ಕೋರ್ಟ್ ಒಪ್ಪಿಗೆ ನೀಡಿದೆ. ಅರ್ಜಿ ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿದೆ.
ಕಳೆದ ವಾರ ಕರ್ನಾಟಕ ಹೈಕೋರ್ಟ್ ಬಾಬಾ ಬುಡನ್ಗಿರಿಯ ದತ್ತಾತ್ರೇಯ ಪೀಠ ವಿವಾದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 5ರಂದು ಯಥಾಸ್ಥಿತಿ ಕಾಯ್ದುಕೊಳ್ಳವಂತೆ ಆದೇಶ ನೀಡಿತ್ತು. ಕೋರ್ಟ್ ಮುಂದೆ ಮೆಮೋ ಸಲ್ಲಿಸಿದ್ದ ಸರ್ಕಾರ ಇಸ್ಲಾಂ ಮತ್ತು ಹಿಂದೂ ಧರ್ಮಗಳ ಸಂಪ್ರದಾಯಗಳಂತೆ ಪೂಜಾ ವಿಧಿ ವಿಧಾನ ನೆರವೇರಿಸಲು ಅವಕಾಶ ನೀಡಲು ನಿರ್ಣಯ ಕೈಗೊಂಡಿದೆ ಎಂದು ಹೇಳಿತ್ತು.
ಅಲ್ಲದೇ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಸಂಪುಟ ಉಪ ಸಮಿತಿಯ ವರದಿ ಆಧರಿಸಿ ದತ್ತಾತ್ರೇಯ ಪೀಠದಲ್ಲಿ ಇಸ್ಲಾಂ ಮತ್ತು ಹಿಂದೂ ಸಂಪ್ರದಾಯಗಳಂತೆ ಪೂಜಾ ವಿಧಿವಿಧಾನ ನೇರವೇರಿಸುವುದಕ್ಕೆ ನಿರ್ಣಯ ಕೈಗೊಂಡಿತ್ತು.












Click it and Unblock the Notifications