ನಾನೇ ಯಡಿಯೂರಪ್ಪ ಮಾನಸಪುತ್ರ: ನನಗೂ ಸಚಿವ ಸ್ಥಾನ ಬೇಕು
Recommended Video
ಚಿಕ್ಕಮಗಳೂರು, ಡಿಸೆಂಬರ್.09: ರಾಜ್ಯದಲ್ಲಿ ನಡೆದ ಮಿನಿ ಸಮರದ ಫಲಿತಾಂಶ ಹೊರ ಬಿದ್ದಿದ್ದೇ ತಡ. ಸರ್ಕಾರದಲ್ಲಿ ನನಗೂ ಒಂದು ಮಿನಿಸ್ಟರ್ ಸೀಟ್ ಕೊಡಿ ಅಂತಾ ಹೇಳುವವರ ಸರದಿ ಶುರುವಾಗಿದೆ. ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಬಿಜೆಪಿ ಶಾಸಕರು ಹೇಳುತ್ತಿದ್ದಾರೆ.
ಒಂದು ಕಡೆ ಉಪ ಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ನೀಡುವುದು ಪಕ್ಕಾ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಇದರ ಮಧ್ಯೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ನನಗೂ ಒಂದು ಅವಕಾಶ ನೀಡಿ ಎಂಬ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಈ ಬಾರಿ ನಡೆಯುವ ಸಂಪುಟ ವಿಸ್ತರಣೆ ವೇಳೆ ನನಗೂ ಒಂದು ಸಚಿವ ಸ್ಥಾನ ನೀಡುವ ಭರವಸೆ ಇದೆ ಎಂದು ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಪ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಸೇಫ್ ಆಗಿದೆ. ಅನರ್ಹಗೊಂಡು ಬಿಜೆಪಿ ಸೇರಿದವರ ಪೈಕಿ ಬಹುತೇಕರು ಗೆಲುವಿನ ನಗೆ ಬೀರಿದ್ದಾರೆ. ಇದರಿಂದ ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಸ್ವತಃ ಬಿಎಸ್ ವೈ ಭರವಸೆ ನೀಡಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ನಾನು ಅವರ ಮನಸ್ಸಿನಲ್ಲಿ ಇದ್ದೇನೆ. ಕೆಲವರು, ನಾನು ಯಡಿಯೂರಪ್ಪರ ಮಾನಸ ಪುತ್ರ ಅಂತಾ ಹೇಳಿಕೊಳ್ಳಿತ್ತಿದ್ದಾರೆ. ಆದರೆ, ನಾನು ಯಡಿಯೂರಪ್ಪರ ನಿಜವಾದ ಮಾನಸ ಪುತ್ರ. ಹೀಗಾಗಿ ಯಡಿಯೂರಪ್ಪ ಈ ಬಾರಿಯಾದರೂ ನನಗೆ ಸಚಿವ ಸ್ಥಾನ ಕೊಡುತ್ತಾರೆ ಎಂಬ ನಂಬಿಕೆಯಿದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications