ಹೊರನಾಡಿಗೆ ಹೋಗುವ ಎರಡೂ ಮಾರ್ಗ ಬಂದ್
ಚಿಕ್ಕಮಗಳೂರು ಆಗಸ್ಟ್ 9: ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆ ಅಸ್ತವ್ಯಸ್ತವಾಗಿದೆ. ಹಲವೆಡೆ ರಸ್ತೆ, ರೈಲು ಸಂಪರ್ಕಗಳೂ ಕಡಿತಗೊಂಡಿವೆ.
ಚಿಕ್ಕಮಗಳೂರಿನ ಹೊರನಾಡಿನದ್ದೂ ಇದೇ ಕಥೆಯಾಗಿದೆ. ಹೊರನಾಡಿನಲ್ಲಿ ಅನ್ನಪೂರ್ಣೇಶ್ವರಿ ದರ್ಶನ ಪಡೆಯಲು ಈಗ ಅಸಾಧ್ಯವಾಗಿದೆ.
ಚಿಕ್ಕಮಗಳೂರಿನ ಮಳೆ ಚಿತ್ರ: ಜೋರು ಮಳೆ, ಭೂಕುಸಿತ, ಎಲ್ಲೆಲ್ಲೂ ನೀರು...
ಎರಡು ದಿನದಿಂದ ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಕುದುರೆಮುಖ, ಕಳಸ, ಸಂಸೆ ಭಾಗದಲ್ಲಿ ಭಾರೀ ಮಳೆ ಮುಂದುವರೆದಿದ್ದು, ಕಳಸ - ಹೊರನಾಡು ಸಂಪರ್ಕ ಸೇತುವಾಗಿರುವ ಇಲ್ಲಿ ನೀರು ತಗ್ಗುವ ಯಾವ ಸೂಚನೆಯೂ ಕಾಣುತ್ತಿಲ್ಲ. ಮಳೆ ಕಡಿಮೆಯಾಗದೇ ಈ ಸೇತುವೆ ಮೇಲೆ ಓಡಾಟ ಅಸಾಧ್ಯ. ಹೀಗಾಗಿ ಒಂದು ಕಡೆಯಿಂದ ಹೊರನಾಡು ತಲುಪುವ ಸಂಪರ್ಕ ಬಂದ್ ಆಗಿದೆ.
ಭದ್ರಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಇದರಿಂದ ರಸ್ತೆ ಕುಸಿತವಾಗಿ ಹೊರನಾಡಿಗೆ ಹೋಗಲು ಇರುವ ಇನ್ನೊಂದು ಮಾರ್ಗವಾದ ಹಳುವಳ್ಳಿ ಮಾರ್ಗವೂ ಸ್ಥಗಿತವಾಗಿದೆ. ಭೂಕುಸಿತದಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ಬಾಳೆಹೊನ್ನುರು, ಕಳಸದಿಂದ ಹೊರನಾಡಿಗೆ ಇರುವ ಪ್ರತ್ಯೇಕ ಮಾರ್ಗವೂ ಇಲ್ಲದಂತಾಗಿದೆ.
ಅಪಾಯದ ಸೂಚನೆ; ಮಧ್ಯದಲ್ಲೇ ನಿಂತ ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್
ಹೀಗಾಗಿ, ಹೊರನಾಡು ಸಂಪರ್ಕ ಸಂಪೂರ್ಣ ಕಡಿತಗೊಂಡು ದೇವಿ ಅನ್ನಪೂರ್ಣೇಶ್ವರಿ ದರ್ಶನವೂ ಅಸಾಧ್ಯವಾಗಿದೆ. ರಸ್ತೆ ಸಂಪರ್ಕವಿಲ್ಲದೆ ನೂರಾರು ಪ್ರವಾಸಿಗರು ಪರದಾಡುತ್ತಿದ್ದು, ಇನ್ನಷ್ಟು ಪ್ರವಾಸಿಗರು ದೇವಾಲಯದಲ್ಲೇ ಉಳಿದುಕೊಂಡಿದ್ದಾರೆ.