ಚಿಕ್ಕಮಗಳೂರಿನಲ್ಲಿ ಭಾರೀ ಮಳೆ; ಅವಾಂತರ ಸೃಷ್ಟಿಸಿದ ಮಳೆರಾಯ
ಚಿಕ್ಕಮಗಳೂರು, ಜುಲೈ 24: ಹಲವು ದಿನಗಳಿಂದ ಕೈಕೊಟ್ಟಿದ್ದ ಮಳೆ ಗುರುವಾರ ಬಯಲು ಸೀಮೆಯಲ್ಲಿ ಅವಾಂತರವನ್ನೇ ಸೃಷ್ಟಿಸಿದೆ. ಪುಷ್ಯ ಮಳೆ ಮಧ್ಯಾಹ್ನ ದಿಢೀರನೆ ಸುರಿದು ಅವಾಂತರಗಳಿಗೆ ಕಾರಣವಾಗಿದೆ.
Recommended Video
ಮಧ್ಯಾಹ್ನ ಸುಮಾರಿಗೆ ಸಣ್ಣ ಹನಿಯ ರೂಪದಲ್ಲಿ ಆರಂಭವಾದ ಮಳೆ ನಂತರ ರಭಸಗೊಂಡು ಗಾಳಿಯ ವೇಗವೂ ಹೆಚ್ಚಾಗಿ ಪಟ್ಟಣದ ಹಲವು ಕಡೆ ಗಿಡ ಮರಗಳು ಧರೆಗೆ ಉರುಳಿವೆ.
ತಗ್ಗು ಪ್ರದೇಶದ ನೂರಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಗೃಹೋಪಯೋಗಿ ವಸ್ತುಗಳೆಲ್ಲ ನೀರಿನಲ್ಲಿ ತೇಲಾಡಿವೆ. ಜೊತೆಗೆ ಗಾಳಿಯ ರಭಸವೂ ಹೆಚ್ಚಿದ್ದರಿಂದ ಹಲವು ಮನೆಯ ಮೇಲಿನ ನೀರಿನ ಟ್ಯಾಂಕ್, ಶೀಟ್ ಮತ್ತಿತರ ವಸ್ತುಗಳು ಗಾಳಿಗೆ ಹಾರಿ ಹೋಗಿವೆ.

ಪಟ್ಟಣದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ 5 ಅಡಿ ಎತ್ತರಕ್ಕೆ ನೀರು ನಿಂತಿದ್ದು, ಜನರು ಓಡಾಡುವ ಮಾತಿರಲಿ, ವಾಹನಗಳೇ ಸಂಚರಿಸಲಾರದಂತಹ ಸ್ಥಿತಿ ನಿರ್ಮಾಣವಾಯಿತು. ಅಂತಹ ನೀರಿನಲ್ಲೂ ಕೆಲವು ವಾಹನ ಸವಾರರು ವಾಹನ ಚಲಾಯಿಸಿದ್ದ ಪರಿಣಾಮ ಕೆಲವು ವಾಹನಗಳು ಅಲ್ಲೇ ಕೆಟ್ಟು ನಿಂತವು.
ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಎದುರಿನ ನಂಜುಂಡೇಶ್ವರ ಲಾಡ್ಜ್ ಕಟ್ಟಡದ ಮೇಲಿದ್ದ ಮೊಬೈಲ್ ಟವರ್ ಗಾಳಿಯ ರಭಸಕ್ಕೆ ಮಗುಚಿ ಬಿದ್ದಿದೆ. ಕಟ್ಟಡದ ಮೇಲೆ ಟವರ್ ಗೆ ಹಾಕಿದ್ದ ಅಡಿಪಾಯ ಗಟ್ಟಿಯಾಗಿದ್ದರಿಂದ ಅದೃಷ್ಟವಶಾತ್ ಟವರ್ ಕಟ್ಟಡದ ಒಂದು ಮಗ್ಗುಲಿಗೆ ಹಾಗೆಯೇ ವಾಲಿಕೊಂಡು ಜೋತು ಬಿದ್ದಿದೆ. ಒಂದು ವೇಳೆ ಟವರ್ ನಿಲ್ದಾಣದ ಮುಂದಿನ ರಸ್ತೆಗೆ ಬಿದ್ದಿದ್ದರೆ ಭಾರಿ ಅನಾಹುತವಾಗುತ್ತಿತ್ತು. ಕೆಲವು ಬಡಾವಣೆಗಳಲ್ಲಿ ಮರಗಳು ಉರುಳಿ ಬಿದ್ದಿವೆ.
ಒಟ್ಟಿನಲ್ಲಿ ಪುಷ್ಯಮಳೆ ಆರಂಭವಾಗಿ 5ನೇ ದಿನವಾದ ಇಂದು ಇಡೀ ಕಡೂರು ಪಟ್ಟಣವನ್ನೇ ಅಲ್ಲೋಲ್ಲ ಕಲ್ಲೋಲ ಮಾಡಿದೆ.












Click it and Unblock the Notifications