ಡಿಕೆಶಿ ಸಿಎಂ ಆಗುವಂತೆ ಆಶೀರ್ವದಿಸಿ, ವಿನಯ್ ಗುರೂಜಿಗೆ ಶಾಸಕ ತಮ್ಮಯ್ಯ ಮನವಿ
ಚಿಕ್ಕಮಗಳೂರು, ಜೂನ್ 18: ನಾವು ಬೇರೆ ಏನನ್ನೂ ಕೇಳುವುದಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಒಮ್ಮೆ ಇಲ್ಲಿಗೆ ಕರೆದುಕೊಂಡು ಬರುತ್ತೇವೆ. ಅವರಿಗೆ ಸಿಎಂ ಆಗುವಂತೆ ಆಶೀರ್ವದಿಸಿ ಎಂದು ಚಿಕ್ಕಮಗಳೂರು ಕಾಂಗ್ರೆಸ್ ಶಾಸಕ ಹೆಚ್.ಡಿ.ತಮ್ಮಯ್ಯ ವಿನಯ್ ಗುರೂಜಿ ಬಳಿ ಮನವಿ ಮಾಡಿದ್ದಾರೆ.
ಜಿಲ್ಲೆಯ ಕೊಪ್ಪ ತಾಲೂಕಿನ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವ ಆಸೆಯನ್ನು ನೂರಾರು ಜನರ ಮುಂದೆ ಹೊರಹಾಕಿದ್ದಾರೆ.

ವಿನಯ್ ಗುರೂಜಿ ಬಳಿ ವೇದಿಕೆ ಮೇಲೆಯೇ ಮನವಿ ಮಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ, ಡಿ.ಕೆ. ಶಿವಕುಮಾರ್ ನಮಗೆಲ್ಲ ಟಿಕೆಟ್ ನೀಡಿ ತುಂಬಾ ಸಹಾಯ ಮಾಡಿದ್ದಾರೆ. ಅವರನ್ನು ಒಮ್ಮೆ ಇಲ್ಲಿಗೆ ಕರೆದುಕೊಂಡು ಬರುತ್ತೇವೆ. ಅವರಿಗೆ ಸಿಎಂ ಆಗುವಂತೆ ಆಶೀರ್ವದಿಸಿ ಎಂದು ಅವಧೂತ ವಿನಯ್ ಗುರೂಜಿ ಬಳಿ ಮನವಿ ಮಾಡಿದ್ದಾರೆ.
ಇದೇ ವೇಳೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ಮಾತನಾಡಿ, ಅವಧೂತ ವಿನಯ್ ಗುರೂಜಿ ಮೂರು ಉಂಗುರ ಮಾಡಿಸಿದ್ದರು. 2018ರಲ್ಲಿ ಒಂದನ್ನು ಕುಮಾರಸ್ವಾಮಿಗೆ ಕೊಟ್ಟಿದ್ದರು. ಮತ್ತೊಂದನ್ನ ಯಡಿಯೂರಪ್ಪನವರಿಗೆ ನೀಡಿದ್ದರು. ಇಬ್ಬರೂ ಸಿಎಂ ಆಗಿದ್ದರು. ಉಳಿದೊಂದು ಉಂಗುರವನ್ನ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದ್ದಾರೆ. ಇದಕ್ಕೆ ನಾನೇ ಸಾಕ್ಷಿ. ನಾನು ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಹೆಚ್.ಡಿ.ಕುಮಾರಸ್ವಾಮಿಯವರು ಸಿಎಂ ಆಗುವುದಿಲ್ಲವಾ ಎಂದು ಕೇಳಿದ್ದಕ್ಕೆ ಇಲ್ಲ...ಇಲ್ಲ.... ಬರುವುದಿಲ್ಲ. ಡಿಕೆಶಿ ಸರ್ಕಾರ ಬರುವುದು ಎಂದು ಹೇಳಿದ್ದರು ಎಂದರು.

ಇನ್ನು ಹೆಚ್.ಡಿ.ತಮ್ಮಯ್ಯ ಹಾಗೂ ಶರವಣ ಅವರ ಮನವಿಯನ್ನು ಪುರಸ್ಕರಿಸಿದ ಅವಧೂತ ವಿನಯ್ ಗುರೂಜಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಶಾಸಕ ತಮ್ಮಯ್ಯ ಮನವಿ ಮಾಡಿದ್ದು, ಅವರ ಆ ಬಯಕೆ ಈಡೇರಿಕೆಯ ದಿನ ದೂರ ಇಲ್ಲ. ಡಿ.ಕೆ.ಶಿವಕುಮಾರ್ ಮಗುವಿನಂತಹ ಮನಸ್ಸಿನವರು. ಅವರು ಮಠಕ್ಕೆ ಚಿರಪರಿಚಿತರು. ದೇವರುಗಳು ಇರುವುದೇ ಬಂಡೆಯ ಮೂರ್ತಿಯಲ್ಲಿ. ನಾವು ಮೊದಲು ಅದನ್ನು ಕರೆಯುವುದೇ ಬಂಡೆ ಎಂದು. ಬಂಡೆಯೊಳಗೊಂದು ಮುಗ್ಧ ಮನಸ್ಸು ಎಂದು ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಭವಿಷ್ಯವನ್ನು ಅವಧೂತ ವಿನಯ್ ಗುರೂಜಿ ಕೂಡ ನುಡಿದಿದ್ದು, ಡಿ.ಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ.












Click it and Unblock the Notifications