ವಿದೇಶದಲ್ಲಿ ಸಿಲುಕಿದವರು ಶೀಘ್ರವೇ ತವರಿಗೆ : ಸಿ.ಟಿ.ರವಿ
ಚಿಕ್ಕಮಗಳೂರು, ಮೇ 08: ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಶಿಪ್ ಹಾಗೂ ಏರ್ ಲಿಫ್ಟ್ ಮೂಲಕ ಭಾರತಕ್ಕೆ ಕರೆತರಲು ಪ್ರಯತ್ನಿಸಲಾಗುತ್ತಿದ್ದು, ಈ ಸಂಬಂಧ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಪ್ರವಾಸೋದ್ಯಮ, ಕ್ರೀಡಾ ಮತ್ತು ಕನ್ನಡ ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದರು.
Recommended Video
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, "37 ದೇಶಗಳ ಕನ್ನಡ ಸಂಘಟನೆಗಳ ಜೊತೆ ಚರ್ಚೆ ನಡೆಸಲಾಗಿದೆ. ವಿದ್ಯಾರ್ಥಿಗಳು, ಬೇರೆ ಬೇರೆ ಕಾರಣಗಳಿಗೆ ವಿದೇಶಕ್ಕೆ ಪ್ರಯಾಣ ಬೆಳಸಿದವರು ಹಾಗೂ ಬ್ಲೂ ಕಾಲರ್ ವರ್ಕರ್ಸ್ ಗಳು ವಿದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಇವರನ್ನು ತವರಿಗೆ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ನೋಡಲ್ ಆಫಿಸರ್ ಮೀನಾ ನಾಗರಾಜ್ ಜೊತೆ ಮತ್ತೋರ್ವ ಐಪಿಎಸ್ ಆಫೀಸರ್ ನೇಮಕ ಮಾಡಲಾಗಿದ್ದು ಈಗಾಗಲೇ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು.
ದುಬೈ, ಸೌದಿ ಅರೇಬಿಯಾದಲ್ಲಿ ಸಿಲುಕಿರುವವರನ್ನು ಶಿಪ್ ಮೂಲಕ ಉಚಿತವಾಗಿ ಕರೆಸಿಕೊಳ್ಳಲಾಗುವುದು. ಉಳಿದಂತೆ ಬೇರೆ ಬೇರೆ ದೇಶದಲ್ಲಿ ಸಿಲುಕಿರುವವರನ್ನು ರಿಯಾಯಿತಿ ದರದಲ್ಲಿ ಕರೆತರಲಾಗುವುದು. ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆಗೂ ಚರ್ಚೆ ನಡೆಸಲಾಗಿದೆ ಎಂದರು.

ವಿದೇಶದಿಂದ ಕರೆತರುವವರನ್ನು ಕ್ವಾರಂಟೈನ್ ಷರತ್ತಿನ ಮೇಲೆ ತವರಿಗೆ ಕರೆತರುತ್ತಿದ್ದು, ಪ್ರಥಮ ಹಂತದಲ್ಲಿ 14 ದಿನ, ಎರಡನೇ ಹಂತದಲ್ಲಿ 14 ದಿನ ಸೇರಿದಂತೆ 28 ದಿನ ಕ್ವಾರಂಟೈನ್ ನಲ್ಲಿ ಇಟ್ಟು ನಂತರ ಮತ್ತೆ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ ಎಂದರು. ಇನ್ನು ಆದ್ಯತೆಯ ಮೇರೆಗೆ ಮೊದಲನೇ ಹಂತದಲ್ಲಿ ವೃದ್ಧರು, ಗರ್ಭೀಣಿಯರನ್ನು ಕರೆತರಲಾಗುವುದು ಎಂದರು.
ಕಾಫಿ ನಾಡಿನ ವಲಸೆ ಕಾರ್ಮಿಕರಿಗೆ ಸ್ಪಂದಿಸಿದ ಸಚಿವರು: ಲಾಕ್ ಡೌನ್ ಮೊದಲನೇ ಹಂತದಲ್ಲಿ ರಾಜ್ಯಕ್ಕೆ ಕಾಲ್ನಡಿಗೆಯಲ್ಲಿ ಬರುತ್ತಿದ್ದ ಚಿಕ್ಕಮಗಳೂರು ಮೂಲದ 10 ಕಾರ್ಮಿಕರನ್ನು ಮಹಾರಾಷ್ಟ್ರದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ನಂತರ ಕ್ವಾರಂಟೈನ್ ಮುಗಿಸಿ ರಾಜ್ಯದತ್ತ ಬರುತ್ತಿರುವ ಚಿಕ್ಕಮಗಳೂರು ಜಿಲ್ಲೆಯ 10 ಜನ ಕಾರ್ಮಿಕರು ಸೇರಿದಂತೆ 14 ಜನರನ್ನು ವಿಜಯಪುರ ಗಡಿಯಲ್ಲಿ ತಡೆಯಲಾಗಿದ್ದು ಕಾರ್ಮಿಕರು ಇಂಡಿ ತಾಲೂಕಿನ ತಕಾಲಿ ಭೀಮಾ ನದಿಯ ಸೇತುವೆಯ ಕೆಳಗೆ ವಾಸ್ತವ್ಯ ಹೂಡಿ ಊಟ ತಿಂಡಿ ಪರದಾಡುವಂತಾಗಿತ್ತು.
ಈ ಬಗ್ಗೆ ಇಂದು ಬೆಳಿಗ್ಗೆ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಮೂಲಕ ಪಾಸ್ ನೀಡಿ ಅವರನ್ನು ಕರೆಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ನಾಳೆ ಅವರು ತವರಿಗೆ ಬರಲಿದ್ದಾರೆ ಎಂದರು.












Click it and Unblock the Notifications