ನಮ್ಮ ಸ್ಥಿತಿ ನೋಡಿ ಎಂದು ಗೋಳಾಡಿದ ಸಂತ್ರಸ್ತ; ತುಟಿ ಬಿಚ್ಚಲಿಲ್ಲ ಸಿಎಂ
ಚಿಕ್ಕಮಗಳೂರು, ಆಗಸ್ಟ್ 27: ಚಿಕ್ಕಮಗಳೂರಿನ ನೆರೆಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಭೇಟಿ ನೀಡಿ ಪ್ರವಾಹ ಪೀಡಿತ ಗ್ರಾಮಗಳ ಪರಿಶೀಲನೆಗೆ ಹೊರಟಿದ್ದರು.
ಇದೇ ಸಂದರ್ಭ ಮಲೆಮನೆ ಗ್ರಾಮಕ್ಕೂ ಪ್ರವಾಹದ ಪರಿಶೀಲನೆಗೆ ಸಿಎಂ ಹಾಗೂ ಅವರ ತಂಡ ಹೊರಟಿದ್ದ ಸಂದರ್ಭ ದಾರಿ ಮಧ್ಯೆ ಮೇಗೂರು ಗ್ರಾಮದ ಸಂತ್ರಸ್ತ ಜಯಂತ್, ಕಣ್ಣೀರು ಹಾಕಿ ತಮ್ಮ ಸ್ಥಿತಿ ನೋಡುವಂತೆ ಗೋಗರೆದರು.
ಅಧಿಕಾರದ ಕಿತ್ತಾಟ... ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ...!
ಮಳೆ, ಪ್ರವಾಹದಿಂದಾಗಿ ಮನೆ, ಜಮೀನು ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿರುವುದಾಗಿ ಹೇಳಿಕೊಂಡರು. ಮುಂದೇನು ಮಾಡುವುದೇ ತೋಚದಾಗಿದೆ, ಏನಾದರೂ ದಾರಿ ಮಾಡಲೇಬೇಕು ಎಂದು ಬೇಡಿಕೊಂಡರು. ನಮ್ಮ ಸ್ಥಿತಿಯನ್ನು ನೋಡಿ ಎಂದು ಕಣ್ಣೀರಿಟ್ಟು ಗೋಳಾಡಿದರು.
ಆದರೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಸಿಎಂ ಯಡಿಯೂರಪ್ಪನವರು ಏನನ್ನೂ ಮಾತನಾಡಲಿಲ್ಲ. ಒಂದು ಮಾತನ್ನೂ ಆಡದೇ ಅಲ್ಲಿಂದ ಹಾಗೇ ಹಿಂತಿರುಗಿದರು. ಎಷ್ಟೇ ಅಳುತ್ತಿದ್ದರೂ ಸಮಾಧಾನಕ್ಕಾದರೂ ಒಂದು ಮಾತು ಆಡಲಿಲ್ಲ. ಮೌನವಾಗೇ ನೋಡಿ, ತರಾತುರಿಯಲ್ಲಿ ಕೇವಲ ರಸ್ತೆ ಬದಿ ನಿಂತು ಹತ್ತೇ ನಿಮಿಷದಲ್ಲಿ ಪ್ರವಾಸ ಮುಗಿಸಿದರು.
ಲಕ್ಷ್ಮಣ ಸವದಿಗೆ ಯಾಕೆ ಡಿಸಿಎಂ ಹುದ್ದೆ ಕೊಟ್ರು, ಕಾರಣ ಬಹಿರಂಗ
"ಇದೇ ತರ ಬೇರೆ ಕಡೆನೂ ಆಗಿದೆ ಬಿಡಪ್ಪ" ಎಂದು ಹಾರಿಕೆ ಉತ್ತರ ಕೊಟ್ಟರು ಸಂಸದೆ ಶೋಭಾ. ಆದರೆ ಯಡಿಯೂರಪ್ಪನವರ ಈ ನಡೆಗೆ ಗ್ರಾಮಸ್ಥರು ಗರಂ ಆಗಿದ್ದಾರೆ. ಪ್ರವಾಹ ಪರಿಶೀಲನೆ ವೇಳೆ ತಮ್ಮ ಸ್ಥಿತಿ ನೋಡಿ ಸಿಎಂ ಸಾಂತ್ವನ ಹೇಳುತ್ತಾರೆ ಎಂದು ನಿರೀಕ್ಷಿಸಿದ್ದ ಜನರಲ್ಲಿ ಯಡಿಯೂರಪ್ಪನವರು ಮೌನವಾಗಿ ಹಿಂದಿರುಗಿದ್ದು, ಆಕ್ರೋಶ ತಂದಿತ್ತು.