ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಅಕ್ರಮ ಆಸ್ತಿಗಳಿಕೆ ಆರೋಪ: ತನಿಖೆಗೆ ಒತ್ತಾಯ
ಚಿಕ್ಕಮಗಳೂರು, ನವೆಂಬರ್ 23: ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅಕ್ರಮ ಆಸ್ತಿ ಸಂಪಾದಿಸಿದ್ದರೆಂಬ ಆರೋಪ ಕೇಳಿ ಬಂದಿದ್ದು, ಬೆಂಗಳೂರು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಆದರೆ, ಇದುವರೆಗೂ ಎಫ್ಐಆರ್ ಆಗಿಲ್ಲ. ತಕ್ಷಣ ಎಫ್ಐಆರ್ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಆಗ್ರಹಿಸಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು 200 ಕೋಟಿ ಆಸ್ತಿ ಹೊಂದಿದ್ದು, 13 ಕೋಟಿ ಮುದ್ರಾಂಕ ಶುಲ್ಕ ಹಾಗೂ 60 ಕೋಟಿ ಆದಾಯ ತೆರಿಗೆ ಕಟ್ಟದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ಶಾಸಕ ಟಿ.ಡಿ.ರಾಜೇಗೌಡ ಅಕ್ರಮ ಆಸ್ತಿ ಹೊಂದಿರುವ ಸಂಬಂಧ ಕೊಪ್ಪ ತಾಲ್ಲೂಕಿನ ವಿಜಯಾನಂದ ಎಂಬುವರು ಬೆಂಗಳೂರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದಾರೆ. ದೂರು ದಾಖಲಾಗಿದ್ದು, ಪ್ರಥಮ ವರ್ತಮಾನ ವರದಿ ದಾಖಲಾಗಬೇಕಿದೆ ಎಂದು ತಿಳಿಸಿದರು.
ಆನೆ ದಾಳಿಗೆ ಒಳಗಾಗಿ ಸಾವನ್ನಪ್ಪಿದವರಿಗೆ 15 ಲಕ್ಷ ರೂ ಪರಿಹಾರ: ಬಸವರಾಜ ಬೊಮ್ಮಾಯಿ
ಬಾಳೆಹೊನ್ನೂರು ಹೋಬಳಿ ಹಲಸೂರಿನಲ್ಲಿ 211 ಎಕರೆ ಜಾಮೀನನ್ನು ಶಾಸಕ ಟಿ.ಡಿ.ರಾಜೇಗೌಡ ತಮ್ಮ ಪತ್ನಿ ಮತ್ತು ಮಗನ ಹೆಸರಿನಲ್ಲಿ ಖರೀದಿಸಿದ್ದಾರೆ. ಶಭಾನ್ ರಂಜಾನ್ ಟ್ರಸ್ಟ್ನಲ್ಲಿ ನಾಲ್ಕು ಮಂದಿ ಪಾಲುದಾರರಿದ್ದು, ಟ್ರಸ್ಟ್ನಲ್ಲಿ ಇಬ್ಬರು ನಿವೃತ್ತಿ ಹೊಂದುತ್ತಿದ್ದಂತೆ ಶಾಸಕರ ಪತ್ನಿ ಪಾಲುದಾರರಾಗುತ್ತಾರೆ. ಕೆಲವು ದಿನಗಳ ಬಳಿಕ ಮತ್ತಿಬ್ಬರು ನಿವೃತ್ತಿ ಹೊಂದಿದ್ದು, ಶಾಸಕರ ಮಗ ರಾಜ್ದೇವ್ 9 ದಿನಗಳಲ್ಲಿ ಟ್ರಸ್ಟ್ ಒಳಪ್ರವೇಶಿಸುತ್ತಾರೆ. ತಾಯಿ ಮತ್ತು ಮಗ ಶೇ.50ರಷ್ಟು ಪಾಲುದಾರರಾಗುತ್ತಾರೆಂದು ಹೇಳಿದರು.
ಅಂದಾಜು 200 ಕೋಟಿ ಆಸ್ತಿ ಸ್ವಾಧೀನಕ್ಕೆ ಪಡೆಯಲು ಕ್ರಯಪತ್ರ ಇತರೆ ದಾಖಲಾತಿ ಸೇರಿ 13ಕೋಟಿ ಮುದ್ರಾಂಕ ಶುಲ್ಕ ಪಾವತಿಸಬೇಕು. 60 ಕೋಟಿಗೂ ಹೆಚ್ಚು ಆದಾಯ ತೆರಿಗೆ ಪಾವತಿಸಬೇಕು. ಇದನ್ನು ಪಾವತಿಸದೇ ಸರ್ಕಾರದ ಬೊಕ್ಕಸಕ್ಕೆ ಮತ್ತು ಆದಾಯ ತೆರಿಗೆ ಇಲಾಖೆಗೆ ವಂಚಿಸಲಾಗಿದೆ ಎಂದು ದೂರಿದರು.
ಶಾಸಕರ ಮೇಲೆ ಆರೋಪ ಕೇಳಿ ಬಂದಿದ್ದು, ಶಾಸಕರು ಇದಕ್ಕೆ ಇದುವರೆಗೂ ಸ್ಪಷ್ಟನೆ ನೀಡಿಲ್ಲ. ಅವರು ಸಾರ್ವಜನಿಕ ಜೀವನದಲ್ಲಿದ್ದು, ಈ ಆರೋಪಕ್ಕೆ ಸ್ಪಷ್ಟೀಕರಣ ನೀಡಬೇಕು. ಹಾಗೂ ಲೋಕಾಯುಕ್ತ ಸಂಸ್ಥೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.