ಯಡಿಯೂರಪ್ಪನವರ ಬಗ್ಗೆ ತುಟಿ ಬಿಚ್ಚಬೇಡಿ ಎಂದ ಶೋಭಾ ಕರಂದ್ಲಾಜೆ
Recommended Video
ಚಿಕ್ಕಮಗಳೂರು, ಆಗಸ್ಟ್ 8: "ಯಡಿಯೂರಪ್ಪ ಎಲ್ಲೀದಿಯಪ್ಪ" ಎಂಬ ಕುಮಾರಸ್ವಾಮಿ ಹೇಳಿಕೆಗೆ ಶೋಭಾ ಕರಂದ್ಲಾಜೆ ಚಿಕ್ಕಮಗಳೂರಿನಲ್ಲಿ ಟಾಂಗ್ ನೀಡಿದ್ದಾರೆ. ಮಲೆನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಸಂಭವಿಸುತ್ತಿರುವ ಅವಘಡಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲು ಸಂಸದೆ ಶೋಭಾ ಕರಂದ್ಲಾಜೆ ಆಗಮಿಸಿದ್ದರು.
ಈ ವೇಳೆ ಮಾತನಾಡಿದ ಅವರು, "ಯಡಿಯೂರಪ್ಪನವರಿಗೆ ಯಾರೂ ಪಾಠ ಹೇಳಬೇಕಾದ ಅಗತ್ಯ ಇಲ್ಲ. ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ನಿರಾಶರಾಗಿದ್ದಾರೆ. ಹತಾಶೆಯಲ್ಲಿ ಹೀಗೆ ಮಾತನಾಡ್ತಾ ಇದ್ದಾರೆ" ಎಂದು ವ್ಯಂಗ್ಯ ಮಾಡಿದರು.
"ಬಿಎಸ್ ವೈ ದೆಹಲಿಗೆ ಹೋಗುವ ಮುನ್ನವೇ ಅತಿವೃಷ್ಟಿ ಸಮೀಕ್ಷೆ ನಡೆಸಿದರು. ಸುಷ್ಮಾ ಸ್ವರಾಜ್ ನಿಧನರಾದ ಹಿನ್ನೆಲೆ ದೆಹಲಿಗೆ ತೆರಳಿದರು. ದೆಹಲಿ ವಾಪಸ್ ಆದ ತಕ್ಷಣ ನೇರವಾಗಿ ಉತ್ತರ ಕರ್ನಾಟಕದ ಅತಿವೃಷ್ಟಿ ಪ್ರದೇಶಗಳಿಗೆ ತೆರಳಿದ್ದಾರೆ. ಬಿಎಸ್ ವೈ ಅವರಿಗೆ ಯಾರ ಹತ್ತಿರವೂ ಹೇಳಿಸಿಕೊಳ್ಳದೇ ಕೆಲಸ ಮಾಡುವ ಗುಣ ಇದೆ" ಎಂದು ಹೊಗಳಿದರು.

ಇದೇ ಸಮಯದಲ್ಲಿ ಜಿಲ್ಲೆಯಲ್ಲಾಗಿರುವ ಅವಘಡಗಳ ಕುರಿತು ಚರ್ಚೆ ನಡೆಸಿದರು. ಮೆಸ್ಕಾಂ ಬೇಜಾವಾಬ್ದಾರಿಯಿಂದ ಸಾವನ್ನಪ್ಪಿದ್ದ ಎನ್ ಆರ್ ಪುರದಲ್ಲಿ ಕುಮಾರ್ ಎಂಬ ರೈತನ ಕುಟುಂಬಕ್ಕೆ ತಕ್ಷಣಕ್ಕೆ ಪರಿಹಾರ ನೀಡಲು ಸೂಚನೆ ನೀಡಲಾಗಿದೆ ಎಂದರು.
ಮೂಡಿಗೆರೆ ತಾಲೂಕಿನ ಆಲೂರಿ ಹೇಮಾವತಿ ನದಿಯಲ್ಲಿ ಯುವಕ ಕೊಚ್ಚಿ ಹೋದ ಪ್ರಕರಣದ ಕುರಿತು ಮಾತನಾಡಿದರು. "ಯುವಕನ ಮೃತದೇಹ ಪತ್ತೆ ಹಚ್ಚುವ ಕೆಲಸವನ್ನು ಜಿಲ್ಲಾಡಳಿತ ನಡೆಸುತ್ತಿದೆ. ಜಿಲ್ಲೆಯಲ್ಲಿ ಸಿಡಿಲಿನಿಂದ ಮೃತಪಟ್ಟ ರೈತರಿಗೆ ತಲಾ ಐದು ಲಕ್ಷ ಬಿಡುಗಡೆ ಮಾಡಲಾಗಿದೆ. ಮಳೆ ಹಾನಿಯ ಬಗ್ಗೆ ಅಧಿಕಾರಿಗಳಿಗೆ ಪರಿಶೀಲನೆ ಮಾಡಲು ಸೂಚಿಸಲಾಗಿದೆ. ವರದಿ ಬಂದ ನಂತರ ತೋಟ, ಮನೆ, ಬೆಳೆ ಹಾನಿಗೆ ಪರಿಹಾರ ನೀಡಲಾಗುವುದು" ಎಂದು ಭರವಸೆ ನೀಡಿದ್ದಾರೆ.












Click it and Unblock the Notifications