ದೇವೇಗೌಡರ ಕುಟುಂಬ ಪ್ರತಿ ಬಾರಿ ಶೃಂಗೇರಿ ಶಾರದೆಯ ಮೊರೆ ಹೋಗುವುದೇಕೆ?
Recommended Video

ಚಿಕ್ಕಮಗಳೂರು, ಡಿಸೆಂಬರ್ 14: ಅಪಾರ ದೈವ ಭಕ್ತರಾದ ದೇವೇಗೌಡರ ಕುಟುಂಬ ಸದಾ ಪುಣ್ಯಕ್ಷೇತ್ರಗಳ ದರ್ಶನದಲ್ಲಿ ತೊಡಗಿರುವುದು ಎಲ್ಲರಿಗೂ ತಿಳಿದ ವಿಷಯ. ಕೇವಲ 37 ಸೀಟ್ ಪಡೆದು ಎಚ್.ಡಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಲು ದೈವ ಬಲವೇ ಕಾರಣ ಎಂದು ನಂಬಿರುವ ಗೌಡರ ಕುಟುಂಬ ಶೃಂಗೇರಿ ಶಾರದಾಂಬೆಯ ಕೃಪೆಯೇ ಇದಕ್ಕೆ ಕಾರಣ ಎನ್ನುತ್ತಾರೆ.
ಸಿ.ಎಂ. ಆಗುವ ಮೊದಲು ಹಾಗೂ ನಂತರವೂ ಶಾರದೆಯ ಶರಣು ಬಂದಿರುವ ಎಚ್.ಡಿ.ಕೆ ಟೆಂಪಲ್ ರನ್ ನಲ್ಲಿ ಶೃಂಗೇರಿಗೆ ಅಗ್ರಸ್ಥಾನ ದೊರೆತಿದೆ. ಇದಕ್ಕೆ ನಿಜವಾದ ಕಾರಣ ಏನು ಎಂಬುದು ಕುತೂಹಲವಾಗಿದ್ದರೂ ದೇವಿಯ ಸನ್ನಿಧಿ ಪವಾಡವನ್ನೇ ಸೃಷ್ಠಿಸಿದೆ ಎನ್ನುವುದಂತೂ ಸತ್ಯ.
ರಾಜ್ಯದಲ್ಲಿ ರಾಜಕೀಯವಾಗಿ ತಮ್ಮದೇ ಹೆಸರು ಮಾಡಿರುವ ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ತಮ್ಮೆಲ್ಲಾ ಏಳ್ಗೆಗೆ ದೇವರ ಅನುಗ್ರಹ ಕಾರಣ ಎಂದು ನಂಬಿದ್ದಾರೆ. ದಿನದ 24 ಗಂಟೆಯೂ ರಾಜಕೀಯದ ಬಗ್ಗೆಯೇ ಯೋಚಿಸುತ್ತಾರೆ ಎಂದು ಜನಜನಿತರಾಗಿರುವ ದೇವೇಗೌಡರು ಸದಾ ಅದರಲ್ಲೇ ಮುಳುಗಿ ಹೋಗಿರುತ್ತಾರೆ.
ತಾವು ಅಲ್ಲದೇ ಇಡೀ ಕುಟುಂಬವನ್ನು ರಾಜಕೀಯದಲ್ಲಿ ಸಕ್ರಿಯಗೊಳಿಸಲು ಹವಣಿಸುವ ದೇವೇಗೌಡರು ಎಲ್ಲಾ ಒಳಿತಿಗೆ ನಂಬಿರುವುದು ಪರಮಾತ್ಮನನ್ನು. ಎಲ್ಲಾ ದೇವರುಗಳ ಮೊರೆ ಹೋಗುವ ಗೌಡರ ಅಪಾರ ನಂಬಿಕೆ ಪ್ರತೀ ದೇವರುಗಳ ಮೇಲೆ ಇದ್ದರೂ ಕೆಲವು ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡುವುದು ಅಷ್ಟೇ ಸತ್ಯ.
ಹಾಸನದಿಂದ ವಿದೇಶದಲ್ಲಿರುವ ಶಿವನ ದೇಗುಲಗಳಿಗೂ ದೇವೇಗೌಡರ ಭಕ್ತಿ ಎಂದೆಂದಿಗೂ ನಡೆಯುತ್ತಲೇ ಇರುತ್ತದೆ. ಎಲ್ಲೇ ಹೋದರೂ ಎಷ್ಟೇ ಬ್ಯುಸಿ ಕಾರ್ಯಕ್ರಮಗಳು ಇದ್ದರೂ ಸಹಾ ದೈವ ಭಕ್ತಿ ಮಾತ್ರ ಮರೆಯುವುದಿಲ್ಲ ಇವರು. ಅಲ್ಲದೇ ತಮ್ಮ ಮನೆಯ ಎಲ್ಲರಿಗೂ ಭಕ್ತಿಯ ಪಾಠ ಹೇಳಿಕೊಡುವ ದೇವೇಗೌಡರು ಮಕ್ಕಳಿಗೂ ದೇವರ ಅನುಗ್ರಹ ಮತ್ತು ದೇವರ ಕೃಪೆಯ ಬಗ್ಗೆ ಹೇಳುತ್ತಲೇ ಇರುತ್ತಾರೆ. ಮುಂದೆ ಓದಿ...

ಗೌಡರ ಮನೆತನ ಸೆಳೆದಿದೆ
ರಾಜ್ಯದ ಎಲ್ಲಾ ರಾಜಕೀಯ ಮುಖಂಡರೂ ದೈವಾನುಗ್ರಹಕ್ಕಾಗಿ ಟೆಂಪಲ್ ರನ್ ಮಾಡಿದರೂ ದೇವೇಗೌಡರ ಕುಟುಂಬ ಒಂದು ಹೆಜ್ಜೆ ಮುಂದೆ ಎಂಬಂತೆ ಎಲ್ಲರನ್ನೂ ಮೀರಿಸುವ ಹಾಗೆ ದೇಗುಲ ದರ್ಶನಗಳನ್ನು ಮಾಡುತ್ತಾರೆ. ಭಕ್ತಿಯ ಪರಾಕಾಷ್ಠೆ ಎಂಬಂತೆ ದೇವರ ಮೊರೆ ನಿತ್ಯದ ಒಂದು ಭಾಗವಾಗಿ ಈ ಕುಟುಂಬಕ್ಕೆ ಸೇರಿಹೋಗಿದೆ. ಅದರಲ್ಲೂ ಕೆಲವು ಪುಣ್ಯಕ್ಷೇತ್ರಗಳಿಗೆ ನಡೆದುಕೊಳ್ಳುವುದನ್ನು ಮಾತ್ರ ಎಚ್.ಡಿ.ಡಿ ಕುಟುಂಬ ಮರೆಯುವುದಿಲ್ಲ. ಆದಿಗುರು ಶಂಕರರ ಸ್ಥಾಪಿತ ದಕ್ಷಿಣಾಯಣಮ್ಯ ಶೃಂಗೇರಿ ಶಾರದಾ ಪೀಠ ದೇವೇಗೌಡರ ನಂಬಿಕೆಯ ದೇವಸ್ಥಾನ. ಚಿಕ್ಕಮಗಳೂರು ಜಿಲ್ಲೆಯ ತುಂಗಾ ನದಿ ತಟದಲ್ಲಿರುವ ಶೃಂಗೇರಿ ಶಾರದಾಂಬೆಯ ಕ್ಷೇತ್ರ ದೇಶದ ಪ್ರಸಿದ್ಧ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಪ್ರಮುಖ ಎನಿಸಿದೆ. ದೇಶ-ವಿದೇಶಗಳಿಂದಲೂ ಅಪಾರ ಭಕ್ತರನ್ನು ಹೊಂದಿರುವ ಈ ಶೃಂಗೇರಿ ಗೌಡರ ಮನೆತನವನ್ನೂ ಸಹಾ ಸೆಳೆದಿದೆ.

ಶಾರದಾಂಬೆ ಸನ್ನಿಧಿಗೆ ಶರಣು
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಶೃಂಗೇರಿಗೆ ದೇವೇಗೌಡರ ಕುಟುಂಬ ಸಾಲು ಸಾಲು ಭೇಟಿಗಳನ್ನು ನೀಡುತ್ತಾ ಬರುತ್ತಿದೆ. ತುಸು ಹೆಚ್ಚು ಎಂಬಂತೆ ಪ್ರವಾಸವನ್ನು ಮಾಡುತ್ತಿರುವುದು ವಿಶೇಷ ಅರ್ಥ ಬರುವಂತೆ ಮಾಡಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಕೇವಲ 37 ಶಾಸಕರನ್ನು ಪಡೆದ ಜೆಡಿಎಸ್ ಪಕ್ಷ ಅಧಿಕಾರ ಪಡೆದದ್ದು ಅಲ್ಲದೇ ಬಂಪರ್ ಎಂಬಂತೆ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವುದು ದೈವ ಬಲದಿಂದಲೇ ಎಂಬ ಮಾತುಗಳು ಬಲವಾಗಿ ಕೇಳಿ ಬಂದವು. ಅದರಲ್ಲೂ ಶೃಂಗೇರಿ ಶಾರದೆಯ ಬಳಿ ಮಾಡಿಕೊಂಡ ಸಂಕಲ್ಪದಿಂದಲೇ ಎಚ್.ಡಿ.ಕೆ ನಾಡಿನ ಸಿ.ಎಂ ಆಗಲು ಸಾಧ್ಯವಾಯಿತು ಎಂಬುದು ಮತ್ತೆ ಮತ್ತೆ ಕೇಳಿಬಂತು. ಜೊತೆಗೆ ಮತ್ತೆ ಮತ್ತೆ ಶೃಂಗೇರಿಗೆ ಬರುತ್ತಿರುವ ಕುಮಾರಸ್ವಾಮಿ ಎಲ್ಲಾ ಸಂಕಷ್ಟ ನಿವಾರಿಸಲು ಶಾರದೆಯ ಶರಣು ಬರುತ್ತಿದ್ದಾರೆ. ಸಿ.ಎಂ ಆಗುವ ಮೊದಲು ಇದೇ ಶಾರದಾಂಭೆ ಸನ್ನಿಧಿಗೆ ಶರಣು ಎಂದಿದ್ದ ಕುಮಾರಸ್ವಾಮಿ ವಿವಿಧ ಧಾರ್ಮಿಕ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಶಾರದೆಯ ದೇಗುಲದಲ್ಲಿ ಬೇಡಿಕೊಂಡಿದ್ದರು
ಶಾರದೆಯ ಸನ್ನಿಧಿಯಲ್ಲೇ ನೆಲೆಗೊಂಡಿರುವ ಚಂದ್ರಮೌಳೇಶ್ವರನ ಮೊರೆ ಹೋಗಿದ್ದ ದೇವೇಗೌಡ ಕುಟುಂಬ ಅತಿರುದ್ರ ಮಹಾಯಾಗವನ್ನು ಕೈಗೊಂಡಿದ್ದರು. ವಿಧಾನಸಭೆ ಚುನಾವಣೆಗೆ ಮೊದಲೇ ಈ ತುಂಗಾ ತೀರಕ್ಕೆ ಬಂದಿದ್ದ ಗೌಡರು ಅಧಿಕಾರದ ಚುಕ್ಕಾಣಿ ಹಿಡಿಯಲು ಶಾರದೆಯ ದೇಗುಲದಲ್ಲಿ ಬೇಡಿಕೊಂಡಿದ್ದರು. ಅದರಂತೆ ನಡೆಯಿತು ಎಂಬ ಮಾತುಗಳೂ ಸಹಾ ಕೇಳಿಬಂದವು. ಅದಕ್ಕಾಗಿಯೇ ನಾಡಿನ ಮುಖ್ಯಮಂತ್ರಿಯಾಗಿ ನಿಯೋಜನೆಗೊಳ್ಳುತ್ತಿದ್ದಂತೆ ಮೊದಲು ಬಂದಿದ್ದು ಶೃಂಗೇರಿಯ ದೇವಸ್ಥಾನಕ್ಕೆ ಎಂಬುದು ಇಲ್ಲಿ ಸ್ಮರಿಸಬಹುದು. ಆದರೆ ಚುನಾವಣೆಯ ವೇಳೆ ಎಲ್ಲಾ ಬಿ-ಫಾರ್ಮ್ ಗಳನ್ನೂ ಈ ಪುಣ್ಯಕ್ಷೇತ್ರದಲ್ಲಿಟ್ಟು ಪೂಜಿಸಿ ವಿತರಿಸಲಾಯಿತು ಎಂದು ಮೂಲಗಳೇ ಹೇಳುತ್ತವೆ. ಹೀಗೆ ಸ್ವ-ಕುಟುಂಬ ಸಮೇತರಾಗಿ ಶಾರದೆಯ ಸನ್ನಿದಾನಕ್ಕೆ ಬಂದಿದ್ದ ದೇವೇಗೌಡ ಮತ್ತು ಅವರೆಲ್ಲಾ ಮಕ್ಕಳು ಸಾಮೂಹಿಕವಾಗಿ ಯಜ್ಞ-ಯಾಗಗಳಲ್ಲಿ ಖುದ್ದು ಭಾಗಿಯಾದರು.ಇಡೀ ಗೌಡರ ಕುಟುಂಬ ಪದೇ ಪದೇ ಶೃಂಗೇರಿಗೆ ಆಗಮಿಸುತ್ತಾ ಇರುವುದು ಈ ಕ್ಷೇತ್ರದ ಮಹಿಮೆಯನ್ನೂ ಸಹಾ ಇಮ್ಮಡಿಗೊಳಿಸಿ ಬೇಡಿದ ಭಕ್ತರನ್ನು ಸೆಳೆಯುವ ಪುಣ್ಯಭೂಮಿ ಎನಿಸುತ್ತಿದೆ.

ಇದೇ ವರ್ಷದಲ್ಲಿ ನಾಲ್ಕು ಬಾರಿ ಆಗಮನ
ವೈಯಕ್ತಿಕ ಕಾರಣಗಳಿಗಿಂತಲೂ ರಾಜಕೀಯ ವಿಪ್ಲವಗಳನ್ನು ಎದುರಿಸುತ್ತಿರುವ ಕುಮಾರಸ್ವಾಮಿಗೆ ಮುಖ್ಯಮಂತ್ರಿಯಾದ ಮೊದಲ ದಿನದಿಂದಲೂ ಕಾಡುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಕಣ್ಣಮುಂದೆ ಬಂದಿದ್ದು ಈ ಶೃಂಗೇರಿಯ ಶಾರದೆ ಎಂಬುದು ಸ್ಪಷ್ಟ. ಇದೇ ವರ್ಷದಲ್ಲಿ ನಾಲ್ಕು ಬಾರಿ ಆಗಮಿಸಿ ವಿವಿಧ ಪೂಜೆಗಳನ್ನು ಶಾರದೆಗೆ ಸಲ್ಲಿಸಿದ್ದಾರೆ ಕುಮಾರಸ್ವಾಮಿ. ಪ್ರತಿದಿನ ಸಮ್ಮಿಶ್ರ ಸರ್ಕಾರ ಬೀಳಲಿದೆ, ಬೀಳಲಿದೆ ಎಂಬ ಸುದ್ದಿ ಕೇಳಿ ಕೇಳಿ ಬೇಸರಗೊಂಡ ಕುಮಾರಸ್ವಾಮಿ ಇದಕ್ಕೆಲ್ಲಾ ಪರಿಹಾರವನ್ನು ಹುಡುಕಿಕೊಂಡು ಬಂದಿದ್ದೇ ಈ ತಾಯಿಯ ಮಡಿಲಿಗೆ,,,
ಭಾರತೀ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದು ಇದೇ ಶೃಂಗೇರಿಯಲ್ಲಿ ಯಜ್ಙ-ಯಾಗಾಧಿಗಳನ್ನು ನಡೆಸುತ್ತಿದ್ದಾರೆ. ಮುಖ್ಯಮಂತ್ರಿಯಾಗುವ ಮೊದಲೇ ಮಹಾರುದ್ರಯಾಗ ಆರಂಭಿಸಿ 21 ದಿನಗಳ ಬಳಿಕ ಸಿ.ಎಂ ಪಟ್ಟ ಏರಿದ ನಂತರ ಬಂದು ಅದನ್ನು ಸಂಪನ್ನಗೊಳಿಸಿ ಪುರ್ಣಾಹುತಿಯಲ್ಲಿ ಭಾಗವಹಿಸಿದರು ಎಂದು ಸಹಾ ಹೇಳಲಾಗುತ್ತದೆ. ರಾತ್ರಿ ಹಗಲು ಎನ್ನದೆ ಶೃಂಗೇರಿ ಕ್ಷೇತ್ರಕ್ಕೆ ಧಾವಿಸಿ ಬರುತ್ತಿರುವ ದೇವೇಗೌಡ ಕುಟುಂಬ ಎಲ್ಲದಕ್ಕೂ ದೇವಿಯ ಆಶರ್ವಾದವನ್ನು ತಪ್ಪದೇ ಪಡೆದು ಹೋಗುತ್ತಿದ್ದಾರೆ. ಕೇವಲ ಒಬ್ಬರಲ್ಲದೆ ಇಡೀ ಕುಟುಂಬವೇ ಶಾರದೆಗೆ ಶರಣಾಗಿ ನಮಿಸುತ್ತಿದೆ.

ಗುರುಗಳ ಬಳಿ ಕೇಳುವುದರಲ್ಲಿ ತಪ್ಪೇನಿದೆ?
ಇನ್ನು ಈಗ ಚಳಿಗಾಲದ ಅಧೀವೇಶನ ಪ್ರಾರಂಭವಾಗಿದೆ ಈ ಮುನ್ನವೂ ಸಹ ಸಚಿವ ಹೆಚ್ ಡಿ ರೇವಣ್ಣ ಶೃಂಗೇರಿ ಶಾರದೆಗೆ ಮೊರೆ ಹೋಗಿ ಯಾವುದೇ ವಿಘ್ನಗಳು ಬಾರದಂತೆ ಹೋಮ ಹವನ ನಡೆಸಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಹೋಮದ ಕೊನೆಯ ಸ್ವತ: ರೇವಣ್ಣ ಜೊತೆ ಶಾರದೆಯ ಸನ್ನಿದಾನಕ್ಕೆ ಬಂದ ಸಿ ಎಂ ಕುಮಾರಸ್ವಾಮಿಯವರು ಹೋಮದ ಪೂರ್ಣಾಹುತಿಯಲ್ಲಿ ಭಾಗಿಯಾಗಿ ಶಾರದೆಗೆ ವಿಶೇಷ ಪೂಜೆ ಸಹ ಸಲ್ಲಿಸಿದರು. ಇನ್ನು ಗೌಡರ ಕುಟುಂಬ ಕೇವಲ ರಾಜಕೀಯವನ್ನು ಹೊರತುಪಡಿಸಿ ವೈಯುಕ್ತಿಕ ಕಷ್ಟ ಕಾರ್ಪಣ್ಯಗಳಿಗ ಶೃಂಗೇರಿ ಶಾರದೆಯ ಮೊರೆ ಹೋಗುವುದು ಸಾಮಾನ್ಯ. ಮೊನ್ನೆ ಮೊನ್ನೆ ಮಗ ನಿಖಿಲ್ ಮದುವೆಯ ವಿಷಯವಾಗಿಯೂ ಶೃಂಗೇರಿ ಶ್ರೀಗಳ ಜೊತೆ ಸಿ ಎಂ ಕುಮಾರಸ್ವಾಮಿ ಚರ್ಚೆ ನಡೆಸಿದ್ದು ಒಳ್ಳೆಯ ಕಾರ್ಯಗಳಿಗೆ ಗುರುಗಳ ಬಳಿ ಕೇಳುವುದರಲ್ಲಿ ತಪ್ಪೇನಿದೆ ಎಂದು ಸ್ವತ: ಕುಮಾರಸ್ವಾಮಿಯವರ ಮಾಧ್ಯಮದವರ ಜೊತೆ ವಿಷಯ ಹಂಚಿಕೊಂಡಿದ್ದಾರೆ
ಒಟ್ಟಾರೆ ದೇವೇಗೌಡ ಕುಟುಂಬ ತಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾರದೆಯ ಮೊರೆ ಹೋಗುತ್ತಿದ್ದು ಈವರೆಗೆ ಅವರೆಲ್ಲ ಕಷ್ಟಗಳಿಗೆ ಶಾರದೆ ಆಸರೆಯಾಗಿದ್ದಾಳೆ ಎಂಬ ಮಾತುಗಳು ಸಹ ಕೇಳಿ ಬರ್ತಿದೆ. ಮುಂದಿನ ದಿನಗಳಲ್ಲಿಯೂ ಶಾರದೆ ಗೌಡೆ ಕುಟುಂಬಕ್ಕೆ ಆಸರೆಯಾಗಿದ್ದು, ಅವರ ರಾಜಕೀಯ ಭವಿಷ್ಯ ಮತ್ತಷ್ಟು ಉತ್ತುಂಗಕ್ಕೆ ಏರುತ್ತಾ ಕಾದು ನೋಡಬೇಕಿದೆ.












Click it and Unblock the Notifications