ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡ ದತ್ತಮಾಲಾಧಾರಿಗಳು
ಚಿಕ್ಕಮಗಳೂರು, ಡಿಸೆಂಬರ್ 28: ದತ್ತಜಯಂತಿ ಹಿನ್ನೆಲೆ ಚಿಕ್ಕಮಗಳೂರಿನಲ್ಲಿಂದು ಬೃಹತ್ ಸಂಕೀರ್ತನಾ ಯಾತ್ರೆ ನಡೆಯಿತು. ನಗರದ ಕಾಮಧೇನು ಗಣಪತಿ ದೇವಾಲಯದಿಂದ ಆರಂಭಗೊಂಡ ಸಂಕೀರ್ತನಾ ಯಾತ್ರೆ ಆಜಾದ್ ಪಾರ್ಕ್ ವೃತ್ತದಲ್ಲಿ ಕೊನೆಗೊಂಡಿತು.
1500ಕ್ಕೂ ಹೆಚ್ಚು ಪೊಲೀಸ್ ಸರ್ಪಗಾವಲಿನಲ್ಲಿ ನಡೆದ ಸಂಕೀರ್ತನಾ ಯಾತ್ರೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ದತ್ತಮಾಲಾಧಾರಿಗಳು ಪಾಲ್ಗೊಂಡಿದ್ದರು. ದತ್ತ ಪೀಠದ ಮುಕ್ತಿಗಾಗಿ ಹೋರಾಟ ನಿರಂತರವೆಂದು ಭಕ್ತರು ಪುನರುಚ್ಚರಿಸಿದರು.
ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಸಾಗಿದ ಸಂಕೀರ್ತನಾ ಯಾತ್ರೆ ಆಜಾದ್ ವೃತ್ತದಲ್ಲಿ ಕೊನೆಗೊಂಡಿತು. ಸಂಕೀರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ನೂರಾರು ಬಿಜೆಪಿ ಮುಖಂಡರು ಭಾಗಿಯಾಗಿದ್ದರು.
ಚಿಕ್ಕಮಗಳೂರು ನಗರದ ಪ್ರಮುಖ ಬೀದಿಗಳಲ್ಲಿ ಸಂಕೀರ್ತನಾ ಯಾತ್ರೆ ಸಾಗುವ ವೇಳೆ ಬಿಲ್ಡಿಂಗ್ ಗಳ ಮೇಲೆ ಸಾವಿರಾರು ಮಹಿಳೆಯರು, ಪುರುಷರು ನಿಂತು ಸಂಕೀರ್ತನಾ ಯಾತ್ರೆಯನ್ನು ಕಣ್ತುಂಬಿಕೊಂಡರು.
ದತ್ತ ಪೀಠದಲ್ಲಿ ದತ್ತಾತ್ರೇಯ ಮಂದಿರ ನಿರ್ಮಾಣ; ಶೋಭಾ ಕರಂದ್ಲಾಜೆ
ಇನ್ನು ಇದೇ ವೇಳೆ ಮಾತಾನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಇದು ಮಾಲಾಧಾರಿಗಳು ಸಂಕೀರ್ತನಾ ಯಾತ್ರೆ ಅಲ್ಲ ಜನರ ಸಂಕೀರ್ತನಾ ಯಾತ್ರೆ, ಈ ಬಾರಿ ಸರಳವಾಗಿ ಆಚರಣೆ ಮಾಡೋಣ ಅಂದುಕೊಂಡಿದ್ದೇವೆ, ಆದರೆ ಸಾವಿರಾರು ಜನರು ಉತ್ಸುಕದಿಂದ ಬಂದು ಭಾಗವಹಿಸಿದ್ದಾರೆ.
ಕೆಲವರು ನನಗೆ ಪ್ರಶ್ನೆ ಮಾಡಿದರು, "ಏನ್ ಸರ್ ವಾದ್ಯ, ವೀರಗಾಸೆ ಇಲ್ಲ ಅಂತ, ಅದಕ್ಕೆ ನಾನು ಹೇಳಿದೆ ಮುಂದಿನ ವರ್ಷ ಬಡ್ಡಿ ಸಮೇತ ಆಚರಣೆ ಮಾಡೋಣ ಅಂದೆ' ಎಂದರು.