ಆಪರೇಷನ್ ಭೈರ ವಿಫಲ: ದಸರಾ ಆನೆಗಳು ವಾಪಸ್, ಸ್ಥಳೀಯರ ಆಕ್ರೋಶ
ಚಿಕ್ಕಮಗಳೂರು ನವೆಂಬರ್ 7: ಕಾಫಿನಾಡಿನಲ್ಲಿ ಕಳೆದ ಕೆಲ ವರ್ಷಗಳಿಂದ ಭಾರಿ ತೊಂದರೆ ಕೊಡುತ್ತಿದ್ದ ಭೈರ ಎನ್ನುವ ಕಾಡಾನೆಯನ್ನು ಹಿಡಿಯಲು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮಕ್ಕೆ ಬಂದಿದ್ದ ದಸರಾ ಆನೆಗಳು ವಾಪಸ್ ಆಗಿವೆ.
ಕಳೆದ ಭಾನುವಾರ ಊರುಬಗೆ ಗ್ರಾಮಕ್ಕೆ ಬಂದಿದ್ದ ಈ ದಸರಾ ಆನೆಗಳ ಜೊತೆ ನೂರು ಮಂದಿ ಅರಣ್ಯ ಸಿಬ್ಬಂದಿ ತಂಡ ಸೋಮವಾರದಿಂದ ಭೈರ ಕಾಡಾನೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದರು. ಎರಡು ಮೂರು ದಿನಗಳ ಕಾಲ ಹುಡುಕಾಟ ನಡೆಸಿದರೂ ಕಾಡಾನೆ ಪತ್ತೆಯಾಗಿಲ್ಲ. ಆದರೆ ಕಾರ್ಯಾಚರಣೆ ಮುಂದುವರಿಸಿದ್ದ ಅರಣ್ಯಾಧಿಕಾರಿಗಳಿಗೆ ಒಂದಾದ ಮೇಲೊಂದು ಸಮಸ್ಯೆ ಎದುರಾಗಿತ್ತು.
ಕಳಸದ ರಸ್ತೆ ಅವ್ಯವಸ್ಥೆ ಬಗೆಗಿನ ವ್ಯಂಗ್ಯ ಚಿತ್ರಗಳು ವೈರಲ್
ಆಪರೇಷನ್ ಭೈರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಭಿಮನ್ಯು ಆನೆಗೆ ಆರೋಗ್ಯ ಹದೆಗೆಟ್ಟಿದೆ. ಅದರ ಚಿಕಿತ್ಸೆ ಮುಗಿಯುತ್ತಿದ್ದಂತೆ ಕಾರ್ಯಾಚರಣೆಯಲ್ಲಿದ್ದ ಗೋಪಾಲಸ್ವಾಮಿ ಆನೆ ಮದವೇರಿ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಗೋಪಾಲಸ್ವಾಮಿ ಆನೆಯನ್ನು ಹತೋಟಿಗೆ ತರುವುದೇ ಅರಣ್ಯಾಧಿಕಾರಿಗಳಿಗೆ ದೊಡ್ಡ ಸವಾಲ್ ಆಗಿತ್ತು. ಕೊನೆಗೆ ಜಿಲ್ಲಾಧಿಕಾರಿಗಳೇ ಕಾರ್ಯಾಚರಣೆ ಜಾಗದಲ್ಲಿ 144 ಸೆಕ್ಷನ್ ಜಾರಿ ಮಾಡಿ ಜನರು ಯಾರು ಆನೆ ಕಾರ್ಯಾಚರಣೆಯ ಸುತ್ತ ಓಡಾಡದಂತೆ ಆದೇಶ ಹೊರಡಿಸಿದರು. ಇಷ್ಟೆಲ್ಲಾ ಅವಾಂತರಗಳು ನಡೆದ ಮೇಲೆ ಭಿಮನ್ಯು ನೇತೃತ್ವದ ಆರು ದಸರಾ ಆನೆಗಳ ತಂಡವನ್ನು ನಾಗರಹೊಳೆ ಹಾಗೂ ದುಬಾರೆ ಕ್ಯಾಂಪ್ಗೆ ವಾಪಸ್ ಕಳುಹಿಸಲಾಗಿದೆ.
ಭೈರ ಕಾಡಾನೆ ಕಾಟಕ್ಕೆ ಜನ ಬೇಸತ್ತಿದ್ದರು. ಭೈರನನ್ನ ಹಿಡಿಯುವ ಕಾರ್ಯಾಚರಣೆಗೆ ಅಷ್ಟು ಸುಲಭವಾಗಿ ಸರ್ಕಾರ ಮನಸ್ಸು ಮಾಡಿರಲಿಲ್ಲ. ಕಳೆದ ಎರಡು ತಿಂಗಳಲ್ಲೇ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ರು. ಹೀಗಾಗಿ ಕಾಡಾನೆಯನ್ನ ಹಿಡಿಯಬೇಕು ಅಂತಾ ಮೃತದೇಹವನ್ನ ಹಿಡಿದುಕೊಂಡು ಮೂಡಿಗೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಈ ವೇಳೆ ಲಾಠಿಚಾರ್ಜ್ ಕೂಡ ನಡೆದಿತ್ತು. ಇಷ್ಟೆಲ್ಲಾ ನಡೆದ ಮೇಲೆ ಸರ್ಕಾರ ಕಾಡಾನೆಯನ್ನು ಹಿಡಿಯಲು ಕಾರ್ಯಾಚರಣೆಗೆ ಅನುಮತಿ ನೀಡಿತ್ತು. ಆದರೆ ಕಾರ್ಯಾಚರಣೆಗೆ ಬಂದಿದ್ದ ದಸರಾ ಆನೆಗಳು ವಾಪಸ್ ಆಗಿದ್ದು, ಈ ಎಲ್ಲಾ ಘಟನಾವಳಿಗಳಿಗೆ ಅರಣ್ಯ ಅಧಿಕಾರಿಗಳ ಬೇಜಬ್ದಾರಿತನವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಿಗೂಢವಾಗಿ ಸಾವನ್ನಪ್ಪಿದ ಚಂದ್ರುವಿಗೂ ಗೌರಿಗದ್ದೆ ಆಶ್ರಮಕ್ಕೂ ಇರುವ ಸಂಬಂಧವೇನು?
ಕಾರ್ಯಾಚರಣೆಗೆ ಬಂದಿದ್ದ ಆನೆಗಳಿಗೆ ಸ್ಥಳೀಯರು ಬೆಲ್ಲ ಸೇರಿದಂತೆ ತಿನ್ನಲು ಎಲ್ಲವನ್ನೂ ಕೊಟ್ಟು ಆನೆಗಳ ಆರೋಗ್ಯ ಹಾಳು ಮಾಡಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಸಿದ್ದಾರೆ. ಆದರೆ ಆನೆಗಳ ಹತ್ತಿರ ಹೋಗುವುದಕ್ಕೂ ಮಾವುತನ ಅನುಮತಿ ಪಡೆಯಬೇಕಿತ್ತು. ಹೀಗಿರುವಾಗ ನಾವು ಹೇಗೆ ಆನೆಗಳಿಗೆ ಆಹಾರವನ್ನು ನೀಡುವುದು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಇನ್ನು ಕ್ಯಾಂಪ್ಗಳಲ್ಲಿ ತಂಪಾಗಿದ್ದ ದಸರಾ ಆನೆಗಳನ್ನು ಬಿಸಿಲಲ್ಲಿ ನಿಲ್ಲಿಸಿ, ಸರಿಯಾದ ವ್ಯವಸ್ಥೆ ಮಾಡದ ಕಾರಣ ಅವುಗಳ ಆರೋಗ್ಯ ಕೆಟ್ಟಿದೆ. ಇದಕ್ಕೆ ಅರಣ್ಯಾಧಿಕಾರಿಗಳೇ ಕಾರಣ. ಬಿಲ್ ಮಾಡಿಕೊಳ್ಳಲು ಈ ರೀತಿ ಕಾರ್ಯಾಚರಣೆಯ ನಾಟಕವಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರ ಜಟಾಪಟಿಯಲ್ಲಿ ಆಪರೇಷನ್ ಭೈರಾ ವಿಫಲವಾಗಿದ್ದು, ಸ್ಥಳೀಯರಿಗೆ ಕಾಡಾನೆ ಕಾಟ ಮುಂದುವರಿದಿದೆ.