ಡಿಸಿಎಂ ಡಿ. ಕೆ. ಶಿವಕುಮಾರ್ಗೆ ಹೊಸ ಹೆಸರು ಕೊಟ್ಟ ಸಿ. ಟಿ. ರವಿ
ಚಿಕ್ಕಮಗಳೂರು, ಜನವರಿ 12: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಎಂಎಲ್ಸಿ ಹಾಗೂ ಮಾಜಿ ಸಚಿವ ಸಿ. ಟಿ. ರವಿ ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ಇನ್ನೂ ಸಹ ರಾಜ್ಯ ರಾಜಕೀಯದಲ್ಲಿ ಚರ್ಚೆಗಳು ನಡೆಯುತ್ತಿವೆ.
ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನದ ಕೊನೆಯ ದಿನ ಸುವರ್ಣಸೌಧದಲ್ಲಿ ನಡೆದ ಘಟನೆ ಮುಂದಿಟ್ಟುಕೊಂಡು ಮಾಜಿ ಸಚಿವ, ಬಿಜೆಪಿ ನಾಯಕ ಸಿ. ಟಿ. ರವಿ ಭಾನುವಾರ ಪೋಸ್ಟ್ ಒಂದನ್ನು ಹಾಕಿದ್ದಾರೆ. ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ.

ಡಿ. ಕೆ. ಶಿವಕುಮಾರ್ ಹೆಸರು: ಸಿ. ಟಿ. ರವಿ ತಮ್ಮ ಪೋಸ್ಟ್ ಅನ್ನು 'ಮಾನ್ಯ ಡಿ (ಡ್ರಾಮ) ಕೆ (ಕಿಂಗ್) ಶಿವಕುಮಾರ್ ಅವರೆ,' ಎಂದು ಪ್ರಾರಂಭಮಾಡಿದ್ದಾರೆ.
'ನೀವು ಉಪಮುಖ್ಯಮಂತ್ರಿಗಳು ಎನ್ನುವುದನ್ನು ಮರೆತು ಬಿಟ್ಟಿದ್ದೀರಿ. ನೀವು ನ್ಯಾಯಾಧೀಶರ ಸ್ಥಾನದಲ್ಲಿ ಇದ್ದು, ಸತ್ಯಾಸತ್ಯತೆಯನ್ನು ವಿಚಾರ ಮಾಡಬೇಕಾದವರು ದುರದೃಷ್ಟವಾಶಾತ್ ಯಾರದ್ದೋ ವಕೀಲರಾಗಿಬಿಟ್ಟಿದ್ದೀರಿ. ಯಾರು ಮೋಹ ಮದ ಮಾತ್ಸರ್ಯಗಳಿಂದ ಹೊರಗಿದ್ದು ನೋಡುತ್ತಾರೋ ಅವರಿಗೆ ಸತ್ಯಾಸತ್ಯಾತೆ ಗೊತ್ತಾಗುತ್ತದೆ. ಮೋಹಪರವಶರಾದವರಿಗೆ, ಅಧಿಕಾರದ ಮದದಿಂದ ಕೂಡಿದವರಿಗೆ, ಮಾತ್ಸರ್ಯದ ರಾಜಕಾರಣ ಮಾಡುವವರಿಗೆ ಸತ್ಯ ಅರ್ಥ ಆಗಲಿಕ್ಕೆ ಸಾಧ್ಯವಿಲ್ಲ' ಎಂದು ಸಿ. ಟಿ. ರವಿ ಹೇಳಿದ್ದಾರೆ.
'ಸಭಾಪತಿಗಳ ರೂಲಿಂಗ್ ನೀಡಿದ ನಂತರ ನೀವುಗಳು, ನಿಮ್ಮ ಪಕ್ಷದ ಶಾಸಕರು ನಡೆದುಕೊಂಡ ರೀತಿ ನಿಮಗುಚಿತವೇ? ಗೂಂಡಾಗಳನ್ನೂ, ಜೊತೆಗಾರರನ್ನು ಎತ್ತಿಕಟ್ಟಿ, ಶಾಸಕಾಂಗದ ದೇಗುಲವಾದ "ಸುವರ್ಣ ಸೌಧದಲ್ಲಿ" ನನ್ನ ಮೇಲೆ ನಡೆದ ಹಲ್ಲೆಯನ್ನು ಯಾವ ದೃಷ್ಟಿಯಿಂದ ನೋಡುತ್ತೀರಿ? ಇದನ್ನು ಗಾಂಧಿಗಿರಿ ಎನ್ನಬೇಕೇ ಅಥವಾ ಗೂಂಡಾಗಿರಿ ಎನ್ನಬೇಕೇ?' ಎಂದು ಸಿ. ಟಿ. ರವಿ ಪ್ರಶ್ನೆ ಮಾಡಿದ್ದಾರೆ.
'ನಿಮ್ಮ ಸರ್ಕಾರದ ಪೊಲೀಸರು ಮಾಡಿದ ಅಸಂವಿಧಾನಿಕ, ಅನೈತಿಕ ಬಂಧನವನ್ನು ಏನೆಂದು ಭಾವಿಸುತ್ತೀರಿ?. ಪೊಲೀಸರು ರಾತ್ರಿ ಇಡೀ ನಡೆಸಿದ ದೌರ್ಜನ್ಯದ ಹಿಂದೆ ಯಾರ ಕುಮ್ಮಕ್ಕಿದೆ?. ಯಾರ ಕಾಣದ ಕೈಗಳ ಪಾತ್ರವಿದೆ? ಇದನ್ನು ಮೋಹ ಮದ ಮಾತ್ಸರ್ಯಗಳಿಂದ ಹೊರಗಿದ್ದು ನೋಡಿ, ಸತ್ಯದರಿವು ನಿಮಗಾಗುತ್ತದೆ. ಕಪಟ ನಾಟಕ ಯಾರು ಮಾಡುತ್ತಿದ್ದಾರೆ ಎನ್ನುವುದೂ ಗೊತ್ತಾಗುತ್ತದೆ' ಎಂದು ಸಲಹೆ ನೀಡಿದ್ದಾರೆ.
'ಸಾರ್ವಜನಿಕ ಬದುಕಿನಲ್ಲಿ ಸಿಟಿ ರವಿಯನ್ನು ಹೋರಾಟಗಾರ ಎಂದು ಗುರುತಿಸಿದ್ದಾರೆ, ರವಿಯನ್ನು ಕೆಲಸಗಾರ ಎಂದು ಗುರುತಿಸಿದ್ದಾರೆ, ರವಿಯನ್ನ ಪಕ್ಷನಿಷ್ಠ, ಸಿದ್ಧಾಂತ ಬದ್ಧ ಎಂದು ಗುರುತಿಸುತ್ತಾರೆ ಎಂಬುದು ನನ್ನ ಕರ್ನಾಟಕದ ಜನತೆ ತಿಳಿದಿದೆ' ಎಂದು ಹೇಳಿದ್ದಾರೆ.
"ಯದ್ಭಾವಂ ತದ್ಭವತಿ ಎಂಬ ಮಾತಿನಂತೆ ಯಾರು ಹೇಗಿದ್ದಾರೋ ಇತರರೂ ಹಾಗೆ ಎಂದು ಭಾವಿಸುತ್ತಾರೆ ಸನ್ಮಾನ್ಯ "ಉಪಮುಖ್ಯಮಂತ್ರಿ" ಯವರೆ. ಅಂದಹಾಗೆ ಕಾಂಗ್ರಸ್ಸಿನ ಕೆಲ ನಾಯಕರು "ನಮ್ಮ ಡ್ರಾಮ(D) ಕಿಂಗ್ (K) ಶಿವಕುಮಾರ್ ಅವರು ಇಷ್ಟೆಲ್ಲಾ ಡ್ರಾಮಾ ಮಾಡುತ್ತಿರುವುದು ಮುಖ್ಯಮಂತ್ರಿ ಗಾದಿಯನ್ನು ಏರುವ ಹಪಹಪಿಗಾಗಿ ಎಂದು ರಾಜಕೀಯದ ಮೊಗಸಾಲೆಗಳಲ್ಲಿ ಹೇಳಿಕೊಂಡು ಸುತ್ತುತ್ತಿರುವುದು ನಿಜವೇ?' ಎಂದು ಸಿ. ಟಿ. ರವಿ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications