ಸಹಕಾರ ಸಾರಿಗೆ ಸಂಸ್ಥೆ ಎಂ.ಡಿಗೆ ನ್ಯಾಯಾಂಗ ಬಂಧನ; ಭ್ರಷ್ಟಾಚಾರದ ಮೊದಲ ವಿಕೆಟ್ ಪತನ?
ಚಿಕ್ಕಮಗಳೂರು, ಮಾರ್ಚ್ 9: ಭವಿಷ್ಯ ನಿಧಿ ಇಲಾಖೆ ಕಾರ್ಮಿಕರ ಪಿ.ಎಫ್ ಹಣವನ್ನು ಕಟ್ಟಿಲ್ಲ ಎಂದು ಸಹಕಾರ ಸಾರಿಗೆ ಸಂಸ್ಥೆಯ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸಹಕಾರ ಸಾರಿಗೆ ಸಂಸ್ಥೆಯ ಎಂ.ಡಿ ಗಾಡ್ವಿನ್ ಜಯಪ್ರಕಾಶ್ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಳ್ಳದ ಹಿನ್ನೆಲೆ ಕೊಪ್ಪ ಪೊಲೀಸರು ಗಾಡ್ವಿನ್ ಜಯಪ್ರಕಾಶ್ರನ್ನು ಬಂಧಿಸಿ ನ್ಯಾಯಾಲಾಯದ ಮುಂದೆ ಹಾಜರುಪಡಿಸಿದ್ದರು. ಇದೀಗ ಕೋರ್ಟ್ ಗಾಡ್ವಿನ್ ಜಯಪ್ರಕಾಶ್ಗೆ ನ್ಯಾಯಾಂಗ ಬಂಧನ ವಿಧಿಸಿದೆ.
Recommended Video
ಕಾರ್ಮಿಕರೇ ಕಟ್ಟಿ ಬೆಳೆಸಿದ್ದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಜೀವನಾಡಿಯಾಗಿದ್ದ ಸಹಕಾರ ಸಾರಿಗೆ ಸಂಸ್ಥೆಗೆ ನಷ್ಟದ ನೆಪವೊಡ್ಡಿ ಎರಡು ವರ್ಷದ ಹಿಂದೆ ಬೀಗ ಹಾಕಲಾಗಿತ್ತು.

ಸಹಕಾರ ಸಾರಿಗೆ ಸಂಸ್ಥೆಯ ಭ್ರಷ್ಟಕೂಟದ ಮೊದಲ ವಿಕೆಟ್ ಪತನವಾಗಿದೆ ಎಂದು ಸಂಸ್ಥೆಯ ಕಾರ್ಮಿಕರು ಅಭಿಪ್ರಾಯಪಟ್ಟಿದ್ದಾರೆ. ಹತ್ತಾರು ವರ್ಷಗಳಿಂದ ಸಾವಿರಾರು ಜನರ ಬದುಕಿನ ಆಧಾರ ಸ್ತಂಭವಾಗಿ, ಲಕ್ಷಾಂತರ ಜನರ ಜೀವನಾಡಿಯಾಗಿದ್ದ ಸಹಕಾರ ಸಾರಿಗೆ ಸಂಸ್ಥೆಗೆ ಬೀಗ ಹಾಕಿದ್ದರಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿದ್ದವು.
ಪೊಲೀಸರು ಸಹಕಾರ ಸಾರಿಗೆ ಸಂಸ್ಥೆ ಎಂ.ಡಿ ಗಾಡ್ವಿನ್ ಜಯಪ್ರಕಾಶ್ರನ್ನು ಸೂಕ್ತ ರೀತಿಯಲ್ಲಿ ತನಿಖೆಗೆ ಒಳಪಡಿಸಿ, ನೊಂದ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ಕಾರ್ಮಿಕರು ಆಗ್ರಹಿಸಿದ್ದಾರೆ. ಮಲೆನಾಡಲ್ಲಿದ್ದ ಶಂಕರ್ ಟ್ರಾನ್ಸ್ಪೋರ್ಟ್ಗೆ ಬೀಗ ಬಿದ್ದ ಬಳಿಕ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೇ ಬಸ್ಗಳನ್ನು ಖರೀದಿಸಿದ್ದರು.
ಕೇವಲ ಐದು ಬಸ್ನಿಂದ ಆರಂಭವಾದ ಸಹಕಾರ ಸಾರಿಗೆ ಸಂಸ್ಥೆ 75 ಬಸ್ಗಳಾಗಿದ್ದವು. ಈ ಸಂಸ್ಥೆಗೆ ಮಾಲೀಕರಿಗೆ ಇರಲಿಲ್ಲ. ಕಾರ್ಮಿಕರೇ ಮಾಲೀಕರಾಗಿದ್ದರು. ಈ ಸಂಸ್ಥೆ ಮಲೆನಾಡಿಗರ ಜೀವನಾಡಿಯಾಗಿತ್ತು. ಮಲೆನಾಡಿನ ಕುಗ್ರಾಮಗಳಲ್ಲೂ ಸಹಕಾರ ಸಾರಿಗೆ ಸಂಸ್ಥೆಯ ಅಚ್ಚು ಬಿದ್ದಿತ್ತು.

ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ, ವಿದ್ಯಾರ್ಥಿಗಳಿಗೆ ಟಿಕೆಟ್ನಲ್ಲಿ ರಿಯಾಯಿತಿ ಇತ್ತು. ಮಲೆನಾಡಿನಲ್ಲಿ ಸರ್ಕಾರಿ ಬಸ್ ಓಡಾಡದ ಜಾಗದಲ್ಲಿ ಸಹಕಾರ ಸಾರಿಗೆ ಸಂಸ್ಥೆಯೇ ಜೀವಾಳವಾಗಿತ್ತು. ಆದರೆ, ಎರಡು ವರ್ಷದ ಹಿಂದೆ ಸಂಸ್ಥೆಗೆ ಬೀಗ ಬಿದ್ದ ಮೇಲೆ ಮಲೆನಾಡಿಗರು ತೀವ್ರ ಸಂಕಷ್ಟಕ್ಕೀಡಾಗಿದ್ದರು. ಕಾರ್ಮಿಕರು ಬೀದಿಗೆ ಬಿದ್ದಿದ್ದರು.
ನಷ್ಟವನ್ನು ಸರಿದೂಗಿಸಲು ಕಾರ್ಮಿಕರು ಸರ್ಕಾರದ ಕದ ಬಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ, ಸಂಸ್ಥೆಯ ಎಂ.ಡಿ ಗಾಡ್ವಿನ್ ಜಯಪ್ರಕಾಶ್ ನ್ಯಾಯಾಂಗ ಬಂಧನದಲ್ಲಿದ್ದು, ಸಂಸ್ಥೆಯ ನಷ್ಟಕ್ಕೆ ಕಾರಣ ಏನೆಂದು ತಿಳಿದುಕೊಳ್ಳುವ ಕಾತುರ ಕಾರ್ಮಿಕರಲ್ಲಿದೆ. ಪೊಲೀಸರ ಸೂಕ್ತ ತನಿಖೆಯಿಂದ ಸಂಸ್ಥೆಯ ಇಂದಿನ ಸ್ಥಿತಿಗೆ ಕಾರಣ ಏನೆಂಬುದು ಹೊರಬರಬೇಕಿದೆ.
17 ಮಳೆ ನಿರಾಶ್ರಿತರಿಗೆ ಮನೆ ಇಲ್ಲ; ಸರ್ಕಾರಕ್ಕೆ ಸವಾಲು ಹಾಕಿದ ಸ್ಥಳೀಯ ಮುಖಂಡ
ಮಹಾ ಮಳೆಯಿಂದ ಮನೆ- ಮಠ ಕಳೆದುಕೊಂಡು ಪ್ರತಿಭಟಿಸುತ್ತಿರುವ ನಿರಾಶ್ರಿತರಿಗೆ ಸರ್ಕಾರ ನಿವೇಶನ ಹಾಗೂ ಮನೆ ನೀಡಲು ಸಾಧ್ಯವಿಲ್ಲ ಎನ್ನುವುದಾದರೆ ಧರಣಿ ಕುಳಿತಿರುವ 17 ಕುಟುಂಬಗಳಿಗೂ ನಾನೇ ವೈಯಕ್ತಿಕವಾಗಿ ನಿವೇಶನ ಕೊಟ್ಟು ಮನೆ ಕಟ್ಟಿಸಿಕೊಡುತ್ತೇನೆ ಎಂದು ಪ್ರತಿಭಟನೆಯ ಮುಂದಾಳತ್ವ ವಹಿಸಿರುವ ಸ್ಥಳೀಯ ಮುಖಂಡ ಬಿ.ವಿ. ರವಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದ ನಿರಾಶ್ರಿತರು ಹಕ್ಕುಪತ್ರಕ್ಕಾಗಿ ಕಳಸ ತಾಲೂಕು ಕಚೇರಿ ಮುಂದೆ ಕಳೆದೊಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸ್ಥಳಕ್ಕೆ ಮೂಡಿಗೆರೆ ತಹಶೀಲ್ದಾರ ನಾಗರಾಜ್ ಭೇಟಿ ನೀಡಿ ಉಪವಾಸ ಕೈಬಿಡುವಂತೆ ಮನವಿ ಮಾಡಿಕೊಂಡರೂ, ಪ್ರತಿಭಟನಾನಿರತರು ಉಪವಾಸ ಸತ್ಯಾಗ್ರಹ ಕೈಬಿಟ್ಟಿಲ್ಲ.
ನಾವು ರಾಜಕೀಯ ಮಾಡಲು ಇಲ್ಲಿ ಶಾಮಿಯಾನ ಹಾಕಿಕೊಂಡು ಕೂತಿಲ್ಲ. ಮಳೆಯಿಂದ ಎಲ್ಲಾ ಕಳೆದುಕೊಂಡು ಬೀದಿಗೆ ಬಿದ್ದ ಕುಟುಂಬಗಳಿಗೆ ನ್ಯಾಯ ಒದಗಿಸಲು ಕೂತಿದ್ದೇವೆ. ನಿರಾತ್ರಿತರಿಗೆ ಹಕ್ಕುಪತ್ರ ನೀಡಿದ ಮೇಲೆ ಉಪವಾಸ ಕೈಬಿಡುತ್ತೇವೆ ಎಂದರು.
ಎಲ್ಲಾ ಕಳೆದುಕೊಂಡು ಬೀದಿಗೆ ಬಿದ್ದವರಿಗೆ ಹಕ್ಕುಪತ್ರ ಕೊಡುವ ಇಚ್ಚಾಶಕ್ತಿ ಸರ್ಕಾರಕ್ಕೆ ಇಲ್ಲ ಎಂದು ಪ್ರತಿಭಟನಾನಿರತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೂರು ವರ್ಷಗಳಿಂದ ಬೀದಿಗೆ ಬಂದು ಬದುಕುತ್ತಿದ್ದಾರೆ. ಅಧಿಕಾರಿಗಳು ಇಂದು ಬಂದು ಆಧಾರ್ ಕಾರ್ಡ್ ಕೊಡಿ ಎಂದರೆ ಅವರ ಜವಾಬ್ದಾರಿ, ಕಾರ್ಯವೈಖರಿ ಎಷ್ಟಿದೆ? ಹೇಗಿದೆ? ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಕೈನಲ್ಲಿ ಆಗಲ್ಲ ಎನ್ನುವುದಾದರೆ ಆಗಲ್ಲ ಎಂದು ಬರೆದುಕೊಡಿ, ಆಗ ಧರಣಿಯನ್ನು ಹಿಂಪಡೆಯುತ್ತೇವೆ. 17 ಕುಟುಂಬಗಳಿಗೂ ನಿವೇಶನ ನೀಡಿ ಮನೆ ಕಟ್ಟಿಸಿಕೊಡುವ ಜವಾಬ್ದಾರಿ ನನ್ನದು. ನೀವು ಬಡವರ ಕೆಲಸ ಮಾಡಲು ಸಾಮರ್ಥ್ಯ ಇಲ್ಲ ಎಂದಾದರೆ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಬಿ.ವಿ. ರವಿ ಸವಾಲು ಹಾಕಿದ್ದಾರೆ.
ಮೂರು ವರ್ಷದ ಬಳಿಕ ಆಧಾರ್ ಕಾರ್ಡ್ ಕೇಳಿದರು
ಮನೆ ಬಿದ್ದು ಬೀದಿಗೆ ಬಂದು ಮೂರು ವರ್ಷವೇ ಕಳೆದಿದೆ. ಅಧಿಕಾರಿಗಳು ಇವತ್ತು ಬಂದು ಆಧಾರ್ ಕಾರ್ಡ್ ಕೇಳುತ್ತಿದ್ದೀರಾ ಎಂದು ನೊಂದ ರೂಪ ಎಂಬ ಯುವತಿ ಅಧಿಕಾರಿಗಳ ವಿರುದ್ಧ ಅಸಾಮಾಧಾನ ಹೊರಹಾಕಿ, ಇಷ್ಟು ದಿನ ನೀವು ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದ್ದಾಳೆ.
ನಿಮ್ಮಂತಹ ಅಧಿಕಾರಿಗಳಿಂದ ನಮ್ಮಂಥ ಪಾಪದವರಿಗೆ ನ್ಯಾಯ ಸಿಗುವುದಿಲ್ಲ. ಜನರ ಸೇವೆ ಮಾಡಬೇಕು ಎಂದು ಕೆಲಸಕ್ಕಾಗಿ ಹಾತೊರೆಯುವ ಅದೆಷ್ಟೋ ವಿದ್ಯಾವಂತರು ಕೆಲಸವಿಲ್ಲದೆ ಮನೆಯಲ್ಲಿದ್ದಾರೆ. ನಿಮಗೆ ಬಡವರ ಕಷ್ಟ ಅರ್ಥವಾಗಲ್ಲ. ಅಂತವರಿಗೆ ದಾರಿ ಮಾಡಿಕೊಡಿ, ನೀವು ರಾಜೀನಾಮೆ ನೀಡಿ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.












Click it and Unblock the Notifications