ಮಳೆಯ ಆರ್ಭಟಕ್ಕೆ ಸಿಲುಕಿದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಸುತ್ತು
ಚಿಕ್ಕಮಗಳೂರು, ಆಗಸ್ಟ್ 7: ಆಶ್ಲೇಷಾ ಮಳೆಯ ಅಬ್ಬರ ಚಿಕ್ಕಮಗಳೂರಿನಲ್ಲಿ ಬುಧವಾರವೂ ಮುಂದುವರಿದಿದೆ. ಮಳೆಯ ಅಬ್ಬರಕ್ಕೆ ಜಿಲ್ಲೆಯ ಪಂಚನದಿಗಳು ಪ್ರವಾಹ ಮಟ್ಟ ಮೀರಿ ಹರಿಯುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ಮಳೆಯ ಅವಾಂತರಕ್ಕೆ ಒಂದು ಜೀವ ಬಲಿಯಾಗಿದೆ. ಸಾವಿರಾರು ಎಕರೆ ಭತ್ತ, ಅಡಿಕೆ ತೋಟಗಳು ಜಲಾವೃತಗೊಂಡಿವೆ.
ತುಂಗಾ, ಭದ್ರಾ, ಹೇಮಾವತಿ, ನೇತ್ರಾವತಿ, ವೇದಾವತಿ ನದಿಗಳು ಪ್ರವಾಹ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿವೆ. ಹೇಮಾವತಿ ನದಿಯ ಅಬ್ಬರಕ್ಕೆ ಉದುಸೆ, ಹಂತೂರು ಸೇರಿದಂತೆ ನದಿ ತೀರದ ಹಲವು ಗ್ರಾಮಗಳಲ್ಲಿ ನೂರಾರು ಎಕರೆ ಭತ್ತದ ಗದ್ದೆಗಳು ಮುಳುಗಡೆಯಾಗಿವೆ.
ಹೇಮಾವತಿ ನದಿಯ ಅಬ್ಬರಕ್ಕೆ ನೆರೆಯಲ್ಲಿ ಸಿಲುಕಿದ 9 ಜನರನ್ನು ಹಾಗೂ ಮೂರು ಹಸುಗಳನ್ನು ಹರೇ ರಾಮ ಹರೇ ಕೃಷ್ಣ ಆಶ್ರಮದ ಸಿಬ್ಬಂದಿ ಹಾಗೂ ಅಧಿಕಾರಿಗಳು ರಕ್ಷಣೆ ಮಾಡಿದ್ದು, ಆ ನಂತರ ಅವರಿಗೆ ಹಂತೂರು ಶಾಲೆಯಲ್ಲಿ ಆಶ್ರಯ ನೀಡಲಾಯಿತು.

ಅವಾಂತರ ಸೃಷ್ಟಿಸಿದ ತುಂಗಾ- ಭದ್ರಾ
ಕುದುರೆ ಮುಖ, ಕಳಸ, ಕೆರೆಕಟ್ಟೆ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಬುಧವಾರ ಸಂಪೂರ್ಣ ಜಲಾವೃತವಾಗಿದ್ದು, ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ.
ಇನ್ನು ಭದ್ರಾ ನದಿಯು ಬಾಳೆಹೊನ್ನೂರಿನಲ್ಲಿ ಅವಾಂತರ ಸೃಷ್ಟಿಸಿದೆ. ಭದ್ರಾ ನದಿಯ ನೀರಿನ ಮಟ್ಟ ಹೆಚ್ಚಾದ ಕಾರಣ ಬಾಳೆಹೊನ್ನೂರು ಸಮೀಪ ಅಡಿಕೆ ತೋಟ ಜಲಾವೃತವಾಗಿದೆ. ಅಲ್ಲದೇ ಎಪಿಎಂಸಿ ಆವರಣಕ್ಕೂ ನೀರು ನುಗ್ಗಿದೆ. ಇಟ್ಟಿನಹಟ್ಟಿ ಹಾಗೂ ಕುಳಗೂರು ಗ್ರಾಮಗಳಿಂದ ಶೃಂಗೇರಿಗೆ ಕಲ್ಪಿಸುವ ರಸ್ತೆಯಲ್ಲಿದ್ದ ಕಿರು ಸೇತುವೆ ಮುಳುಗಡೆಯಾದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿದ್ದು, ಸೇತುವೆ ದಾಟಲು ಸ್ಥಳೀಯರು ಹರಸಾಹಸ ಪಡುವಂತಾಗಿತ್ತು.
ಇನ್ನು ತುಂಗೆಯೂ ತನ್ನ ಇಕ್ಕೆಲಗಳಲ್ಲಿ ಅವಾಂತರಗಳನ್ನು ಸೃಷ್ಟಿಸಿದ್ದಾಳೆ. ಎನ್. ಆರ್. ಪುರ ತಾಲೂಕಿನ ಮುತ್ತಿನಕೊಪ್ಪ ಬಳಿ ತುಂಗಾ ನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ನೂರಾರು ಎಕರೆ ಅಡಿಕೆ, ಭತ್ತದ ಗದ್ದೆಗಳು ಜಲಾವೃತವಾಗಿದ್ದವು. ಅಲ್ಲದೇ ಕೊಪ್ಪ ತಾಲೂಕಿನ ಬೆಟ್ಟಮಕ್ಕೆ ಸಮೀಪ ಸೇತುವೆ ನೀರಿನಲ್ಲಿ ಕೊಚ್ಷಿಹೋದ ಪರಿಣಾಮ 15 ಗಿರಿಜನ ಕುಟುಂಬಗಳು ಸಂಪರ್ಕ ಕಳೆದುಕೊಂಡು ಅತಂತ್ರ ಪರಿಸ್ಥಿತಿ ಉಂಟಾಗಿತ್ತು.

ಎರಡು ದಿನ ಚಾರ್ಮಾಡಿ ಘಾಟ್ ಸಂಚಾರ ಬಂದ್
ಚಾರ್ಮಾಡಿ ಘಾಟ್ ನಲ್ಲಿ ಮಂಗಳವಾರ ರಾತ್ರಿಯಿಂದ ಗುಡ್ಡ ಕುಸಿತ ಹೆಚ್ಚಾಗಿದೆ. ಅಲ್ಲಲ್ಲಿ ಮರಗಳು ಧರೆಗೆ ಉರುಳುತ್ತಿದ್ದು, ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಮಂಗಳವಾರ ರಾತ್ರಿಯೂ ಘಾಟ್ ದಕ್ಷಿಣ ಕನ್ನಡ ವ್ಯಾಪ್ತಿಗೆ ಬರುವ ತಿರುವಿನಲ್ಲಿ ಗುಡ್ಡ ಕುಸಿತ ಉಂಟಾದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿತ್ತು.
ಈ ವೇಳೆ ಸ್ಥಳೀಯರು ಹಾಗೂ ಅಧಿಕಾರಿಗಳು ಕೂಡಲೇ ಸ್ಪಂದಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಆದರೆ ಬುಧವಾರ ಸಹ ಮಲೆಯ ಮಾರುತ ಬಳಿ ಹಾಗೂ ಘಾಟ್ ನ ಹಲವು ಕಡೆ ಗುಡ್ಡ ಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರದಿಂದ ಎರಡು ದಿನಗಳ ಕಾಲ ಚಾರ್ಮಾಡಿ ಘಾಟ್ ಸಂಚಾರವನ್ನು ನಿರ್ಬಂಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶ ನೀಡಿದ್ದಾರೆ.
ಇನ್ನು ಹೆಬ್ಬಾಳೆ ಸೇತುವೆ ಮುಳುಗಿದ ಪರಿಣಾಮ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹಳುವಳ್ಳಿ ಮಾರ್ಗವೂ ಬಂದ್ ಆಗಿದೆ. ಈ ಮಾರ್ಗದಲ್ಲಿ ಭೂ ಕುಸಿತ ಉಂಟಾದ ಪರಿಣಾಮ ಈ ಮಾರ್ಗವೂ ಬಂದ್ ಆಗಿದ್ದು, ಹೊರನಾಡಿಗೆ ಸಂಪರ್ಕ ಅಸಾಧ್ಯ ಎಂಬಂತಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಗೆ ಮೊದಲ ಬಲಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಈ ವರೆಗೆ ಯಾವುದೇ ಪ್ರಾಣಾಪಾಯ ಆಗಿರಲಿಲ್ಲ. ಆದರೆ ಬುಧವಾರ ಮಳೆಯು ವ್ಯಕ್ತಿಯನ್ನು ಬಲಿ ತೆಗೆದುಕೊಂಡಿದೆ. ಎನ್. ಆರ್. ಪುರ ತಾಲೂಕಿನ ಮಾಳುರು ದಿಣ್ಣೆ ಗ್ರಾಮದಲ್ಲಿ ಗದ್ದೆ ಕೆಲಸ ಮಾಡುವ ವೇಳೆ ಗಾಳಿ- ಮಳೆಗೆ ಹರಿದು ಬಿದ್ದ ವಿದ್ಯುತ್ ತಂತಿ ತುಳಿದು ಕಾರ್ಮಿಕ ಕುಮಾರ್ ಎಂಬವರು ಮೃತಪಟ್ಟಿದ್ದು, ಈ ಸಂಬಂಧ ಎನ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

ಭೋರ್ಗರೆಯುತ್ತಿವೆ ಜಲಪಾತಗಳು
ಮಳೆಯ ಆರ್ಭಟಕ್ಕೆ ಜಿಲ್ಲೆಯ ಜಲಪಾತಗಳು ಭೋರ್ಗರೆಯುತ್ತಿವೆ. ಜಲಪಾತದ ಬಳಿ ತೆರಳದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ. ಚಿಕ್ಕಮಗಳೂರು ತಾಲೂಕಿನ ಬಾಬಾಬುಡನ್ ಗಿರಿ, ಮುಳ್ಳಯ್ಯನಗಿರಿ ಭಾಗದಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಇಲ್ಲಿನ ಜಲಪಾತಗಳು ಸಹ ಅಬ್ಬರಿಸುತ್ತಿವೆ.
ಇಲ್ಲಿನ ಹೊನ್ನಮ್ಮನಹಳ್ಳ ಕೆಂಪನೆಯ ನೊರೆಯನ್ನು ಸೂಸುತ್ತ ಭೋರ್ಗರೆಯುತ್ತಿದ್ದರೆ, ಜಲಪಾತದ ಅಕ್ಕಪಕ್ಕದಿಂದ ರಸ್ತೆಯವರೆಗೂ ನೀರು ಧುಮ್ಮಿಕ್ಕುತ್ತಿದೆ. ಇನ್ನು ಗಿರಿ ಭಾಗದಲ್ಲಿರುವ ಮತ್ತೊಂದು ಪ್ರಸಿದ್ಧ ಜಲಪಾತವಾದ ಝರಿ ಕೂಡ ಧುಮ್ಮಿಕ್ಕುತ್ತಿದೆ. ಇನ್ನು ಕಲ್ಲತ್ತಿಗಿರಿ ಜಲಪಾತ ಕೂಡ ಮಂಗಳವಾರದಿಂದಲೇ ಅಪಾಯದ ಮಟ್ಟ ಮೀರಿದೆ

ಉರುಳಿದ ಬಸ್
ಕಡೂರು ಸಮೀಪದ ಸರಸ್ವತಿ ಪುರದಲ್ಲಿ ಬಸ್ ಉರುಳಿದ ಘಟನೆ ಸಂಭವಿಸಿದೆ. ಬಸ್ ನಲ್ಲಿದ್ದ 10ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.











Click it and Unblock the Notifications