ನಟ ಕಿಚ್ಚ ಸುದೀಪ್ ಗೆ ಚಿಕ್ಕಮಗಳೂರು ಕೋರ್ಟಿನಿಂದ ಸಮನ್ಸ್
Recommended Video

ಚಿಕ್ಕಮಗಳೂರು, ಫೆಬ್ರವರಿ 06: ನಟ ಕಿಚ್ಚ ಸುದೀಪ ಅವರಿಗೆ ಚಿಕ್ಕಮಗಳೂರಿನ 2 ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ವಾರಸ್ದಾರ ಸೀರಿಯಲ್ ಚಿತ್ರೀಕರಣ ಸಂದರ್ಭದ ವಿವಾದ ಮತ್ತೊಮ್ಮೆ ಸುದೀಪ್ ಅವರನ್ನು ಕಾಡುತ್ತಿದೆ.
ಸುದೀಪ್ ಅವರ ಸಂಸ್ಥೆ ನಿರ್ಮಾಣದ 'ವಾರಸ್ದಾರ' ಧಾರವಾಹಿಯನ್ನು ಚಿಕ್ಕಮಗಳೂರಿನ ದೀಪಕ್ ಮಯೂರ್ ಅವರ ಮನೆ, ತೋಟವನ್ನು ಬಾಡಿಗೆ ಪಡೆದು ಕೊಳ್ಳಲಾಗಿತ್ತು.
ಆದರೆ, ಬಾಡಿಗೆ ಪಾವತಿಸದ ಕಾರಣ ದೀಪಕ್ ಮಯೂರ್ ದೂರು ನೀಡಿದ್ದು, ದೂರನ್ನು ವಾಪಸ್ ಪಡೆಯಲು ಬೆದರಿಕೆ ಹಾಕಲಾಗಿತ್ತು. ಸುದೀಪ್ ಅವರ ವಿರುದ್ಧ ಹಣ ವಂಚನೆ ಆರೋಪ ಮಾಡಿ ಫಿಲ್ಮ್ ಚೇಂಬರ್ ಗೂ ದೂರು ನೀಡಿದ್ದರು.

ಆವತಿ ಗ್ರಾಮದಲ್ಲಿ ಸುದೀಪ್ ನಿರ್ಮಾಣದ 'ವಾರಸ್ದಾರ' ಧಾರವಾಹಿ ಶೂಟಿಂಗ್ ಗೆ ದೀಪಕ್ ಮಯೂರ್ ತೋಟದ ಜಾಗವನ್ನು ಪಡೆಯಲಾಗಿತ್ತು. ಈ ವೇಳೆ ಮಾಡಿಕೊಂಡ ಒಪ್ಪಂದವನ್ನು ಉಲ್ಲಂಘಿಸಲಾಗಿದೆ ಎಂದು ದೀಪಕ್ ಮಯೂರ್ ಆರೋಪಿಸಿದ್ದಾರೆ.
ಶೂಟಿಂಗ್ ವೇಳೆ ಕಾಫಿ, ಮೆಣಸು ಸೇರಿದಂತೆ ಇನ್ನಿತರ ಜಾಗದಲ್ಲಿ ಹಾನಿ ಮಾಡಿ, ಪರಿಹಾರ ನೀಡದೇ ವಂಚಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿಯೂ ಸುದೀಪ್ ವಿರುದ್ಧ ದೀಪಕ್ ಮಯೂರ್ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ಮತ್ತು ಕಾರ್ಯಕಾರಿ ನಿರ್ಮಾಪಕ ಮಹೇಶ್ ಅವರಿಗೆ ಚಿಕ್ಕಮಗಳೂರು 2 ನೇ ಜೆ.ಎಂ.ಎಫ್.ಸಿ. ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಮಾರ್ಚ್ 26 ರಂದು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ.












Click it and Unblock the Notifications