ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಸೋಲಿನ ಕಾರಣ ಬಿಚ್ಚಿಟ್ಟ ಎಸ್.ಎಲ್.ಭೋಜೇಗೌಡ
ಚಿಕ್ಕಮಗಳೂರು, ಮೇ, 14: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿ.ಟಿ.ರವಿ ಅವರು ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ ಅವರ ವಿರುದ್ಧ ಸೋಲುಂಡಿದ್ದಾರೆ. ಇನ್ನು ಸಿ.ಟಿ.ರವಿ ಅವರ ಸೋಲಿಗೆ ಕಾರಣ ಏನೆಂದು ಭೋಜೇಗೌಡ ಅವರು ಮಾಹಿತಿ ಬಿಚ್ಚಿಟ್ಟಿದ್ದಾರೆ.
ಸಿ.ಟಿ.ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ, ಟೀಕೆಗಳು ತಪ್ಪಲ್ಲ. ಆದರೆ, ಅದಕ್ಕೊಂದು ಇತಿಮಿತಿ ಇರುತ್ತಿತ್ತು. ರಾಜಕೀಯ ಅಸ್ತ್ರದ ಟೀಕೆ ಸರಿ, ವೈಯಕ್ತಿಕ ಟೀಕೆ ಸರಿಯಲ್ಲ ಎಂದು ಎಂಎಲ್ಸಿ ಎಸ್.ಎಲ್.ಭೋಜೇಗೌಡ ಅವರು ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು, ಸಿ.ಟಿ.ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ, ದುರಾಡಳಿತ, ದುರಾಂಕಾರ, ನಾಲಿಗೆ ಎಲ್ಲವೂ ಸೇರಿ ಕೂಡಿ ಅವರನ್ನು ಸೋಲಿಸಿವೆ. ಸಿ.ಟಿ.ರವಿ ಬಹಳ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಆಗಿದ್ದರು. ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ಯೋಗವೂ ಲಭಿಸಿತ್ತು. ಆದರೆ ಸಿ.ಟಿ.ರವಿ ಸದನದ ಒಳಗೆ-ಹೊರಗೆ ಎರಡೂ ಕಡೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ಟೀಕೆ ಮಾಡುವಾಗ ವ್ಯಕ್ತಿತ್ವ, ರಾಜಕೀಯ ಮುತ್ಸದ್ದಿತನವನ್ನು ಯೋಚನೆ ಮಾಡಬೇಕು ಎಂದರು.
ಅವರು ಯಾರನ್ನೋ ಮೆಚ್ವಿಸಲು, ಕ್ಷಣಿಕ ಸುಖಕ್ಕೆ ಹಾಗೂ ಕಾರ್ಯಕರ್ತರನ್ನು ಮೆಚ್ಚಿಸಲು ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ ಎಂದು ಲೇವಡಿ ಮಾಡಿದರು. ಅಲ್ಲದೆ ಇನ್ನು ದೇವೇಗೌಡರಿಗೆ ಸಾಬರಾಗಿ ಹುಟ್ಟಲಿ ಅಂದಿದ್ದಾರೆ. ಸಿದ್ದರಾಮಯ್ಯಗೆ ಸಿದ್ರಾಮುಲ್ಲಾ ಖಾನ್ ಎಂದು ಕರೆದಿದ್ದಾರೆ. ಸಿ.ಟಿ.ರವಿ ಯಾರನ್ನು ಬಿಟ್ಟಿಲ್ಲ, ಟೀಕೆ ಮಾಡುವಾಗಲೂ ರಾಜಕೀಯ ಸ್ಟ್ಯಾಂಡರ್ಡ್ನಲ್ಲಿ ಟೀಕೆ ಮಾಡಬೇಕು. ಆದರೆ ಕುಲದ ಬಗ್ಗೆ ಮಾತನಾಡುವಾಗ ಜನ ಆತನ ಹಮ್ಮಿನ ಬಗ್ಗೆ ಯೋಚಿಸುತ್ತಾರೆ ಎಂದರು.
ಭೋಜೇಗೌಡಗೆ ಹಾಲಿನ ಅಭಿಷೇಕ
ಮತ್ತೊಂದೆಡೆ ವಿಧಾನಸಭೆ ಚುನಾವಣೆ ನಡೆಯುವ ಮುನ್ನವೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಎಸ್.ಎಲ್.ಭೋಜೇಗೌಡ ಅವರು ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಜನರ ಬಳಿ ಕೇಳಿಕೊಂಡಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಅದರಂತೆಯೇ ಇದೀಗ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಸಿ.ಟಿ.ರವಿ ಅವರು ಪರಾಭವಗೊಂಡಿದ್ದಾರೆ. ಆದ್ದರಿಂದ ಜೆಡಿಎಸ್ ಕಾರ್ಯಕರ್ತರೆಲ್ಲ ಸೇರಿ ಭೋಜೇಗೌಡಗೆ ಹಾಲಿನ ಅಭಿಷೇಕ ಮಾಡಿದ್ದಾರೆ.
ನಗರಸಭೆ ಸದಸ್ಯ ಎ.ಸಿ.ಕುಮಾರಗೌಡ ನೇತೃತ್ವದಲ್ಲಿ ಭಾನುವಾರ ನಗರದ ಹೊಸಬಡಾವಣೆ ಸರ್ಕಲ್ನಲ್ಲಿ ಭೋಜೆಗೌಡರನ್ನು ಸನ್ಮಾನಿಸಿ ಹಾಲಿನ ಅಭಿಷೇಕ ಮಾಡುವ ಮೂಲಕ ಯುವಕರು ಸಂಭ್ರಮಿಸಿದರು. ಸಿ.ಟಿ.ರವಿ ಸೋಲಿಸಲು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದ ಭೊಜೇಗೌಡರು ಕಾಂಗ್ರೆಸ್ಗೆ ಮತ ನೀಡುವಂತೆ ಬಹಿರಂಗವಾಗು ಪ್ರಚಾರ ಮಾಡಿದ್ದರು. ಇದೀಗ ಕಾಂಗ್ರೆಸ್ ಗೆದ್ದ ಹಿನ್ನೆಲೆ ಕಾರ್ಯಕರ್ತರು ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ.
ಈ ವೇಳೆ ಎಸ್.ಎಲ್.ಬೋಜೇಗೌಡ ಮಾತನಾಡಿ, ಚುನಾವಣೆಯಲ್ಲಿ ಚಿಕ್ಕಮಗಳೂರು ತಾಲೂಕು ವಿಭಿನ್ನ ಕ್ಷೇತ್ರವಾಗಿದೆ. ಎಲ್ಲಾ ಮತದಾರರ ಆಶಯದಂತೆ ಭ್ರಷ್ಟ ಆಡಳಿತವನ್ನು ತೊಲಗಿಸಿ ಜನಾಭಿಪ್ರಾಯದಂತೆ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ನೊಂದ ಜೀವಿಗಳು ಸಮಸ್ಯೆಗಳಿಗೀಡಾದ ಹಿನ್ನೆಲೆಯಲ್ಲಿ ಮತದಾರರು ತಿರುಗಿಬಿದ್ದು ಬದಲಾವಣೆ ಬಯಸಿದ್ದಾರೆ ಎಂದು ತಿಳಿಸಿದರು.












Click it and Unblock the Notifications