ನಿಮ್ಮ ಜೊತೆ ನಾವಿದ್ದೇವೆ ಭಯ ಪಡಬೇಡಿ ಸರ್: ಚಿಕ್ಕಮಗಳೂರಿನಲ್ಲಿ ಸೋಲನುಭವಿಸಿದ ಸಿ.ಟಿ.ರವಿಗೆ ಧೈರ್ಯ ತುಂಬಿದ ಪುಟ್ಟ ಬಾಲಕ
ಚಿಕ್ಕಮಗಳೂರು, ಮೇ, 14: ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ ಗೆಲುವು ಸಾಧಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ಅವರನ್ನು ಪರಾಭವಗೊಳಿಸಿದ್ದಾರೆ. ಇನ್ನು ಸೋಲನುಭವಿಸಿರುವ ಸಿ.ಟಿ.ರವಿ ಅವರಿಗೆ ಚಿಕ್ಕ ಬಾಲಕನೊಬ್ಬ ಧೈರ್ಯ ತುಂಬಿರುವ ಘಟನೆ ನಗರದಲ್ಲಿ ನಡೆದಿದೆ.
ಚಿಕ್ಕಮಗಳೂರು ಸಿ.ಟಿ.ರವಿ ನಿವಾಸಕ್ಕೆ ಭೇಟಿ ನೀಡಿದ ಬಾಲಕನೊಬ್ಬ ಸರ್.. ನಿಮ್ಮ ಜೊತೆ ನಾವಿರುತ್ತೇವೆ ಭಯ ಪಡಬೇಡಿ ಎಂದು ಹೇಳುವ ಮೂಲಕ ಧೈರ್ಯ ತುಂಬಿದ್ದಾನೆ. ಅಲ್ಲದೆ ಸಿ.ಟಿ.ರವಿ ಅವರು 20 ವರ್ಷಗಳ ಬಳಿಕ ಮೊದಲ ಬಾರಿಗೆ ಸೋತಿದ್ದಾರೆ ಎಂದು ಬಾಲಕ ದುಃಖ ವ್ಯಕ್ತಪಡಿಸಿರುವ ವಿಡಿಯೋ ಇದೀಗ ಎಲ್ಲಡೆ ಹರಿದಾಡುತ್ತಿದೆ.

ಈ ಬಾರಿ ಆಡಳಿತಾರೂಢ ಬಿಜೆಪಿಯು ಭಾರೀ ಹಿನ್ನೆಡೆ ಅನುಭವಿಸಿದೆ. ಹಿಂದುತ್ವ ಪ್ರತಿಪಾದಕ ಹಾಗೂ ಬಿಜೆಪಿ ಮಾಜಿ ಸಿ.ಟಿ. ರವಿ ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಇಷ್ಟೇ ಅಲ್ಲದೇ ಚಿಕ್ಕಮಗಳೂರಿನ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದೆ.
ಬಿಜೆಪಿ ಭದ್ರ ಕೋಟೆಯನ್ನು ನುಚ್ಚು ನೂರು ಮಾಡುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ಜಿಲ್ಲೆಯ ಐದಕ್ಕೆ ಐದು ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಒಲಿದಿವೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಎಚ್ ಡಿ ತಮ್ಮಯ್ಯ, ಮೂಡಿಗೆರೆ ಕ್ಷೇತ್ರದಲ್ಲಿ ನಯನ ಮೋಟಮ್ಮ, ಶೃಂಗೇರಿ ಟಿ ಡಿ ರಾಜೇಗೌಡ, ತರೀಕೆರೆ ಜಿ ಎಚ್ ಶ್ರೀನಿವಾಸ್ ಹಾಗೂ ಕಡೂರು ಕೆ ಎಸ್ ಆನಂದ್ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಿಂದಲೇ ಬಿಜೆಪಿ ವಾಷ್ ಔಟ್ ಆದಂತಾಗಿದೆ.
ಚಿಕ್ಕಮಗಳೂರು ಜಿಲ್ಲೆಯನ್ನು ಹಿಂದುತ್ವದ ಭದ್ರಕೋಟೆಯನ್ನಾಗಿ ಪರಿವರ್ತಿಸಲು ಬಿಜೆಪಿ ಸಫಲವಾಗಿತ್ತು. ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿರುವ ದತ್ತ ಪೀಠ ವಿವಾದವನ್ನು ಮುನ್ನೆಲೆಗೆ ತಂದು ಸಂಘ ಪರಿವಾರದ ಆಶೋತ್ತರಗಳನ್ನು ಜಿಲ್ಲೆಯಾದ್ಯಂತ ಹರಡಲು ಯಶಸ್ವಿಯಾಗಿತ್ತು.
ಚಿಕ್ಕಮಗಳೂರು ಕ್ಷೇತ್ರದ ಶಾಸಕರಾಗಿದ್ದ ಸಿಟಿ ರವಿ ಅವರು ಪ್ರಬಲ ಹಿಂದುತ್ವವಾದಿಗಳು. ಅವರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯೂ ಹೌದು. ಆರ್ಎಸ್ಎಸ್ ಹಾಗೂ ಸಂಘ ಪರಿವಾರಕ್ಕೆ ಹತ್ತಿರದವರೂ ಹೌದು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಸಿಟಿ ರವಿ ಭಾರೀ ಅಂತರದ ಸೋಲು ಕಂಡಿದ್ದಾರೆ. ಅವರ ಆಪ್ತರಾಗಿದ್ದ ಕಾಂಗ್ರೆಸ್ನ ತಿಮ್ಮಯ್ಯ ಅವರಿಂದಲೇ ಪರಾಭವಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಗಮನಿಸುವುದಾದರೆ, ಚಿಕ್ಕಮಗಳೂರು ಜಿಲ್ಲೆಯ ಜನರು ಬಿಜೆಪಿ ಹಾಗೂ ಸಂಘ ಪರಿವಾರದ ಹಿಂದುತ್ವಕ್ಕೆ ಮರಳಾಗದೇ ಬದುಕಿನ ಅನಿವಾರ್ಯತೆಗಳನ್ನು ಅರಿತುಕೊಂಡು ಮತ ಚಲಾಯಿಸಿದ್ದಾರೆ ಎಂಬ ವಾದವೊಂದು ಹುಟ್ಟಿಕೊಂಡಿದೆ.












Click it and Unblock the Notifications