ಶಾಸಕರು ರಸ್ತೆ ಉದ್ಘಾಟಿಸಬೇಕೆಂದು ತಂತಿ ಹಾಕಿದ ಬಿಜೆಪಿಗರು!
ಚಿಕ್ಕಮಗಳೂರು, ಮೇ 17: ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ಬಿಜೆಪಿ ಶಾಸಕರು ಬಂದು ಉದ್ಘಾಟನೆ ಮಾಡಬೇಕು ಎಂದು ಬಿಜೆಪಿ ಸದಸ್ಯರು ರಸ್ತೆ ಬಂದ್ ಮಾಡಿರುವ ಘಟನೆ ನಡೆಸಿದೆ. 3.20 ಕೋಟಿ ರುಪಾಯಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದರೂ ಬಿಜೆಪಿ ಶಾಸಕರು ಬಂದು ಉದ್ಘಾಟನೆ ಮಾಡವ ತನಕ ಜನರು ಓಡಾಡುವಂತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಜೆಪಿ ಸದಸ್ಯರ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ನಡೆದಿರುವುದು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ. ಕಳಸದಿಂದ ನಕ್ಸಲ್ ಪೀಡಿತ ಪ್ರದೇಶಗಳಾದ ಮಾವಿನಹೊಲ ಹಾಗೂ ಮಣ್ಣಿನ್ ಪಾಲ್ ಗ್ರಾಮಕ್ಕೆ ಹೋಗುವ ರಸ್ತೆಗೆ 2018ರಲ್ಲೇ 3 ಕೋಟಿ 20 ಲಕ್ಷ ಮಂಜೂರು ಆಗಿ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ.
ಆದರೆ ಇಲ್ಲಿನ ಬಿಜೆಪಿ ಸದಸ್ಯರು ಮೂಡಿಗೆರೆ ಶಾಸಕ ಎಂ. ಪಿ. ಕುಮಾರಸ್ವಾಮಿ ಬಂದು ಉದ್ಘಾಟನೆ ಮಾಡೋವ ತನಕ ರಸ್ತೆಯಲ್ಲಿ ಸಂಚಾರ ನಡೆಸಲು ಬಿಡಲ್ಲ ಎಂದು ರಸ್ತೆಗೆ ಬೇಲಿ ಹಾಕಿ, ಬಂಡೆ ಇಟ್ಟು ಪೊಲೀಸ್ ಇಲಾಖೆಯ ಬ್ಯಾರಿಕೇಡ್ ಇಟ್ಟು ಬೀಗ ಹಾಕಿದ್ದಾರೆ. ಜನಸಾಮಾನ್ಯರು ಸೈಡಲ್ಲಿ ನಡೆದಾಡಬಹುದು ಅಷ್ಟೆ. ಬೈಕ್ ಕೂಡ ಓಡಾಡುವಂತಿಲ್ಲ. ಸರ್ಕಾರದ ದುಡ್ಡಲ್ಲಿ ನಿರ್ಮಿಸಿದ ರಸ್ತೆಗೆ ಬಿಜೆಪಿಗರ ದೌರ್ಜನ್ಯದ ವಿರುದ್ಧ ಕಳಸ ಜನರು ಅಸಮಾಧಾನ ಹೊರಹಾಕಿದ್ದಾರೆ.
ಆದಿವಾಸಿಗಳೇ ಹೆಚ್ಚಿರುವ ಇಲ್ಲಿಗೆ 2018ರಲ್ಲಿ ಎಚ್. ಡಿ. ರೇವಣ್ಣ ಲೋಕೋಪಯೋಗಿ ಸಚಿವರಾದ ಸಂದರ್ಭದಲ್ಲಿ 3 ಕೋಟಿ 20 ಲಕ್ಷ ವೆಚ್ಚದಲ್ಲಿ 4 ಕಿ. ಮೀ. ಕಾಂಕ್ರೀಟ್ ರಸ್ತೆಗೆ ಮಂಜೂರಾಗಿ ಈಗ ಕಾಮಗಾರಿ ಮುಗಿದು ತಿಂಗಳಾಗಿದೆ. ಹೊರನಾಡು ಗ್ರಾಮ ಪಂಚಾಯಿತಿ ಬಿಜೆಪಿ ಸದಸ್ಯರು ರಸ್ತೆ ಉದ್ಘಾಟನೆಗೆ ಶಾಸಕ ಎಂ. ಪಿ. ಕುಮಾರಸ್ವಾಮಿ ಕಾದು ರಸ್ತೆಗೆ ಬೇಲಿ ಹಾಕಿದ್ದಾರೆ. ಈ ಮಾರ್ಗ ಜನೋಪಯೋಗಿಯಾಗಿದ್ದು ಸ್ಥಳೀಯರು, ಪ್ರವಾಸಿಗರು ಅವಲಂಬಿರಾಗಿದ್ದಾರೆ. ಈ ರಸ್ತೆ ಬಸರೀಕಟ್ಟೆ ಹಾಗೂ ಬಾಳೆಹೊನ್ನೂರಿಗೂ ಸಂಪರ್ಕ ಕಲ್ಪಿಸಲಿದ್ದು, 10ಕ್ಕೂ ಹೆಚ್ಚು ಹಳ್ಳಿಗಳ ಜೀವನಾಡಿಯಾಗಿದೆ. ಇದು ಶಾರ್ಟ್ ಕಟ್ ಎಂದು ಪ್ರವಾಸಿಗರು ಕೂಡ ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ಬಿಜೆಪಿಗರು ವ್ಯವಸ್ತೆಯ ಮೇಲೆ ಸವಾರಿ ಮಾಡುತ್ತಿದ್ದಾರೆ.
ಈ ಬಗ್ಗೆ ಮಾತಾನಾಡಿರುವ ಸ್ಥಳೀಯರಾದ ಧರ್ಮಪಾಲ್, "ನಮಗೆ ರಸ್ತೆಯೇ ಇಲ್ಲ, ಕಾಮಗಾರಿ ಮುಗಿದು ಎರಡು ತಿಂಗಳು ಕಳೆದರೂ ಇಲ್ಲಿನ ರಸ್ತೆಯಲ್ಲಿ ಓಡಾಡೋಕೆ ಅವಕಾಶ ಕೊಟ್ಟಿಲ್ಲ, ರಸ್ತೆಗೆ ಬೇಲಿ ಹಾಕಿ 15 ದಿನ ಆಯ್ತು, ಇಲ್ಲಿವರೆಗೂ ಒಬ್ಬರು ಬಂದು ಬೇಲಿ ತೆಗೆಯುವ ಕೆಲಸ ಮಾಡಿಲ್ಲ, ಊರಿನಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೇ ಯಾರು ಹೊಣೆ?" ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಮೂಡಿಗೆರೆ ಶಾಸಕ ಎಂ. ಪಿ. ಕುಮಾರಸ್ವಾಮಿ, "ರಸ್ತೆ ಕಾಮಗಾರಿ ಇನ್ನು ಸಂಪೂರ್ಣವಾಗಿ ಮುಗಿದಿಲ್ಲ. ಜನರಿಗೆ ಆತುರ, ಕಾಮಗಾರಿ ಮುಗಿಯೋವರೆಗೂ ಕಾಯುವ ತಾಳ್ಮೆ ಇಲ್ಲ, ಅಲ್ಲಿ ಬೇಲಿಯೇ ಹಾಕಿಲ್ಲ" ಎಂದು ಹಾರಿಕೆ ಉತ್ತರ ನೀಡಿದ್ದಾರೆ.
ಒಟ್ಟಾರೆ ಕಾಫಿನಾಡಲ್ಲಿ ಹೊಳೆನೀರು ಕುಡಿಯಲು ದೊಣ್ಣೆ ನಾಯಕನ ಅಪ್ಣಣೆ ಬೇಕೆ? ಎಂಬ ಪ್ರಶ್ನೆ ಮೂಡಿದೆ. ಸರ್ಕಾರದ ದುಡ್ಡಿನ ಮೇಲೆ ಬಿಜೆಪಿ ಈ ರೀತಿ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿದೆ ಅಂದರೆ ಕಾಫಿನಾಡ ಬಿಜೆಪಿಗರಿಗೆ ಹೇಳೋರಿಲ್ಲ, ಕೇಳೋರಿಲ್ವಾ? ಎಂಬ ಪ್ರಶ್ನೆ ಮೂಡಿದೆ. ಜಿಲ್ಲೆಯಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರು ಕಾಫಿನಾಡಿನ ಅಧಿಕಾರಿಗಳು ಮಾತ್ರ ಕೈ ಕಟ್ಟಿ ಕುಳಿತಿದ್ದಾರೆ.
Recommended Video