ಒಡೆದು ಆಳುವ ತತ್ವದ ಮೇಲೆ ನಂಬಿಕೆ ಇಲ್ಲ: ಬಿಜೆಪಿ ಶಾಸಕ ಸಿ.ಟಿ.ರವಿ
ಚಿಕ್ಕಮಗಳೂರು, ನವೆಂಬರ್ 11: ರಾಜಕಾರಣ ಎಂದರೆ ಒಡೆದು ಆಳುವವರು ಎನ್ನುವ ಒಂದು ಭಾವನೆ ಇದೆ. ನನಗೆ ಆ ತತ್ವದ ಮೇಲೆ ನಂಬಿಕೆ ಇಲ್ಲ. ಕೂಡಿಸಿ ಒಲಿಸಿಕೊಳ್ಳುವುದರಲ್ಲಿ ನಂಬಿಕೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಬಿಜೆಪಿ ಯುವ ಮೋರ್ಚಾ ವತಿಯಿಂದ ಚಿಕ್ಕಮಗಳೂರು ತಾಲೂಕಿನ ಲಕ್ಕುಮನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವ ಸಂಜೆ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕ್ರೀಡೆ ಸಣ್ಣವರಿಂದ ದೊಡ್ಡವರ ವರೆಗೆ ಆನಂದ ತರುತ್ತದೆ. ರಾಜಕಾರಣ ಎಂದರೆ ಚುನಾವಣೆಯಿಂದ ಚುನಾವಣೆಗೆ ಮುಖ ತೋರಿಸುವವರಲ್ಲ. ರಾಜಕಾರಣ ಸಮಾಜವನ್ನು ಜೋಡಿಸುವ ಸಾಧನವಾಗಬೇಕು ಎಂದು ಹೇಳಿದರು.
ಸತೀಶ್ ಜಾರಕಿಹೊಳಿ, ಕಾಂಗ್ರೆಸ್ಗೆ ಹಿಂದೂಗಳ ಸಾಮರ್ಥ್ಯ ತೋರಿಸಬೇಕು: ಸಿ.ಟಿ.ರವಿ
ಒಡೆದಾಳುವ ರಾಜಕಾರಣ ಮಾಡುವ ಜನವೇ ಬೇರೆ. ಅವರು ಜಾತಿ ಪ್ರಶ್ನೆ ದೊಡ್ಡದು ಮಾಡುತ್ತಾರೆ. ಜಗಳವಾಡಿಸಲು ಏನು ದಾರಿ ಎಂದು ಹುಡುಕುತ್ತಾರೆ. ಆದರೆ ನಾವು ಕೂಡಿಸುವುದು ಹೇಗೆ ಎನ್ನುವುದನ್ನು ಯೋಚಿಸುತ್ತೇವೆ ಎಂದು ಹೇಳಿದರು.
ಎಷ್ಟೇ ಸುಂದರನಾಗಿದ್ದರೂ ಸತ್ತ ಮೇಲೆ ಇಟ್ಟುಕೊಳ್ಳಲು ಸಾಧ್ಯವಿಲ್ಲ
ಮಾತು ಮುಂದುವರಿಸಿದ ಸಿ.ಟಿ ರವಿ ಕಷ್ಟ ಮತ್ತು ಸುಖ ಎರಡನ್ನೂ ಸಮಭಾವದಿಂದ ಸ್ವೀಕಾರ ಮಾಡಬೇಕು. ಕಷ್ಟ ಬಂದಾಗ ಕುಗ್ಗಬಾರದು, ಸುಖ ಬಂದಾಗ ಹಿಗ್ಗಬಾರದು. ಜೀವನವನ್ನು ಸಮ ಚಿತ್ತದಿಂದ ಸ್ವೀಕಾರ ಮಾಡಬೇಕು. ಆಟವೂ ಕೂಡ ಬದುಕಿನ ಸಂದೇಶವನ್ನು ನೀಡುತ್ತದೆ. ಜಗತ್ತನ್ನು ಈಶ್ವರ ತತ್ವ ವ್ಯಾಪಿಸಿದೆ. ಎಲ್ಲರಲ್ಲೂ ಭಗವಂತನಿದ್ದಾನೆ. ಈ ತತ್ವ ನಮ್ಮೊಳಗೆ ಬಂದರೆ, ಬೇಧ ಭಾವಕ್ಕೆ ದಾರಿ ಇರುವುದಿಲ್ಲ. ನಮ್ಮ ಜೊತೆಗೆ ಬರುವುದು ನಮ್ಮ ಸಂಪತ್ತು, ಅಧಿಕಾರ, ಸೌಂದರ್ಯಗಳಲ್ಲ. ಮನುಷ್ಯ ಎಷ್ಟೇ ಸುಂದರನಾಗಿದ್ದರೂ ಸತ್ತ ಮೇಲೆ ಆತನನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಸತ್ತ ಮೇಲೆ ಬಂಧು- ಬಾಂಧವರು ಜೊತೆಗೆ ಬರುವುದಿಲ್ಲ ಎಂದು ಹೇಳಿದರು.
ಮನಸ್ಸುಗಳನ್ನು ಕಟ್ಟಲು ರಾಜಕಾರಣಕ್ಕೆ ಬಂದಿದ್ದೇವೆ
ಇನ್ನು ಮನುಷ್ಯ ಸತ್ತ ಮೇಲೆ ಸಂಪತ್ತು, ಶ್ರೀಮಂತಿಕೆ ಯಾವುದೂ ಬರುವುದಿಲ್ಲ. ಹಾಗಾದರೆ ನಮ್ಮ ಜೊತೆಗೆ ಜೀವನದಲ್ಲಿ ಬರುವುದು ನಾವು ಗಳಿಸಿದ ಪಾಪ ಮತ್ತು ನಾವು ಗಳಿಸಿದ ಪುಣ್ಯ ಮಾತ್ರ. ಪರೋಪಕಾರ ಮಾಡಿದರೆ ಪುಣ್ಯ ಬರುತ್ತದೆ. ಪರಪೀಡನೆ ಮಾಡಿದರೆ ಪಾಪ ಬರುತ್ತದೆ. ಅದಕ್ಕೆ ದಾರ್ಶನಿಕರು ಹೇಳಿದ್ದು ಒಳಿತು ಮಾಡು ಮನುಜ, ಇರೋದು ಮೂರು ದಿವಸ ಎಂದು. ಈ ಕಾರಣಕ್ಕೆ ನಗು ನಗುತ, ಆನಂದವಾಗಿ ಕಾಲ ಕಳೆಯಬೇಕು. ನಾವು ಮನಸ್ಸುಗಳನ್ನು ಕಟ್ಟಬೇಕು, ಅಭಿವೃದ್ಧಿ ಮಾಡಬೇಕು. ಇದಕ್ಕಾಗಿ ನಾವು ಎಂದು ರಾಜಕಾರಣಕ್ಕೆ ಬಂದಿದ್ದೇವೆ ಎಂದರು.
ದತ್ತಮಾಲಾ ಅಭಿಯಾನ: ಹೊಸ ಆಚರಣೆಗೆ ಅವಕಾಶ ಇಲ್ಲ ಎಂದ ಚಿಕ್ಕಮಗಳೂರು ಜಿಲ್ಲಾಧಿಕಾರಿ
ಸಹಕಾರ ಸಂಘಕ್ಕೆ ಚಾಲನೆ ನೀಡಿದ ಸಿ.ಟಿ ರವಿ
ಚಿಕ್ಕಮಗಳೂರಿನ ಚಿಕ್ಕದೇವನೂರು ಸಹಕಾರ ಸಂಘದಲ್ಲಿ ಸಾಲ ಸೌಲಭ್ಯ ವಿತರಣೆ ಕಾರ್ಯಕ್ಕೆ ಸಿ.ಟಿ ರವಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ರಾಜಕಾರಣವನ್ನು ಚುನಾವಣೆ ಬಂದಾಗ ಮಾಡೋಣ. ಬಾಗಿಲಿನಿಂದ ಹೊರಗೆ ಮಾಡೋಣ. ಆದರೆ ಮುಖ ನೋಡಿ ಮಣೆ ಹಾಕದೆ ಯಾರ ದಾಖಲೆ ಸರಿ ಇರುತ್ತದೆ ಅವರಿಗೆ ಸಾಲ ನೀಡಿ ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ರೈತರಿಗೆ ಒಳ್ಳೆಯದಾಗಬೇಕು ಎನ್ನುವುದಷ್ಟೇ ನಮ್ಮ ಸದುದ್ದೇಶ
ಬೇರೆ ಬೇರೆ ಕಾರಣಕ್ಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದ ದೇವನೂರು, ಚಿಕ್ಕದೇವನೂರು ಸಹಕಾರ ಸಂಘಗಳನ್ನು ರೈತರಿಗೆ ನೆರವಾಗಬೇಕು ಎನ್ನುವ ದೃಷ್ಟಿಯಿಂದ ಪುನರಾರಂಭಿಸಲಾಗಿದೆ. ಈ ಯೋಜನೆಯಿಂದ ಮೊದಲ ಬಾರಿಗೆ 64 ಲಕ್ಷ ರೂಪಾಗಳನ್ನು 36 ಸದಸ್ಯರಿಗೆ ನೀಡಲಾಗುತ್ತಿದೆ .ಇದರ ಸಂಖ್ಯೆ ಮುಂದೆ ಹೆಚ್ಚಾಗುತ್ತಾ ಹೋಗುತ್ತದೆ ಎಂದರು.
ಸಹಕಾರ ಕ್ಷೇತ್ರ ಇರುವುದು ಜೋಡಿಸಲಿಕ್ಕೆ, ಅದರಿಂದ ಒಡೆಯುವಂತಾಗಬಾರದು. ಅದರಲ್ಲಿ ನಮಗೆ ನಂಬಿಕೆಯೂ ಇಲ್ಲ. ದುರ್ಬಳಕೆ ಮಾಡಬೇಕೆಂಬ ಆಸೆಯೂ ಇಲ್ಲ. ರೈತರಿಗೆ ಒಳ್ಳೆಯದಾಗಬೇಕು ಎನ್ನುವುದಷ್ಟೇ ನಮ್ಮ ಸದುದ್ದೇಶ. ನಿಡಘಟ್ಟ, ದೇವನೂರು, ಚಿಕ್ಕದೇವನೂರು, ನಾಗರಾಳು ಹಾಗೂ ಜೋಡಿ ಹೋಚಿಹಳ್ಳಿ ಪಂಚಾಯತಿಗಳಲ್ಲಿ ಸಹ ಸಹಕಾರ ಸಂಘ ಪ್ರಾರಂಭವಾಗಲಿದೆ ಎಂದರು.
ರೈತರು ಸಾಲವನ್ನು ಬಂಡವಾಳವಾಗಿ ಉಪಯೋಗಿಸಿಕೊಳ್ಳಿ
ಇನ್ನು ರೈತರು ಅವಶ್ಯಕತೆಗಾಗಿ ದುಡಿಯುವ ಬಂಡವಾಳವಾಗಿ ಸಾಲವನ್ನು ಉಪಯೋಗಿಸಿಕೊಳ್ಳಬೇಕು. ಬೆಳೆ ಬೆಳೆಯಲು, ಮೌಲ್ಯವರ್ಧನೆ ಮಾಡಲು ಸಾಲ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು ಎಂದರು. ಅಲ್ಲದೇ ಚಿಕ್ಕದೇವನೂರು ಪಂಚಾಯತಿಗೆ 7.64 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು 2018 ರಿಂದ ಇಲ್ಲಿವರೆಗೆ ನೀಡಿದ್ದೇವೆ ಎಂದು ಸಿ.ಟಿ ರವಿ ತಿಳಿಸಿದರು.
ಈ ವೇಳೆ ಉಪಸ್ಥಿತರಿದ್ದ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜಪ್ಪ ಮಾತನಾಡಿ, ನಿಷ್ಕ್ರೀಯಗೊಂಡಿದ್ದ ಸಹಕಾರಿ ಸಂಘಗಳಿಗೆ ಆರ್ಥಿಕ ನೆರವು ನೀಡಿ ಪುನಶ್ಚೇತನಗೊಳಿಸಲು ಗೊಳಿಸಲು ಸಹಕರಿಸಿದ ಶಾಸಕ ಸಿ.ಟಿ.ರವಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಶಾಸಕರೂ ಆದ ಡಿ.ಎಸ್.ಸುರೇಶ್ ಹಾಗೂ ಬ್ಯಾಂಕ್ನ ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಕೃತಜ್ಞತೆ ಸಲ್ಲಿಸಲ್ಲಿಸಿದರು.