ನಿಗೂಢವಾಗಿ ಸಾವನ್ನಪ್ಪಿದ ಚಂದ್ರುವಿಗೂ ಗೌರಿಗದ್ದೆ ಆಶ್ರಮಕ್ಕೂ ಇರುವ ಸಂಬಂಧವೇನು?
ಚಿಕ್ಕಮಗಳೂರು, ನವೆಂಬರ್ 7: ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಕಳೆದ ಭಾನುವಾರ ನಿಗೂಢವಾಗಿ ಕಾಣೆಯಾಗಿದ್ದರು. ಆ ನಂತರ ಅವರು ಶವವಾಗಿ ಪತ್ತೆಯಾಗಿದ್ದರು. ಈ ಸಾವು ಹಲವು ಶಂಕೆಗಳನ್ನು ಹುಟ್ಟುಹಾಕಿದೆ.
ಕಾಣೆಯಾದ ಐದು ದಿನಗಳ ಬಳಿಕ ಹೊನ್ನಾಳಿ-ನ್ಯಾಮತಿ ನಡುವೆ ಇರುವ ತುಂಗಾ ಮೇಲ್ದಂಡೆ ನಾಲೆಯ ತಡೆಗೋಡೆ ಬಳಿ ಚಂದ್ರಶೇಖರ್ ಕಾರು ಪತ್ತೆಯಾಗಿತ್ತು. ಈ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ, ಕಾಲುವೆಯಲ್ಲಿ ಸಿಕ್ಕ ಕಾರಿನ ಹಿಂಬದಿ ಸೀಟ್ನಲ್ಲಿ ಚಂದ್ರಶೇಖರ್ ಮೃತದೇಹ ಪತ್ತೆಯಾಗಿತ್ತು.
ಕಾರು ವೇಗವಾಗಿ ಚಲಾಯಿಸಿದ ಕಾರಣ ಅಪಘಾತವಾಗಿರಬಹುದು ಎಂಬ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದರು. ಶಾಸಕ ರೇಣುಕಾಚಾರ್ಯ ಹಾಗೂ ಕುಟುಂಬಸ್ಥರು ಇದೊಂದು ಪೂರ್ವನಿಯೋಜಿತ ಕೊಲೆ ಎಂದೇ ಆರೋಪಿಸುತ್ತಿದ್ದಾರೆ. ಚಂದ್ರು ಕೈಯಲ್ಲಿ ಹಗ್ಗ ಕಂಡು ಬಂದಿದೆ. ಸೀಟ್ ಬೆಲ್ಟ್ ಹಾಕಿದ್ದರೂ ಹಿಂಬದಿ ಸೀಟ್ಗೆ ಹೋಗಿದ್ದು ಹೇಗೆ..? ಎನ್ನುವುದು ಕುಟುಂಬಸ್ಥರ ಪ್ರಶ್ನೆಯಾಗಿದೆ.

ಚಂದ್ರಶೇಖರ್ ಸಾವು ರಾಜ್ಯದಲ್ಲೇ ಸಂಚಲನ ಮೂಡಿಸಿದೆ. ನಾಪತ್ತೆಯಾಗುವ ಮೊದಲು ಚಂದ್ರಶೇಖರ್ ಯಾರ ಜೊತೆ ಇದ್ದರು, ಎಲ್ಲಿಗೆ ಹೋಗಿದ್ದರು, ಯಾರೊಂದಿಗೆ ಕೊನೆಯದಾಗಿ ಸಂಪರ್ಕಕ್ಕೆ ಸಿಕ್ಕಿದ್ದರು ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಕೊನೆಯ ಬಾರಿ ಭೇಟಿ ನೀಡಿದ ಸ್ಥಳದ ಬಗ್ಗೆ ಮಾಹಿತಿ ಬಹಿರಂಗವಾಗಿದೆ.
ಚಂದ್ರಶೇಖರ್ ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗುವ ಕೆಲ ಗಂಟೆಗಳ ಮುಂಚೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ಒಂದು ಪ್ರತಿಷ್ಠಿತ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ಆಶ್ರಮಕ್ಕೂ ಮೃತ ಚಂದ್ರಶೇಖರ್ಗೂ ನಿಕಟ ಸಂಪರ್ಕವಿರುವುದು ತಿಳಿದುಬಂದಿದೆ. ಚಂದ್ರಶೇಖರ್ ಗೌರಿಗದ್ದೆಯ ಆಶ್ರಮಕ್ಕೆ ಆಗಾಗ ತೆರಳುತ್ತಿದ್ದು, ಆಶ್ರಮದ ಭಕ್ತರಾಗಿದ್ದರು ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ.
ಚಂದ್ರಶೇಖರ್ ತನ್ನ ಸ್ನೇಹಿತ ಕಿರಣ್ ಜೊತೆಯಲ್ಲಿ ಆಗಾಗ ಗೌರಿಗದ್ದೆ ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು. ಆಶ್ರಮದಲ್ಲಿ ಅವರನ್ನು ಆತ್ಮೀಯವಾಗಿಯೇ ಕಾಣುತ್ತಾ ಚಂದ್ರು ಅಂತಾನೆ ಎಲ್ಲರೂ ಕರೆಯುತ್ತಿದ್ದರು. ಚಂದ್ರಶೇಖರ್ ಗೌರಿಗದ್ದೆಯ ಆಶ್ರಮದಲ್ಲಿ ಸಿಬ್ಬಂದಿಯಂತೆ ಭಕ್ತರಿಗೆ ಊಟ ಬಡಿಸುತ್ತಿದ್ದರು. ತೆಂಗಿನ ಕಾಯಿ ಸುಲಿಯುತ್ತಿದ್ದರು. ಎಲ್ಲರಂತೆ ಆಶ್ರಮದ ಕೆಲಸಗಳನ್ನು ಮಾಡಿ ಸರಳವಾಗಿ ಇರುತ್ತಿದ್ದರು ಎನ್ನುವ ವಿಚಾರವನ್ನು ಆಶ್ರಮದ ಸಿಬ್ಬಂದಿ ಹೇಳಿದ್ದಾರೆ.
ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ಆಶ್ರಮಕ್ಕೆ ಬಂದಿದ್ದ ಚಂದ್ರಶೇಖರ್ ಹಾಗೂ ಆತನ ಸ್ನೇಹಿತ ಕಿರಣ್ 9.40ರ ವರೆಗೂ ಗುರೂಜಿ ಕಾದಿದ್ದರು. ಬಳಿಕ ಗುರೂಜಿ ಆರ್ಶೀವಾದ ಪಡೆದು, 9.45ಕ್ಕೆ ಆಶ್ರಮದಿಂದ ತೆರಳಿದ್ದರು ಎನ್ನಲಾಗಿದೆ. ಪೊಲೀಸರು ಈ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದು, ಈಗಾಗಲೇ ತನಿಖಾ ತಂಡ ಗೌರಿಗದ್ದೆ ಆಶ್ರಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.












Click it and Unblock the Notifications