ಅಲೆದು ಅಲೆದು ಸಾಕಾಯ್ತು, ನಾಲ್ಕು ತಿಂಗಳು ಕಳೆದರೂ ಸಿಗುತ್ತಿಲ್ಲ ಮಾಸಾಶನ
ಚಿಕ್ಕಮಗಳೂರು, ಜನವರಿ 02: ಅಶಕ್ತರು, ವಯೋವೃದ್ಧರಿಗೆ ಆಸರೆಯಾಗಲೆಂದು ಸರ್ಕಾರ ಮಾಸಾಶನದ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಈಗ ಆ ಮಾಸಾಶನವನ್ನು ಪಡೆಯಲು ಫಲಾನುಭವಿಗಳು ಸರ್ಕಾರಿ ಕಚೇರಿಗಳ ಬಾಗಿಲಿಗೆ ಪ್ರತಿದಿನ ಅಲೆದಾಡುವಂತಾಗಿದೆ.
ಮಲೆನಾಡು ಚಿಕ್ಕಮಗಳೂರಿನಲ್ಲಿ ಮೂರ್ನಾಲ್ಕು ತಿಂಗಳುಗಳಿಂದ ಅಂಗವಿಕಲರಿಗೆ, ವಯೋವೃದ್ಧರಿಗೆ, ವಿಧವೆಯರಿಗೆ ನೀಡುತ್ತಿದ್ದ ಮಾಸಾಶನ ದೊರಕುತ್ತಿಲ್ಲ. ಪ್ರತಿ ತಿಂಗಳು ಪೋಸ್ಟ್ ಆಫೀಸ್ ಮೂಲಕ ತಮ್ಮ ಮನೆ ಬಾಗಿಲಿಗೆ ಬರುತ್ತಿದ್ದ ವೇತನ ನಾಲ್ಕು ತಿಂಗಳಾದರೂ ಕೈ ಸೇರಿಲ್ಲ. ಹೀಗಾಗಿ ಮಾಸಾಶನದ ಸಾವಿರಾರು ಫಲಾನುಭವಿಗಳು ಸರ್ಕಾರಿ ಕಚೇರಿಗಳ ಬಾಗಿಲಿಗೆ ದಿನಂಪ್ರತಿ ಅಲೆಯುತ್ತಿದ್ದಾರೆ. ಅಂಚೆ ಕಚೇರಿಯಲ್ಲಿ ವಿಚಾರಿಸಿದರೆ, ಅವರು ತಾಲೂಕು ಕಚೇರಿ, ಜಿಲ್ಲಾ ಖಜಾನೆ, ಜಿಲ್ಲಾಧಿಕಾರಿಗಳ ಕಚೇರಿ ಕಡೆ ಕೈ ತೋರಿಸುತ್ತಿದ್ದಾರೆ.
ತಮ್ಮ ಆರೋಗ್ಯ, ಔಷಧಿ ಜೊತೆಗೆ ಜೀವನ ನಿರ್ವಹಣೆಗೂ ಈ ಹಣವನ್ನೇ ನಂಬಿಕೊಂಡಿರುವ ಅಂಗವಿಕರು, ವಯೋವೃದ್ಧರು ಹಣ ಸಿಗದೇ ಪರದಾಡುತ್ತಿದ್ದಾರೆ. ಇನ್ನು ವಿಧವಾ ವೇತನದಿಂದಲೇ ಅದೆಷ್ಟೋ ಮಹಿಳೆಯರ ಜೀವನದ ಬಂಡಿ ಸಾಗುತ್ತಿದ್ದು, ಆ ವೇತನವೂ ಬರದೇ ಬದುಕು ಸಾಗಿಸುವುದು ಕಷ್ಟಕರವಾಗಿದೆ ಎನ್ನುತ್ತಿದ್ದಾರೆ.

ಒಟ್ಟಾರೆ ಸರ್ಕಾರದ ಈ ಮಾಸಾಶನದಿಂದ ಬದುಕು ನಿರ್ವಹಣೆ ಮಾಡುತ್ತಿದ್ದ ಅಶಕ್ತರು ತಮ್ಮ ಹಣಕ್ಕಾಗಿ ಪರದಾಡುತ್ತಿರುವುದನ್ನು ನೋಡಿದರೆ ಮರುಕ ಹುಟ್ಟದೇ ಇರದು. ಇನ್ನಾದರೂ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಶಕ್ತರ ಬದುಕಿಗೆ ನೆರವಾಗಬೇಕು.












Click it and Unblock the Notifications