4 ವರ್ಷಗಳ ಬಳಿಕ ಚಿಕ್ಕಮಗಳೂರು ನಗರಕ್ಕೆ ದತ್ತಾತ್ರೇಯ ವಿಗ್ರಹ
ಚಿಕ್ಕಮಗಳೂರು, ನವೆಂಬರ್ 10: ನಾಲ್ಕು ವರ್ಷಗಳ ಬಳಿಕ ದತ್ತಾತ್ರೇಯ ಸ್ವಾಮಿ ವಿಗ್ರಹ ಚಿಕ್ಕಮಗಳೂರು ನಗರಕ್ಕೆ ಮರಳಿ ಬಂದಿದೆ. ಪೊಲೀಸರು ವಶಪಡಿಸಿಕೊಂಡಿದ್ದ ಕಡೂರು ತಾಲೂಕಿನ ದೇವನೂರಿನ ಕಾಳಿ ಮಠದಲ್ಲಿದ್ದ ವಿಗ್ರಹವನ್ನು ಪೊಲೀಸರ ಭದ್ರತೆಯಲ್ಲಿಯೇ ವಾಪಸ್ ತರಲಾಗಿದೆ.
ದತ್ತ ಭಕ್ತರೊಬ್ಬರು ಅಪರೂಪ ಹಾಗೂ ಸುಂದರ ಮೂರ್ತಿಯನ್ನು ಪೀಠಕ್ಕೆ ಕೊಡುಗೆಯಾಗಿ ನೀಡಿದ್ದರು. ಈ ದತ್ತಾತ್ರೇಯ ಸ್ವಾಮಿ ವಿಗ್ರಹವನ್ನು ಈ ಹಿಂದೆ ದತ್ತಮಾಲಾ ಅಭಿಯಾನದ ಶೋಭಯಾತ್ರೆಯಲ್ಲಿ ಮೆರವಣಿಗೆಗೆ ತೆಗೆದುಕೊಂಡು ಹೋಗಲು ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಈ ವಿಗ್ರಹವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆದರೆ, ಈ ಬಾರಿ ದತ್ತಮಾಲಾ ಅಭಿಯಾನದ ಶೋಭಾಯಾತ್ರೆಯಲ್ಲಿ ಈ ದತ್ತಾತ್ರೇಯ ಸ್ವಾಮಿಯ ವಿಗ್ರಹವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲು ಶ್ರೀರಾಮಸೇನೆ ನಿರ್ಧರಿಸಿದೆ.
ದತ್ತ ಜಯಂತಿ: ತುಳಸಿ ಕಟ್ಟೆ ಜಾಗದಲ್ಲಿ ಹೋಮ ಮಾಡಲು ಭಜರಂಗ ದಳ ಪಟ್ಟು
ಶೋಭಾಯಾತ್ರೆಯಲ್ಲಿ ಮೆರವಣಿಗೆ ಮಾಡಲು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನ ಕಾಳಿ ಮಠದಲ್ಲಿದ್ದ ವಿಗ್ರಹವನ್ನು ಶ್ರೀರಾಮಸೇನೆ ಕಾರ್ಯಕರ್ತರು ಚಿಕ್ಕಮಗಳೂರು ನಗರಕ್ಕೆ ತಂದಿದ್ದಾರೆ. ಈ ವೇಳೆ ದತ್ತಾತ್ರೇಯ ಸ್ವಾಮಿ ವಿಗ್ರಹಕ್ಕೆ ಪೊಲೀಸರು ಭದ್ರತೆ ನೀಡಿದ್ದರು. ಪೊಲೀಸರ ಭದ್ರತೆಯಲ್ಲಿ ದತ್ತಾತ್ರೇಯ ಸ್ವಾಮಿಯ ವಿಗ್ರಹವನ್ನು ಚಿಕ್ಕಮಗಳೂರು ನಗರಕ್ಕೆ ತರಲಾಗಿದೆ.
ಎರಡು ದಿನದ ಹಿಂದೆ ರಾಜ್ಯಾದ್ಯಂತ ಶ್ರೀರಾಮಸೇನೆ ಕಾರ್ಯಕರ್ತರು ದತ್ತ ಮಾಲೆ ಧರಿಸಿದ್ದಾರೆ. ಎಂಟು ದಿನಗಳ ವೃತದ ಬಳಿಕ ಇದೇ ನವೆಂಬರ್ 13ರಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ಮಾಡಿ ದತ್ತಾತ್ರೇಯ ಸ್ವಾಮಿಯ ವಿಗ್ರಹವನ್ನು ಮೆರವಣಿಗೆ ಮಾಡಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಎಂಟು ಸಾವಿರಕ್ಕೂ ಅಧಿಕ ದತ್ತ ಭಕ್ತರು ರಾಜ್ಯದ ವಿವಿಧ ಭಾಗದಿಂದ ಆಗಮಿಸುವ ನಿರೀಕ್ಷೆ ಇದೆ.
ಈ ಬಾರಿ ಗುರು ದತ್ತಾತ್ರೇಯ ಪೀಠದಲ್ಲಿ ಶ್ರೀರಾಮ ಸೇನೆ ವತಿಯಿಂದ ದತ್ತಮಾಲೆ ಅಭಿಯಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 13ರ ಬೆಳಗ್ಗೆ 6ರಿಂದ ನವೆಂಬರ್14ರ ಬೆಳಗ್ಗೆ 10 ಗಂಟೆವರೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ದತ್ತಪೀಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ನಿರ್ಬಂಧ ಹೇರಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಶ್ರೀರಾಮ ಸೇನೆ ಕಾರ್ಯಕರ್ತರು ದತ್ತಮಾಲೆ ಧಾರಣೆ ಮಾಡಿಕೊಂಡು ನವೆಂಬರ್ 13ರಂದು ಶ್ರೀಗುರು ದತ್ತಾತ್ರೇಯ ಪೀಠಕ್ಕೆ ಆಗಮಿಸಲಿದ್ದಾರೆ.
ಇನ್ನು ಈ ಬಾರಿ ಹೋಮ ಮಂಟಪದಲ್ಲಿ ಹೋಮ ಮಾಡಲ್ಲ ಎಂದು ಭಜರಂಗದಳ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ವರ್ಷಗಳ ಹಿಂದೆ ಹೇಗೆ ತುಳಸಿಕಟ್ಟೆ ಇದ್ದ ಜಾಗದಲ್ಲಿ ಹೋಮ ನಡೆಯುತ್ತಿತ್ತೋ ಅದೇ ಜಾಗದಲ್ಲಿ ಈ ವರ್ಷ ಹೋಮ ಮಾಡುತ್ತೇವೆ. ಹೋಮ ಮಂಟಪ ಅಪವಿತ್ರವಾಗಿದೆ, ಆ ಜಾಗದಲ್ಲಿ ಹೋಮ ಮಾಡಲ್ಲ ಎಂದು ಭಜರಂಗದಳ ಈಗಾಗಲೇ ಜಿಲ್ಲಾಡಳಿತಕ್ಕೆ ತಿಳಿಸಿದೆ.