ಚಿಕ್ಕಮಗಳೂರು: ಪೊಲೀಸ್ ಸಿಬ್ಬಂದಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿ
ಚಿಕ್ಕಮಗಳೂರು, ಮಾರ್ಚ್ 16: 25 ವರ್ಷದ ಕಿಡಿಗೇಡಿ ಯುವಕನೊಬ್ಬ ಪೊಲೀಸ್ ಸಿಬ್ಬಂದಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಕೊಪ್ಪ ತಾಲ್ಲೂಕಿನ ಜಂಬೇಕಾಡು ಎಂಬಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನುಗ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಗೆ ಗ್ರಾಮದ ಜಂಬೇಕಾಡಿನಲ್ಲಿ ಪೊಲೀಸ್ ಸಿಬ್ಬಂದಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದ್ದು, 25 ವರ್ಷದ ಯುವಕ ದೇವರಾಜ್ ಎಂಬಾತ ಈ ಹಿಂದಿನಿಂದಲೂ ಗ್ರಾಮಸ್ಥರು, ಹೆತ್ತವರ ಜೊತೆ ಸದಾ ಜಗಳ ಮಾಡುತ್ತಿದ್ದನು.
ಅದರಂತೆಯೇ ಬುಧವಾರ ಕೂಡ ಮನೆಯವರ ಜೊತೆಗೆ ಜಗಳವಾಡಿದ್ದು, ಜಗಳ ವಿಕೋಪಕ್ಕೆ ತಿರುಗಿದೆ. ಈತನು ತಂದೆ-ತಾಯಿ ವಾಸವಿದ್ದ ಮನೆಗೇ ಬೆಂಕಿ ಹಚ್ಚಿದ್ದಾನೆ. ಕೂಡಲೇ ಅಲ್ಲಿನ ಸ್ಥಳೀಯರು 112 ವಾಹನಕ್ಕೆ ಕರೆ ಮಾಡಿದ್ದಾರೆ.

ರಕ್ಷಣೆಗೆಂದು ಧಾವಿಸಿದ 112 ಪೊಲೀಸ್ ಜೀಪ್ ಚಾಲಕ ತ್ರಿಮೂರ್ತಿ ಮೇಲೂ ಈತ ತನ್ನ ಕೋಪ ತೋರಿಸಿದ್ದು, ಆತನ ಕಾಲಿಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕೂಡಲೇ ಅವರ ರಕ್ಷಣೆಗೆ ಧಾವಿಸಿದ ಜಗದೀಶ್ ಎಂಬುವವರು, ಸ್ವತಃ ಅವರೇ 112 ವಾಹನವನ್ನು ಚಾಲನೆ ಮಾಡಿಕೊಂಡು ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಜಗದೀಶ್ ಅವರ ಸಮಯ ಪ್ರಜ್ಞೆಯಿಂದ ಪೊಲೀಸ್ ಜೀಪ್ ಚಾಲಕ ತ್ರಿಮೂರ್ತಿ ಪ್ರಸ್ತುತ ಸುರಕ್ಷಿತವಾಗಿದ್ದು, ಅವರ ಜೀವಕ್ಕೆ ಯಾವುದೇ ಅಪಾಯಗಳು ಆಗಿಲ್ಲ. ನಂತರ ಸೇರಿದ ಗ್ರಾಮಸ್ಥರು ಯುವಕನನ್ನು ಮರಕ್ಕೆ ಕಟ್ಟಿ ಹಾಕಿದ್ದರು.

ತಮ್ಮ ಸಿಬ್ಬಂದಿಯ ಆರೋಗ್ಯದ ಕುರಿತು ಕೊಪ್ಪ ಎಎಸ್ಐ ಶ್ರೀನಾಥ್ ರೆಡ್ಡಿ, ಕೊಪ್ಪದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಸಿಬ್ಬಂದಿಯ ಯೋಗಕ್ಷೇಮದ ಕುರಿತು ವಿಚಾರಣೆ ನಡೆಸಿದರು. ಪ್ರಕರಣದ ಕುರಿತು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಸಂಬಂಧ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ.












Click it and Unblock the Notifications