ಶಿವಮೊಗ್ಗ-ತುಮಕೂರು 4 ಪಥದ ರಸ್ತೆ; 1968 ಮರಕ್ಕೆ ಕೊಡಲಿ
ಚಿಕ್ಕಮಗಳೂರು, ಜನವರಿ 31 : ಶಿವಮೊಗ್ಗ-ತುಮಕೂರು ರಾಷ್ಟ್ರೀಯ ಹೆದ್ದಾರಿಯನ್ನು 4 ಪಥದ ರಸ್ತೆಯಾಗಿ ವಿಸ್ತರಣೆ ಮಾಡಲು ಈಗಾಗಲೇ ಕಾಮಗಾರಿ ಆರಂಭವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಹಾದು ಹೋಗುವ ರಸ್ತೆಯ ಅಗಲೀಕರಣಕ್ಕೆ ಮರಗಳನ್ನು ಕಡಿಯಲಾಗುತ್ತದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ತರೀಕೆರೆ ತಾಲೂಕಿನಲ್ಲಿಯೂ ಶಿವಮೊಗ್ಗ-ತುಮಕೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ. ಈಗ ರಸ್ತೆಯ ವಿಸ್ತರಣೆಗಾಗಿ 1968 ಮರಗಳನ್ನು ಕಡಿಯಲು ತಯಾರಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚತುಷ್ಪಥ ರಸ್ತೆಯ ಕಾಮಗಾರಿಯನ್ನು ಕೈಗೊಂಡಿದೆ. ಪ್ಯಾಕೇಜ್ 3ರಲ್ಲಿ ಬಾಣಾವರದಿಂದ ಬೆಟ್ಟದಹಳ್ಳಿ ತನಕ 49 ಕಿ. ಮೀ. ವಿಸ್ತರಣೆ ಮಾಡಲಾಗುತ್ತದೆ. ಈಗಾಗಲೇ ಈ ಪ್ಯಾಕೇಜ್ನ ಕಾಮಗಾರಿ ಆರಂಭಿಸಲಾಗಿದೆ.

ಬಾಣಾವರ-ಬೆಟ್ಟದಹಳ್ಳಿ ನಡುವೆ ರಸ್ತೆಯ ವಿಸ್ತರಣೆಗೆ 1968 ಮರಗಳನ್ನು ಕಡಿಯಲಾಗುತ್ತದೆ. ಮರ ಕಡಿದು ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಡಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಹಲಸು, ಹೊನ್ನೆ, ಬೇವು, ಅರಳಿ ಮೊದಲಾದ ಸಸಿಗಳನ್ನು ಬೆಳೆಸಲಾಗುತ್ತದೆ ಎಂದು ಅರಣ್ಯ ಇಲಾಖೆ ಹೇಳಿದೆ. ಮರಗಳನ್ನು ಕಡಿಯುವ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಜನವರಿ 31ರ ತನಕ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
5 ಸಾವಿರ ಮರಗಳ ಕಡಿತ : ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿವಿಧ ರಸ್ತೆ ಯೋಜನೆಗಾಗಿ ಸುಮಾರು 5 ಸಾವಿರ ಮರಗಳಿಗೆ ಕೊಡಲಿ ಹಾಕಲಾಗುತ್ತದೆ. ಎನ್ಎಚ್ 173 (ಕಡೂರು-ಮೂಡಿಗೆರೆ) ಮಾರ್ಗದ ವಿಸ್ತರಣೆಗೆ 3455 ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಈಗಾಗಲೇ ಒಪ್ಪಿಗೆ ನೀಡಿದೆ.
ಎನ್ಎಚ್ 206 ವಿಸ್ತರಣೆಗೆ 1968 ಮರಗಳನ್ನು ಕಡಿಯಲಾಗುತ್ತದೆ. ಅರಣ್ಯ ಇಲಾಖೆ ನೀಡಿರುವ ಭರವಸೆಯಂತೆ ಕಾಮಗಾರಿ ಪೂರ್ಣಗೊಂಡ ಬಳಿಕ ಸಸಿಗಳನ್ನು ನೆಡಲಾಗುತ್ತದೆಯೇ? ಎಂದು ಕಾದು ನೋಡಬೇಕು.












Click it and Unblock the Notifications