ಚಳಿ ಕಾಯಿಸಲು ಹಾಕಿದ್ದ ಬೆಂಕಿಯಿಂದ ಉಸಿರುಗಟ್ಟಿ ಯುವತಿ ಸಾವು
ಚಿಕ್ಕಬಳ್ಳಾಪುರ, ನವೆಂಬರ್ 28: ಚಳಿಗೆಂದು ಮನೆಯೊಳಗೆ ಕೆಂಡದ ಬಿಸಿ ಹಾಕಿಕೊಂಡು ಮಲಗಿದ್ದ ವೇಳೆ ಉಸಿರುಗಟ್ಟಿ ಯುವತಿ ಮೃತಪಟ್ಟು, ಮೂವರು ಅಸ್ವಸ್ಥರಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿ ಬಿದನೂರಿನ ತೊಂಡೆಬಾವಿಯ ಮರಾಠಿಪಾಳ್ಯದಲ್ಲಿ ಈ ಘಟನೆ ನಡೆದಿದೆ. ತುಮಕೂರು ಮೂಲದ ರಾಮಾಂಜನೇಯಲು ಮರಾಠಿ ಪಾಳ್ಯದ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಚಿಕ್ಕ ಕೊಠಡಿಯಲ್ಲಿ ಇವರ ಕುಟುಂಬ ವಾಸವಿತ್ತು. ಶುಕ್ರವಾರ ತೀವ್ರ ಚಳಿಯದ್ದ ಕಾರಣ ರಾತ್ರಿ ಬಾಗಿಲು ಮುಚ್ಚಿ ಕೆಂಡದ ಬಿಸಿ ಹಾಕಿಕೊಂಡು ಮಲಗಿದ್ದರು.
ಆದರೆ ಕುಟುಂಬದ ನಾಲ್ವರು ಉಸಿರುಗಟ್ಟಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ನಾಲ್ವರನ್ನೂ ಸ್ಥಳೀಯರು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಯುವತಿ ಅರ್ಚನಾ (16) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಬೆಂಕಿ ಇದ್ದ ಕಾರಣ ಆಮ್ಲಜನಕದ ಕೊರತೆಯಾಗಿ ಉಸಿರಾಟದ ತೊಂದರೆ ಕಾಣಿಸಿಕೊಂಡಿರುವ ಶಂಕೆ ವ್ಯಕ್ತಗೊಂಡಿದೆ. ಉಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.

ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications