ಮುಗಿಯದ ಚಿಕ್ಕಬಳ್ಳಾಪುರ-ಬೆಂಗಳೂರು ರೈಲು ಹಳಿ ಗೇಟ್ ನಿರ್ಮಾಣ: ಪ್ರಾಣಭಯದಲ್ಲಿ ವಾಹನ ಸವಾರರು!
ಚಿಕ್ಕಬಳ್ಳಾಪುರ ಜನವರಿ 5: ದೇವನಹಳ್ಳಿ ಬಳಿ ಇರುವ ನಾಡಪ್ರಭು ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರ ನಗರವನ್ನು ಬೆಂಗಳೂರು ಮಹಾ ನಗರಕ್ಕೆ ಪರ್ಯಾಯವಾಗಿ ಉಪ ನಗರವನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂಬ ಮಾತುಗಳನ್ನು ಮೊದಲಿನಿಂದಲೂ ಹೇಳಲಾಗುತ್ತಿದೆ. ಇದರ ಭಾಗವಾಗಿ ಮೊದಲ ಹೆಜ್ಜೆಯನ್ನು ಇಟ್ಟಿರುವ ಕೇಂದ್ರ ಸರಕಾರ ಮೊದಲ ಹಂತವಾಗಿ ರೈಲ್ವೆ ಸೇವೆಗಳ ವಿಸ್ತರಣೆಯ ಯೋಜನೆಯ ಅನುಷ್ಠಾನದ ಸಾಧನೆಯನ್ನು ಕಾಣಬಹುದಾಗಿದೆ.
ಕಳೆದ ಡಿಸೆಂಬರ್ ತಿಂಗಳಿನಿಂದ ಚಿಕ್ಕಬಳ್ಳಾಪುರ ನಗರಕ್ಕೆ ಹೆಚ್ಚುವರಿ ರೈಲುಗಳ ದರ್ಶನವಾಗುತ್ತಿದೆ. ಈ ಮುಂಚೆ ಬೆರಳೆಣಿಕೆಯ ರೈಲುಗಳು ಮಾತ್ರ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರ ಮತ್ತು ಬೆಂಗಳೂರಿಗೆ ಸಂಚರಿಸುತ್ತಿದ್ದವು. ರೈಲುಗಳ ಸಂಖ್ಯೆ ಈಗ ಹೆಚ್ಚಿದೆ. ಮತ್ತೊಂದು ಕಡೆ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಸಾಗುವ ರಸ್ತೆಯಲ್ಲಿನ ರೈಲ್ವೆ ಲೆವಲ್ ಕ್ರಾಸಿಂಗ್ನಲ್ಲಿ ಮೇಲ್ವೇತುವೆ ನಿರ್ಮಾಣವಾಗಬೇಕು ಎನ್ನುವ ಕೂಗು ಸಹ ಕೇಳಿ ಬರುತ್ತಿದೆ. ರೈಲುಗಳು ಬರುವ ವೇಳೆ ಕ್ರಾಸಿಂಗ್ ಗೆ ಗೇಟ್ ಹಾಕಲಾಗುತ್ತಿದೆ. ಇದರಿಂದ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟುತ್ತವೆ.

ರೈಲ್ವೆ ಲೆವಲ್ ಕ್ರಾಸಿಂಗ್ನ ಎರಡೂ ಬದಿಯಲ್ಲಿನ ರಸ್ತೆಗಳಲ್ಲಿ ಸಹ ದೊಡ್ಡದಾಗಿಯೇ ಗುಂಡಿ ಬಿದ್ದಿವೆ. ಗುಂಡಿಗಳ ಒಳಗೆ ಬೈಕ್, ಕಾರುಗಳನ್ನು ಚಲಾಯಿಸಬೇಕಾಗಿದೆ. ಈ ಗುಂಡಿಗಳಲ್ಲಿ ಎಷ್ಟೋ ಸಮಯ ಬೈಕುಗಳು ಆಯಾತಪ್ಪಿ ಬಿದ್ದ ನಿದರ್ಶನಗಳೂ ಇವೆ.
ದುರ್ಗಶ್ರೀ ಹೋಟೆಲ್ ದಾಟಿದ ನಂತರ ರೈಲ್ವೆ ಲೆವಲ್ ಕ್ರಾಸಿಂಗ್ ಸಿಗುತ್ತದೆ. ಕ್ರಾಸಿಂಗ್ ದಾಟಿ ಮುಂದೆ ಬೆಂಗಳೂರು ದಾರಿಯಲ್ಲಿ ಸಾಗಿದರೆ ಕೃಷಿ ಇಲಾಖೆ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಕೆ.ವಿ ಶಿಕ್ಷಣ ಸಂಸ್ಥೆ ಎಸ್ಜೆಸಿಐಟಿ ತಾಂತ್ರಿಕ ವಿದ್ಯಾಲಯ, ಬಿಜಿಎಸ್ ವರ್ಲ್ಡ್ ಸ್ಕೂಲ್, ತಾತ್ಕಾಲಿಕ ಹೂ ಮಾರುಕಟ್ಟೆ, ಮೆಗಾ ಡೇರಿ, ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ, ಪ್ರವಾಸಿ ಮಂದಿರ...ಹೀಗೆ ಜನರು ನಿತ್ಯ ಭೇಟಿ ನೀಡುವ ಇಲಾಖೆಗಳು, ಮಾರುಕಟ್ಟೆಗಳು, ಶಾಲಾ ಕಾಲೇಜುಗಳು ಇವೆ.

ಸೇತುವೆ ನಿರ್ಮಾಣದಿಂದ ಅನುಕೂಲ:-
ರೈಲ್ವೆ ಮೇಲ್ಸ್ತುವೆ ನಿರ್ಮಾಣದಿಂದ ಇಲ್ಲಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲವಾಗಲಿದೆ. ಕ್ರಾಸಿಂಗ್ನಲ್ಲಿ ಸಾಗುವಾಗ ಹಳಿಗಳ ಮೇಲೆ ಬೈಕ್ಗಳ ಚಕ್ರಗಳು ಜಾರಿದ ಕಾರಣ ಅವಘಡಗಳು ಸಹ ಸಂಭವಿಸಿವೆ ಎನ್ನುತ್ತಾರೆ ಚಿಕ್ಕಬಳ್ಳಾಪುರದ ಎಚ್.ಎಸ್.ಗಾರ್ಡನ್ ನಾಗರಿಕ ಮಂಜುನಾಥ್. ರೈಲ್ವೆ ಇಲಾಖೆಯು ಇಲ್ಲಿ ಮೇಲ್ಸ್ತುವೆ ನಿರ್ಮಿಸುವುದರಿಂದ ರೈತರಿಗೆ ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲರಿಗೂ ಅನುಕೂಲವಾಗಲಿದೆ. ಈ ದಿಕ್ಕಿನಲ್ಲಿ ಕ್ರಮವಹಿಸಬೇಕು ಎನ್ನುತ್ತಾರೆ.
ನಿರಾತಂಕವಾಗಿ ಸಂಚಾರ :-
ಈ ಹಿಂದೆ ಚಿಕ್ಕಬಳ್ಳಾಪುರಕ್ಕೆ ರೈಲುಗಳ ಸಂಖ್ಯೆ ಕಡಿಮೆ ಇತ್ತು. ಆದರೆ ಈಗ ಹೆಚ್ಚಿದೆ. ಭವಿಷ್ಯದಲ್ಲಿ ಮತ್ತಷ್ಟು ರೈಲುಗಳು ಬಂದರೂ ಬರಬಹುದು. ಈ ಎಲ್ಲ ದೃಷ್ಟಿಯಿಂದ ರೈಲ್ವೆ ಮೇಲ್ಸ್ತುವೆ ನಿರ್ಮಾಣವಾಗಬೇಕು ಎಂದು ನಾಗರಿಕ ಚಂದ್ರಪ್ಪ ಒತ್ತಾಯಿಸುವರು. ಮೇಲ್ಲೇತುವೆ ನಿರ್ಮಿಸಿದರೆ ಇಲ್ಲಿ ನಿರಾತಂಕವಾಗಿ ಸಂಚರಿಸಬಹುದು. ಚಿಕ್ಕಬಳ್ಳಾಪುರವು ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ. ಬೆಂಗಳೂರಿನಿಂದ ಬೈಕ್ ಕಾರುಗಳಲ್ಲಿ ಬಸ್ ರೈಲುಗಳಲ್ಲಿ ನಗರಕ್ಕೆ ಬರುವವರು ಹೆಚ್ಚಿದ್ದಾರೆ ಎಂದರು.
ಸಾಮಾನ್ಯವಾಗಿ ಬೆಳಗಿನ ಅವಧಿಯಲ್ಲಿ ಚಿಕ್ಕಬಳ್ಳಾಪುರ ದಿಂದ ಬೆಂಗಳೂರು ಕಡೆಗೆ ರೈಲ್ವೆ ಕ್ರಾಸಿಂಗ್ ದಾಟುವವರ ವಾಹನಗಳ ಸಂಖ್ಯೆ ಹೆಚ್ಚಿರುತ್ತದೆ. ಈ ವೇಳೆ ರೈಲುಗಳು ಬರುವುದರಿಂದ ಸಂಚಾರದಲ್ಲಿ ಗಡಿಬಿಡಿ ಆಗುತ್ತಿದೆ. ಈ ಹಿಂದಿನಿಂದಲೂ ಚಿಕ್ಕಬಳ್ಳಾಪುರ ನಾಗರಿಕರು ಇಲ್ಲಿ ರೈಲ್ವೆ ಮೇಲ್ ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ ಕಾಲ ಕೂಡಿ ಬಂದಿಲ್ಲ.
ಹಲವು ವರ್ಷಗಳಿಂದ ಚಿಕ್ಕಬಳ್ಳಾಪುರ ನಾಗರಿಕರು ಇಲ್ಲಿ ಮೇಲ್ ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ನಿರ್ಮಾಣ ಮಾತ್ರ ಇದುವರೆಗೂ ಈಡೇರಿಲ್ಲ , ಬೆಂಗಳೂರಿಗೆ ಹತ್ತಿರವಿರುವ ಚಿಕ್ಕಬಳ್ಳಾಪುರ ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು ಪ್ರವಾಸೋದ್ಯಮವೂ ಸಹ ಉತ್ತಮವಾಗಿ ಬೆಳೆಯುತ್ತಿರುವ ಜಿಲ್ಲೆ ಚಿಕ್ಕಬಳ್ಳಾಪುರ, ಭವಿಷ್ಯದಲ್ಲಿ ಮತ್ತಷ್ಟು ರೈಲುಗಳು ಬರುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ. ಈ ಕಾರಣದಿಂದ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ರಸ್ತೆಯಲ್ಲಿನ ಹಳೇ ಆರ್. ಟಿ. ಒ ಕಚೇರಿಯ ಬಳಿಯ ಲೆವೆಲ್ ಕ್ರಾಸಿಂಗ್ ನಲ್ಲಿ ಮೇಲ್ ಸೇತುವೆ ನಿರ್ಮಾಣ ಮಾಡಬೇಕೆಂಬ ಒತ್ತಾಯ ಹೆಚ್ಚಿದೆ.
ರೈಲು ಉಳಿಸಿಕೊಳ್ಳಬೇಕಾದ ತುರ್ತು:
ಚಿಕ್ಕಬಳ್ಳಾಪುರ ನಗರಕ್ಕೆ ರಾಜಧಾನಿ ಬೆಂಗಳೂರಿನಿಂದ ಇತ್ತೀಚಿಗೆ ರೈಲ್ವೆ ಸೇವೆಯನ್ನು ಹೆಚ್ಚಿಸಿ ಹೆಚ್ಚಿವರಿ ರೈಲ್ವೆ ಸೇವೆ ಒದಗಿಸಿದೆ. ಆದರೆ ರೈಲುಗಳ ಸಂಖ್ಯೆಗೆ ಅನುಗುಣವಾಗಿ ಪ್ರಯಾಣಿಕರ ಸಂಖ್ಯೆ ಏರಿಕೆ ಆಗಿಲ್ಲ ಪ್ರಸ್ತುತ ಪ್ರಯಾಣಿಕರ ಸಂಖ್ಯೆ ತೀರ ಕಡಿಮೆ ಇದೆ. ಹೆಚ್ಚು ರೈಲುಗಳು ಬರುತ್ತಿವೆ ಎನ್ನುವುದು ಚಿಕ್ಕಬಳ್ಳಾಪುರದ ಜನರಿಗೆ ಇನ್ನೂ ಹೆಚ್ಚು ತಿಳಿದಿಲ್ಲ ಎನ್ನುತ್ತಾರೆ ಜಿಲ್ಲಾ ರೈಲ್ವೆ ಹೋರಾಟ ಸಮಿತಿಯ ವಿ.ರಮೇಶ್ ಬಾಬು.
ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೆ ಮುಂದಿನ ದಿನಗಳಲ್ಲಿ ರೈಲುಗಳ ಸಂಚಾರವನ್ನು ಈ ಹಿಂದಿನ ರೀತಿ ದೇವನಹಳ್ಳಿಯವರೆಗೆ ಮಾತ್ರ ಸೀಮಿತ ಗೊಳಿಸಬಹುದು. ಹೀಗಾಗಿ ಜನರು ರೈಲ್ವೆ ಸೌಕರ್ಯಗಳನ್ನು ಹೆಚ್ಚು ಬಳಸಬೇಕು. ಬೆಂಗಳೂರಿಗೆ ಹೋಗುವ ಪ್ರಯಾಣಿಕರು ರೈಲುಗಳಲ್ಲಿ ಹೆಚ್ಚು ಪ್ರಯಾಣಿಸಬೇಕು ಎನ್ನುತ್ತಾರೆ.
ರೈಲುಗಳ ಸಂಚಾರ ಸಮಯ :
06531 ಸಂಖ್ಯೆಯ ರೈಲು ಬೆಂಗಳೂರು ವಲಯದಿಂದ ಬೆಳಗ್ಗೆ 5.10ಕ್ಕೆ ಹೊರಟು 6.55 ಕ್ಕೆ ಚಿಕ್ಕಬಳ್ಳಾಪುರ ತಲುಪಲಿದೆ, ಇದೇ ರೈಲು ಸಂಖ್ಯೆ (06535) ಬೆಳಿಗ್ಗೆ 8.20 ಕ್ಕೆ ಚಿಕ್ಕಬಳ್ಳಾಪುರ ಬಿಟ್ಟು ಬೆಂಗಳೂರು ವಲಯಕ್ಕೆ ಬೆಳಿಗ್ಗೆ 10.40ಕ್ಕೆ ತಲುಪಲಿದೆ.
ನಂತರ 06536 ಸಂಖ್ಯೆಯ ರೈಲು ಮಧ್ಯಾಹ್ನ 12.20ಕ್ಕೆ ಬೆಂಗಳೂರು ವಲಯ ಬಿಟ್ಟು ಚಿಕ್ಕಬಳ್ಳಾಪುರಕ್ಕೆ ಮಧ್ಯಾಹ್ನ 1.40 ಕ್ಕೆ ತಲುಪಲಿದೆ, 06537 ಸಂಖ್ಯೆಯ ರೈಲು ಚಿಕ್ಕಬಳ್ಳಾಪುರದಿಂದ ಮಧ್ಯಾಹ್ನ 2 ಗಂಟೆಗೆ ಬಿಟ್ಟು ಬೆಂಗಳೂರು ವಲಯಕ್ಕೆ ಮಧ್ಯಾಹ್ನ 3.15ಕ್ಕೆ ತಲುಪಲಿದೆ.
ತದನಂತರ 06538 ಸಂಖ್ಯೆಯ ರೈಲು ಸಂಜೆ 4ಕ್ಕೆ ಬೆಂಗಳೂರು ವಲಯ ಬಿಟ್ಟು ಚಿಕ್ಕಬಳ್ಳಾಪುರ ನಿಲ್ದಾಣಕ್ಕೆ ಸಂಜೆ 6.ಕ್ಕೆ ತಲುಪಲಿದೆ. 06532 ಸಂಖ್ಯೆಯ ರೈಲು ರಾತ್ರಿ 6.30ಕ್ಕೆ ಬಿಟ್ಟು ಬೆಂಗಳೂರು ವಲಯವನ್ನು ರಾತ್ರಿ 9 ಕ್ಕೆ ಸೇರಲಿದೆ. ಹಾಗೆಯೇ 06593 ಸಂಖ್ಯೆಯ ರೈಲು ಬೆಳಿಗ್ಗೆ 10.10ಕ್ಕೆ ಯಶವಂತಪುರ ನಿಲ್ದಾಣ ಬಿಟ್ಟು ಚಿಕ್ಕಬಳ್ಳಾಪುರಕ್ಕೆ 11.40ಕ್ಕೆ ತಲುಪಲಿದೆ. 06594 ಸಂಖ್ಯೆಯ ರೈಲು ಮಧ್ಯಾಹ್ನ 1ಕ್ಕೆ ಚಿಕ್ಕಬಳ್ಳಾಪುರ ಬಿಟ್ಟು ಮಧ್ಯಾಹ್ನ 2.50ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ.












Click it and Unblock the Notifications