ಅಡ್ಕಸ್ಥಳ ಕಬೀರ್ ಪಾಲಾದ ಸಿರಿಗನ್ನಡ ತಾಯ್ನುಡಿ ಸೇವಾ ರತ್ನ ಮತ್ತು ರಾಜ್ಯೋತ್ಸವ ಪುರಸ್ಕಾರಗಳು
ಚಿಕ್ಕಬಳ್ಳಾಪುರ ನವೆಂಬರ್ 1: ಸತ್ಯಸಾಯಿ ಗ್ರಾಮದ ಕವಿ, ಶಿಕ್ಷಕ, ಲೇಖಕ, ರಂಗ ಭೂಮಿ ಮತ್ತು ಕುಂಚ ಕಲಾವಿದ ಅಡ್ಕಸ್ಥಳ ಕಬೀರ್ ಅವರಿಗೆ ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆಯು ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ತಾಯಿನುಡಿ ಸೇವಾ ರತ್ನ ಜಂಟಿ ಪುರಸ್ಕಾರಗಳನ್ನು ಏಕಕಾಲದಲ್ಲಿ ಘೋಷಿಸಿದೆ. ಈ ಬಗ್ಗೆ ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಪ್ರೊಫೆಸರ್ ಎಲ್ ಎಸ್ ಪೆಂಡಾರಿ ಅವರು ತಿಳಿಸಿದ್ದಾರೆ.
ಸತ್ಯಸಾಯಿ ಗ್ರಾಮದ ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ಹಿರಿಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ, ಕವಿಯಾಗಿ ಲೇಖಕರಾಗಿ ಪತ್ರಿಕಾ ಬಳಗದ ಸಂಯೋಜಕರಾಗಿ ಕನ್ನಡ ನಾಡಿನಲ್ಲಿ ಮನೆಮಾತಾಗಿರುವ ಇವರು ಶಿಕ್ಷಣದ ಪ್ರಾಥಮಿಕ ಹಂತದಿಂದ ಶಿಕ್ಷಕರಾಗಿ, ಉಪನ್ಯಾಸಕರಾಗಿ, ಸಂದರ್ಶಕ ಪ್ರಾಧ್ಯಾಪಕರಾಗಿ, ಉಪ ಪ್ರಾಂಶುಪಾಲರಾಗಿ,ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಶಿಕ್ಷಣ ತಜ್ಞರು.

ಕೇರಳದ ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ಅಡ್ಕಸ್ಥಳದಲ್ಲಿ ಜನಿಸಿದ ಅಡ್ಕಸ್ಥಳರು ಕರ್ನಾಟಕದ ಗಡಿನಾಡು ಜಿಲ್ಲೆಯಾದ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಇದುವರೆಗೆ ರಾಜ್ಯ ಶಿಕ್ಷಕ ಪುರಸ್ಕಾರ ಕನ್ನಡ ರತ್ನ, ರಾಷ್ಟ್ರಕವಿ ಕುವೆಂಪು ಪಾರಿತೋಷಕ, ಕನ್ನಡ ಜ್ಞಾನ ನಿಧಿ, ಶ್ರೀ ಗುರುಕುಲ ತಿಲಕ, ವಿಶ್ವ ಜ್ಞಾನ ಸಿರಿ ಮುಂತಾದ ಪ್ರತಿಷ್ಠಿತ ಪುರಸ್ಕಾರಗಳು ಲಭಿಸಿವೆ.
ಸತ್ಯಸಾಯಿ ಗ್ರಾಮದಲ್ಲಿ ಎಲೆಮರೆಯ ಕಾಯಿಯಂತೆ ಇದ್ದು ಸಾಹಿತ್ಯ ಸಾರಸ್ವತ ಲೋಕದಲ್ಲಿ ತೊಡಗಿಸಿಕೊಂಡು ಹಲವಾರು ಅನುವಾದ ಗ್ರಂಥಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಸ್ವಂತ ಕೃತಿಗಳನ್ನೂ ಲೋಕಾರ್ಪಣೆ ಮಾಡಿದ್ದಾರೆ.

ಕನ್ನಡ ಭಾಷೆಯ ಸಾಹಿತ್ಯ ಅಧ್ಯಯನ ಅಧ್ಯಾಪನದಲ್ಲಿ ವಿಶಿಷ್ಟ ಹೆಜ್ಜೆ ಗುರುತನ್ನು ಮೂಡಿಸಿದ ನಿಮಿತ್ತ "ತಾಯಿನುಡಿ ಸೇವಾ ರತ್ನ" ಮತ್ತು ಬಹುಮುಖ ವಿಶಿಷ್ಟ ಪ್ರತಿಭಾ ಸಂಪನ್ನತೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆಯು ಜಂಟಿ ಪುರಸ್ಕಾರಗಳನ್ನು ಘೋಷಿಸಿ ಗೌರವಾದರಗಳನ್ನು ಸಲ್ಲಿಸಿ ಅಭಿನಂದಿಸಿದೆ.
ಗಡಿನಾಡಿನಲ್ಲಿ ಬೆಳಗಿ ಇಡಿನಾಡಿಗೆ ಸಂದ ಶ್ರೀಯುತರನ್ನು ಪ್ರಶಸ್ತಿಯು ಆರಸಿ ಬಂದಿರುವುದು ಅರ್ಹ ಪ್ರತಿಭಾವಂತನಿಗೆ ಸಕಾಲದಲ್ಲಿ ಸಂದ ಗೌರವವಾಗಿದೆ.
ಪುರಸ್ಕಾರಗಳ ಸಾಧನೆಯನ್ನು ಗೈದ ಶ್ರೀಯುತರನ್ನು ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲದ ಪ್ರಾಂಶುಪಾಲ ಎಸ್ ಬಿ ಚೇತನ್ ಹಿರಿಯ ಸಹೋದ್ಯೋಗಿ ಗಳಾದ ಕೆ ವಾಸುದೇವರಾವ್ , ಗಂಗೆರೇಕಾಲುವೆ ಬೈರಪ್ಪ, ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿ ಬಳಗ, ಊರ ಪರವೂರ ಗೆಳೆಯರು, ಮುದ್ದೇನಹಳ್ಳಿ ಮತ್ತು ಹುಟ್ಟೂರಿನ ಅಭಿಮಾನಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿರುತ್ತಾರೆ.












Click it and Unblock the Notifications