ನನಸಾಗುವತ್ತ ಶಂಕರನಾಗ್ ಕನಸು, ನಂದಿ ಬೆಟ್ಟಕ್ಕೆ ರೋಪ್ ವೇ!
ಚಿಕ್ಕಬಳ್ಳಾಪುರ, ಅಕ್ಟೋಬರ್ 28: "ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಶಂಕರ್ ನಾಗ್ ಅವರು ನಂದಿಬೆಟ್ಟಕ್ಕೆ ರೋಪ್ ವೇ, ಕೇಬಲ್ ಕಾರ್ ನಿರ್ಮಿಸಬೇಕೆಂಬ ಕನಸು ಕಂಡಿದ್ದರು. ಈಗ ಅವರ ಕನಸು ನನಸಾಗುವ ಕಾಲ ಬಂದಿದೆ, ಈ ಸಂಬಂಧ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಇಂದು ತಿಳಿಸಿದರು.
ಡಿಸ್ಕವರಿ ವಿಲೇಜ್ ರೆಸಾರ್ಟ್ ನಲ್ಲಿ ನಡೆದ ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ ಕಲ್ಯಾಣಿ, ದೇವಸ್ಥಾನಗಳ ಅಭಿವೃದ್ಧಿ, ಜೀವ ವೈವಿಧ್ಯದ ಸಂರಕ್ಷಣೆ, ವಾರಾಂತ್ಯದಲ್ಲಿ ವಾಹನಗಳ ಒತ್ತಡದಿಂದಾಗಿ ಆಗುವ ಸವಾಲುಗಳನ್ನು ನಿರ್ವಹಿಸಲು ಬೇಕಾದ ಅಗತ್ಯ ಕ್ರಮಗಳ ಕುರಿತು ಜಿಲ್ಲಾಡಳಿತದ ಜೊತೆ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಚರ್ಚಿಸಿದರು. ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಸುಮಾರು 15ಸಾವಿರ ಎಕರೆ ಕಾಡನ್ನು ಸಂರಕ್ಷಿಸಲು ಅಗತ್ಯ ಕ್ರಮ ಜರುಗಿಸಲಾಗಿದೆ. ಕಾಡ್ಗಿಚ್ಚು ತಡೆ, ಪ್ರಾಣಿ, ಪಕ್ಷಗಳ ರಕ್ಷಣೆ ಜತೆಗೆ ಕಾನೂನು ಪಾಲನೆಗೆ ಡ್ರೋನ್ ವ್ಯವಸ್ಥೆ ನೆರವಾಗುವುದು ಎಂದರು.
ಶಂಕರ್ ನಾಗ್ ಕನಸು ಕಂಡಿದ್ದು ನಮಗಾಗಿ
ಹಾಗೆ ನೋಡಿದರೆ ಚಿಕ್ಕಬಳ್ಳಾಪುರ ಪ್ರವಾಸೋದ್ಯಮ ಕೌನ್ಸಿಲ್ ನಿಂದ ರೋಪ್ ವೇ ಯೋಜನೆಯ ಸಾಧ್ಯಾಸಾಧ್ಯತೆಯ ಬಗ್ಗೆ ಈಗಾಗಲೇ ವರದಿಯೊಂದನ್ನು ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಲಾಗಿದ್ದು, ಯೋಜನೆಯ ಅನುಷ್ಠಾನಕ್ಕೆ ಟೆಂಡರ್ ಕರೆಯಲಾಗಿದೆ. ಪ್ರವಾಸೋದ್ಯಮ ನೀಡಿದ ಮಾಹಿತಿ ಪ್ರಕಾರ, ಎದುರುಬದರಾಗಿ ಎರಡು ರೋಪ್ ವೇ ನಿರ್ಮಿಸಲಾಗುವುದು. ಇಪ್ಪತ್ತು ಮಂದಿಯನ್ನು ಏಕಕಾಲಕ್ಕೆ ಕರೆದುಕೊಂಡು ಹೋಗಬಹುದು. ಸಮುದ್ರ ಮಟ್ಟದಿಂದ 1848 ಎತ್ತರದಲ್ಲಿ ಸಾಗುವುದೇ ವಿಶಿಷ್ಟ ಅನುಭವ. ಇನ್ನು ಬೆಟ್ಟಕ್ಕೆ ಸಾಗುವ ರಸ್ತೆಯಲ್ಲಿ ಸಂಚಾರ ದಟ್ಟಣೆ ಕೂಡ ಕಡಿಮೆಯಾಗಲಿದೆ.

ರೋಪ್ ವೇ ಬಗ್ಗೆ ಮಾತನಾಡಿದ ಡಿಸಿಎಂ ಅಶ್ವಥ್
ನಂದಿಬೆಟ್ಟ ಸಮಗ್ರ ಅಭಿವೃದ್ಧಿ ಕುರಿತಂತೆ ಅಧಿಕಾರಿಗಳೊಂದಿಗೆ ಸೋಮವಾರದಂದು ಚರ್ಚೆ ನಡೆಸಲಾಯಿತು. ಎಷ್ಟೋ ವರ್ಷಗಳ ಹಿಂದೆಯೇ ನಟ ಶಂಕರ್ ನಾಗ್ ನಂದಿ ಬೆಟ್ಟಕ್ಕೆ ಕೇಬಲ್ ಕಾರ್ ಸಂಪರ್ಕ ಕಲ್ಪಿಸುವ ಕನಸು ಕಂಡಿದ್ದರು. ಆ ಕನಸು ನನಸಾಗುವ ಕಾಲ ದೂರವಿಲ್ಲ. ನಿರ್ದಿಷ್ಟ ಕಾಲಮಿತಿಯೊಳಗೆ ತ್ವರಿತಗತಿಯಲ್ಲಿ ಯೋಜನೆ ಕಾರ್ಯಗತಗೊಳಿಸಲಾಗುವುದು, ಪ್ರಕೃತಿಗೆ ಸಮಸ್ಯೆ ಆಗದ ರೀತಿಯಲ್ಲಿ ಪರಿಸರ, ಕಾಡು ಪ್ರಾಣಿಗಳು ಸೇರಿದಂತೆ ಪ್ರಕೃತಿ ರಕ್ಷಣೆ ಜತೆಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು, ಎಂದು ಡಾ. ಅಶ್ವಥ್ ನಾರಾಯಣ್ ಹೇಳಿದರು.

ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು
ನಂದಿ ಬೆಟ್ಟ, ಧಾರ್ಮಿಕ, ಐತಿಹಾಸಿಕ ಹಾಗೂ ಪ್ರವಾಸಿ ತಾಣವಾಗಿದ್ದು, ಸುತ್ತಮುತ್ತಲಿನ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಸ್ವಚ್ಛತೆ, ಕಾಡಿನ ರಕ್ಷಣೆ, ಕಸ ವಿಲೇವಾರಿ, ನೀರಿನ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಗಿದೆ. ಸಂಚಾರ ದಟ್ಟಣೆ ನಿರ್ವಹಣೆ, ವಿಶೇಷವಾಗಿ ವಾರಾಂತ್ಯದ ಪ್ರವಾಸಿಗರ ನಿಯಂತ್ರಣ ಸಂಚಾರ ದಟ್ಟಣೆ ನಿರ್ವಹಣೆಗೆ ಗಮನ ಹರಿಸಲಾಗುವುದು ಎಂದು ಹೇಳಿದರು.

ರೋಪ್ ವೇ ನಿರ್ಮಾಣಕ್ಕೆ ಅಂದಾಜು ಮೂವತ್ತು ಕೋಟಿ ರು
ನಂದಿಬೆಟ್ಟದ ಕೆಳಭಾಗದಲ್ಲಿರುವ ಕುದುವತಿ ಗ್ರಾಮದಿಂದ ಯೋಗನಂದೀಶ್ವರ ದೇವಸ್ಥಾನದವರೆಗೆ 1.6 ಕಿಲೋಮೀಟರ್ ದೂರಕ್ಕೆ ರೋಪ್ ವೇ ನಿರ್ಮಾಣವಾಗಲಿದೆ. ಟಿಪ್ಪು ಡ್ರಾಪ್ ನಿಂದ ದೇವಸ್ಥಾನವು ಕೆಲವೇ ಮೀಟರ್ ನಷ್ಟು ದೂರವಿದೆ. ಅಂದಹಾಗೆ, ಈ ರೋಪ್ ವೇ ನಿರ್ಮಾಣಕ್ಕೆ ಅಂದಾಜು ಮೂವತ್ತು ಕೋಟಿ ರುಪಾಯಿ ಖರ್ಚಾಗಬಹುದು ಎಂದುಕೊಳ್ಳಲಾಗಿದೆ.
ಕಾರಹಳ್ಳಿ ಕ್ರಾಸ್ ನಿಂದ ಕೇವಲ 500 ಮೀಟರ್ ದೂರದಲ್ಲಿದೆ ಕುದುವತಿ ಗ್ರಾಮ. ಪ್ರವಾಸಿಗರು ಇಲ್ಲಿಗೆ ತಲುಪಲು ಸಹ ಅನುಕೂಲವಿದೆ. ವಾಹನ ನಿಲುಗಡೆ ವ್ಯವಸ್ಥೆ, ಬುಕಿಂಗ್ ಕೌಂಟರ್ ಇತರ ಅನುಕೂಲಗಳನ್ನು ಗ್ರಾಮದಲ್ಲಿ ಮಾಡಲಾಗುತ್ತದೆ. ಈ ಕಾರಣಕ್ಕಾಗಿ ಒಂಬತ್ತು ಎಕರೆ ಜಮೀನು ಕೂಡ ವಶಕ್ಕೆ ಪಡೆಯಲಾಗಿದೆ.

ನಟ ಶಂಕರ್ ನಾಗ್ ಕನಸು
ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣದ ಕನಸು ಮೊದಲಿಗೆ ಕಂಡವರು ನಟ ಶಂಕರ್ ನಾಗ್. 1980ರ ದಶಕದಲ್ಲೇ ಸರಕಾರದ ಜತೆಗೆ ಮಾತುಕತೆ ನಡೆಸಿ, ತಮ್ಮ ಕನಸನ್ನು ಹಂಚಿಕೊಂಡಿದ್ದರು. ಶಂಕರ್ ಪತ್ನಿ ಅರುಂಧತಿ ಅವರು ಈ ಯೋಜನೆಯ ನಕ್ಷೆ ಕೂಡ ರೂಪಿಸಿದ್ದರು. ಬೆಟ್ಟದ ಮೇಲೊಂದು ಅಮ್ಯೂಸ್ ಮೆಂಟ್ ಪಾರ್ಕ್ ಆರಂಭಿಸುವ ಯೋಜನೆ ಹಾಕಿಕೊಂಡಿದ್ದರು.
1990ರ ಸೆಪ್ಟೆಂಬರ್ ನಲ್ಲಿ ಶಂಕರ್ ನಾಗ್ ಮೃತಪಟ್ಟ ನಂತರ ರೋಪ್ ವೇ ಯೋಜನೆ ತೆರೆಮರೆಗೆ ಸರಿದಿತ್ತು. 2004ರಲ್ಲಿ ತೋಟಗಾರಿಕೆ ಇಲಾಖೆ ಮತ್ತೆ ಈ ಯೋಜನೆಗೆ ಸಂಬಂಧಿಸಿದ ಹಾಗೆ ಸರ್ವೇ ಕಾರ್ಯ ನಡೆಸಿತು. ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಮತ್ತೆ ನನೆಗುದಿಗೆ ಬಿದ್ದಿತು. ಆ ನಂತರ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಯಿತು.

ಕೇಬಲ್ ಕಾರ್ ನಿರ್ಮಾಣಕ್ಕೆ ಮುಂದಾಗಿದ್ದ ಸುಧಾಮೂರ್ತಿ
ಸುಧಾಮೂರ್ತಿ ನೇತೃತ್ವದ ಇನ್ಪೋಸಿಸ್ ಫೌಂಡೇಷನ್ನ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿ ನಂದಿ ಬೆಟ್ಟದ ಮೇಲೆ ಕಾಲುದಾರಿಯನ್ನು ಅಭಿವೃದ್ಧಿಪಡಿಸಿ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ. ಇದಲ್ಲದೆ ಇನ್ಪೋಸಿಸ್ ಸಂಸ್ಥೆ 75 ಲಕ್ಷ ರೂ. ವೆಚ್ಚದಲ್ಲಿ ಗಿರಿಧಾಮದಲ್ಲಿನ ಹಳೆಯ ಶಾಲೆ ಮುಂಭಾಗದಿಂದ ಅರ್ಕಾವತಿ ನದಿ ಮೂಲ ಹಾಗೂ ಟಿಪ್ಪುಡ್ರಾಪ್ವರೆಗೆ 600ಮೀ. ಉದ್ದ, ಎರಡೂ ಬದಿಯಲ್ಲಿ ವಿನ್ಯಾಸಗೊಳಿಸಲಾದ ಕಲ್ಲು ಅಳವಡಿಕೆ, ಹಾಲಿ ಇರುವ ಮೆಟ್ಟಿಲುಗಳನ್ನು ಮರು ಜೋಡಿಸುವ ಕೆಲಸ ಮಾಡಿದೆ.
ಕಳೆದ ವರ್ಷ ಈ ಸಮಾರಂಭದಲ್ಲಿ ಮಾತನಾಡಿದ್ದ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ನಾರಾಯಣಮೂರ್ತಿ, "ನಂದಿಬೆಟ್ಟಕ್ಕೆ ರೋಪ್ವೇ(ಕೇಬಲ್ ಕಾರು) ಅಳವಡಿಸುವ ಕನಸು ಹೊಂದಿದ್ದೇನೆ. ನಂದಿ ಗಿರಿಧಾಮದ ಸುತ್ತ ನಾಲ್ಕು ಬೆಟ್ಟಗಳಿದ್ದು, ಬೆಟ್ಟಗಳಿಗೆ ರೋಪ್ವೇ ಮಾಡಿದರೆ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಲಿದೆ. ಇದರಿಂದ ನಂದಿಬೆಟ್ಟದ ಮೇಲಿನ ಜನದಟ್ಟಣೆ ಕಡಿಮೆಯಾಗಲಿದೆ" ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications