ಚಿಕ್ಕಬಳ್ಳಾಪುರ ಸ್ಫೋಟ; ಅರಣ್ಯ ಇಲಾಖೆ ಸ್ಪಷ್ಟನೆ
ಚಿಕ್ಕಬಳ್ಳಾಪುರ, ಫೆಬ್ರವರಿ 25: ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿ ಗ್ರಾಮದ ಕಲ್ಲು ಕ್ವಾರಿಯಲ್ಲಿ ಜಿಲಿಟಿನ್ ಕಡ್ಡಿಗಳು ಸ್ಪೋಟಗೊಂಡಿದೆ. ಸರ್ಕಾರ ಈ ದುರಂತದ ಕುರಿತು ಸಿಐಡಿ ತನಿಖೆ ನಡೆಸಲು ಆದೇಶ ನೀಡಿದೆ. ಅರಣ್ಯ ಇಲಾಖೆ ಈ ಸ್ಫೋಟದ ಕುರಿತು ಸ್ಪಷ್ಟನೆ ನೀಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಿರೇನಾಗವಲ್ಲಿ ಗ್ರಾಮದಲ್ಲಿ ನಡೆದ ಸ್ಫೋಟದಲ್ಲಿ 6 ಕಾರ್ಮಿಕರು ಮೃತಪಟ್ಟಿದ್ದರು. ಮಾಧ್ಯಮಗಳಲ್ಲಿ ಈ ಸ್ಫೋಟ ನಡೆದ ಸ್ಥಳ ಮತ್ತು ಸುತ್ತಮುತ್ತಲಿನ ಕಲ್ಲು ಗಣಿಗಾರಿಕೆ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ್ದು ಎಂದು ವರದಿಗಳು ಬಂದಿವೆ.
ಈ ಹಿನ್ನಲೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆಯಿಂದ ಸ್ಪಷ್ಟೀಕರಣ ನೀಡಲಾಗಿದೆ. ಜಿಲೆಟಿನ್ ಕಡ್ಡಿ ಸ್ಫೋಟಗೊಂಡ ಸ್ಥಳ ಸೇರಿದಂತೆ ಸುತ್ತಲಿನ ಪ್ರದೇಶವು ಸೋಮೇನಹಳ್ಳಿ ಹೋಬಳಿ ವರ್ಲಕೊಂಡ ಗ್ರಾಮದ ಸರ್ವೆ ನಂಬರ್ 168ರ ವಿಸ್ತೀರ್ಣದ ಯಾವುದೇ ಪ್ರದೇಶವೂ ಅರಣ್ಯ ಇಲಾಖೆಗೆ ಸೇರಿಲ್ಲ.

ಯಾವುದೇ ಅಧಿಸೂಚಿತ ಅರಣ್ಯ ಅಥವ ಅಧಿಸೂಚಿತ ಸೆಕ್ಷನ್ -4 ಅರಣ್ಯ ಅಥವ ಪರಿಭಾವಿತ ಅರಣ್ಯ ಪ್ರದೇಶಗಳು ಇರುವುದಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟೀಕರಣವನ್ನು ನೀಡಿದೆ.
ಸ್ಫೋಟಗೊಂಡ ಸ್ಥಳವು ಅರಣ್ಯ ಇಲಾಖೆಗೆ ಸೇರಿದ ಅಧಿಸೂಚಿತ ಬೀಚಗಾನಹಳ್ಳಿ ರಾಜ್ಯ ಅರಣ್ಯದಿಂದ ಸುಮಾರು 7 ಕಿ. ಮೀ. ದೂರದಲ್ಲಿದೆ. ಆದ್ದರಿಂದ, ಸ್ಪೋಟಗೊಂಡ ಸ್ಥಳದ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿಗಳು ಉಹಾಪೋಹವಾಗಿದೆ ಎಂದು ಅರಣ್ಯ ಇಲಾಖೆ ಹೇಳಿದೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಷರ್ ಮಾಲೀಕ ಮತ್ತು ಬಿಜೆಪಿ ಮುಖಂಡ ನಾಗರಾಜು ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ಫೋಟದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ.












Click it and Unblock the Notifications