Pradeep Eshwar:ರಾಜಕೀಯ ಒತ್ತಡಗಳಿಗೆ ಮಣಿದು FIR ದಾಖಲಿಸಬೇಡಿ- ಪೊಲೀಸರಿಗೆ ಶಾಸಕರ ಎಚ್ಚರಿಕೆ
ಚಿಕ್ಕಬಳ್ಳಾಪುರ, ಮೇ 30: ಅಣಕನೂರು ಜೈಲಿನಲ್ಲಿ ನನ್ನನ್ನು ಒಂದು ದಿನ ಇಟ್ಟಿದ್ದರಿಂದ ನಾನು ಶಾಸಕನಾದೆ, ಇಲ್ಲವಾದರೆ ಉಪನ್ಯಾಸಕನಾಗಿರುತ್ತಿದ್ದೆ ಎಂದು ಚಿಕ್ಕಬಳ್ಳಾಪುರದ ನೂತನ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಜೈಲಿನಲ್ಲಿ ಇದ್ದಿದ್ದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಶಾಸಕನಾದೆ, ಆದರೆ ಸಾಕಷ್ಟು ಮಂದಿಯನ್ನು ಇಂತಹ ಪ್ರಕರಣಗಳು ಸಮಾಜ ಘಾತುಕರನ್ನಾಗಿ ಪರಿವರ್ತಿಸುತ್ತವೆ. ಹೀಗಾಗಿ ವಿನಾಕಾರಣ ಯಾರ ಮೇಲೂ ಎಫ್ಐಆರ್ ದಾಖಲಿಸಬೇಡಿ ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

ಯಾರದ್ದೋ ಸ್ವಾರ್ಥಕ್ಕಾಗಿ ಇನ್ಯಾರದ್ದೋ ಜೀವನ ಹಾಳಾಗುವುದು ಬೇಡ. ರಾಜಕೀಯ ಒತ್ತಡಗಳಿಗೆ ಮಣಿದು ಸುಖಾಸುಮ್ಮನೆ ಅಮಾಯಕರ ಮೇಲೆ ಎಫ್ಐಆರ್ ದಾಖಲಿಸಬೇಡಿ, ಕಾನೂನು ವ್ಯಾಪ್ತಿಯಲ್ಲಿ ಸೂಕ್ತ ಕ್ರಮಕೈಗೊಳ್ಳಿ. ಯಾರದ್ದೋ ಬೆಂಬಲಿಗರ ಮೇಲೆ ಪ್ರಕರಣ ದಾಖಲಿಸಿದರೆ ಅವರು ಅದಕ್ಕಾಗಿ ಓಡಾಡಬೇಕಾಗುತ್ತದೆ. ಅವರಲ್ಲಿ ಕೆಟ್ಟ ನಡವಳಿಕೆ ಬೆಳೆಯಲು ಇದು ಕಾರಣವಾಗುತ್ತವೆ ಎಂದರು.
ಕ್ಷುಲ್ಲಕ ಕಾರಣಕ್ಕಾಗಿ ಬರುವ ಪ್ರಕರಣಗಳನ್ನು ಠಾಣೆ ಮಟ್ಟದಲ್ಲೇ ಬಗೆಹರಿಸಿ, ಅನಿವಾರ್ಯವಾದರೆ ಮಾತ್ರ ಎಫ್ಐಆರ್ ದಾಖಲಿಸಿ, ಈ ವಿಷಯದಲ್ಲಿ ಯಾರದ್ದೋ ಮಾತು ಕೇಳಿ ಒತ್ತಡಕ್ಕೆ ಒಳಗಾಗಿ ಇನ್ನೊಬ್ಬರಿಗೆ ತೊಂದರೆ ಕೊಡಬೇಡಿ. ನನ್ನ ಮೇಲೆ ಹಿಂದಿನ ಶಾಸಕರು 20 ಪ್ರಕರಣ ದಾಖಲಿಸಿದ್ದರು. ಎಲ್ಲರೂ ನನ್ನ ಹಾಗೆ ಇರುವುದಿಲ್ಲ. ಬಡವರಿಗೆ ಇಂತಹ ಪ್ರಕರಣಗಳನ್ನು ಎದುರಿಸುವುದು ಕಷ್ಟವಾಗುತ್ತದೆ. ಹಾಗಾಗಿ ಕ್ಷುಲ್ಲಕ ಕಾರಣಕ್ಕಾಗಿ ಯಾರ ಮೇಲೂ ಪ್ರಕರಣ ದಾಖಲಿಸಬೇಡಿ ಎಂದರು.
ಒಂದೇ ವೋಟ್ ಇದೆ ಎಂದರೆ ನಾವು ಬೇಡಾ ಎನ್ನುತ್ತೇವಾ? ಹಾಗಿದ್ದಾಗ ಒಂದು ಮಗುಗೆ ಬಸ್ ಓಡಿಸಬಾರದಾ? ಶಾಲೆಗೆ ಹೋಗುವ ಒಂದು ಮಗು ಇದ್ದರೂ, ಕೆಎಸ್ಆರ್ಟಿಸಿ ಬಸ್ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಂಚರಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದ ಪ್ರತಿ ಹಳ್ಳಿಗೂ ಕೆಎಸ್ಆರ್ಟಿಸಿ ಬಸ್ ಸಂಚರಿಸಬೇಕು. ಶಾಲಾ-ಕಾಲೇಜುಗಳ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಸೌಲಭ್ಯ ಕಲ್ಪಿಸಬೇಕು. ಒಂದು ತಿಂಗಳಲ್ಲೇ ಈ ಸೌಲಭ್ಯ ಜನರ ಕೈಗೆ ಸಿಗಬೇಕು. ಯಾವ ಜನ ಕೂಡ ನಮ್ಮ ಹಳ್ಳಿಗೆ ಬಸ್ ಬಂದಿಲ್ಲ ಎಂದು ಹೇಳಬಾರದು. ನಷ್ಟ ಎಂದು ಬಸ್ ಸಂಚಾರ ನಿಲ್ಲಿಸಬೇಡಿ. ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕ್ಲೀನ್ ಸಿಟಿ ಮಾಡಲು ಫ್ಲೆಕ್ಸ್ ತೆರವುಗೊಳಿಸಿ
ನಗರದಲ್ಲಿ ನನ್ನ ಭಾವಚಿತ್ರ ಸೇರಿದಂತೆ ಅನಧಿಕೃತ ಸ್ಥಳದಲ್ಲಿ ಅಳವಡಿಸಲಾಗಿರುವ ಯಾರ ಫ್ಲೆಕ್ಸ್ ಕೂಡ ಇರಬಾರದು. ನಗರ ಸ್ವಚ್ಛವಾಗಿರಬೇಕು. ಯಾರಿಗೂ ಹೆದರದೇ ಫ್ಲೆಕ್ಸ್ಗಳನ್ನು ತೆಗೆದು ಹಾಕಿ. ನಗರದಲ್ಲಿ ಫ್ಲೆಕ್ಸ್ ಸಂಸ್ಕೃತಿ ಕೊನೆಯಾಗಬೇಕು ಎಂದರು.
ಜನರಿಗೆ ನಕಲಿ ಹಕ್ಕು ಪತ್ರ ನೀಡಿದವರ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಅನುಕೂಲಕ್ಕೆ 22,000 ಜನ ನಿವೇಶನ ರಹಿತರಿಗೆ ಹಕ್ಕು ಪತ್ರ (Claim Letter) ನೀಡಲು ಮಾಜಿ ಸಚಿವ ಸುಧಾಕರ್ ಮುಂದಾಗಿದ್ದರು. ಸಾವಿರಾರು ಮಂದಿಗೆ ಈಗಾಗಲೇ ವಿತರಣೆಯಾಗಿದೆ. ನಕಲಿ ಹಕ್ಕುಪತ್ರ ನೀಡಿದವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ನನ್ನ ಹೊರತುಪಡಿಸಿ ಯಾರೇ ಬಂದು ನನ್ನ ಹೆಸರು ಹೇಳಿದರೂ, ಯಾರ ಮಾತು ಕೇಳಬೇಡಿ. ಅಧಿಕಾರಿಗಳು ಧೈರ್ಯದಿಂದ ಕೆಲಸ ಮಾಡಬೇಕು. ನಾನು 20 ವರ್ಷ ಶಾಸಕನಾಗಬೇಕಿಲ್ಲ. ಒಮ್ಮೆ ಆಗಿದ್ದೇನೆ. ಹೀಗಾಗಿ ಈಗಲೇ ನನ್ನ ಪವರ್ ತೋರಿಸುತ್ತೇನೆ ಎಂದರು.
ವೈದ್ಯಕೀಯ ಕಾಲೇಜು ಮರು ಉದ್ಘಾಟನೆ
ನಗರ ಹೊರವಲಯದಲ್ಲಿ ನಿರ್ಮಾಣ ಹಂತದ ಸರಕಾರಿ ವೈದ್ಯಕೀಯ ಕಾಲೇಜು ಉದ್ಘಾಟನೆ ಮಾಡಲಾಗಿದೆ. ಇನ್ನೂ 400 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕಿದೆ. ಕಾಲೇಜು ಕಟ್ಟಡ ಕಾಮಗಾರಿ ಮುಗಿದ ಮೇಲೆ ಮತ್ತೆ ಉದ್ಘಾಟನೆ ಮಾಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕಾಲೇಜು ಉದ್ಘಾಟನೆ ಮಾಡಿಸುತ್ತೇವೆ. ಕಟ್ಟಡ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಸರ್ಕಾರಿ ಕಾಲೇಜು ಉದ್ಘಾಟನೆ ಮಾಡಿದೆ ಎಂದು ಗುಡುಗಿದರು.












Click it and Unblock the Notifications