ಬಾಗೇಪಲ್ಲಿ ಅಭಿವೃದ್ಧಿ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ: ಆರೋಗ್ಯ ಸಚಿವ ಸುಧಾಕರ್
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 3 : ಸ್ವಾತಂತ್ರ್ಯಾ ನಂತರ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳೂ ಬಾಗೇಪಲ್ಲಿ ಕ್ಷೇತ್ರಕ್ಕೆ ಅನ್ಯಾಯ ಮಾಡಿವೆ. ಸದ್ಯ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಮಾತ್ರ ಕ್ಷೇತ್ರಕ್ಕೆ ಎಚ್ಎನ್ ವ್ಯಾಲಿ, ಎತ್ತಿನಹೊಳೆ ಸಹಿತ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಸೆಪ್ಟೆಂಬರ್ 8ರಂದು ನಡೆಯಲಿರುವ ಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರದ ಅವಧಿಯ ಅಂತಿಮ ಸಂಪುಟ ಸಭೆಯಲ್ಲಿ ಎಚ್ಎನ್ ವ್ಯಾಲಿ ಘೋಷಣೆಯಾಗಿದೆ ಎಂದು ಬಾಗೇಪಲ್ಲಿ ಶಾಸಕರು ಹೇಳಿದ್ದಾರೆ. ಆದರೆ ಕೇವಲ ತೀರ್ಮಾನ ಮಾಡಿದರೆ ಸಾಕಾ? ಅನುಷ್ಠಾನಕ್ಕೆ ಅನುದಾನ ನೀಡುವವರು ಯಾರು? ಸುಬ್ಬಾರೆಡ್ಡಿಯವರಾ ಎಂದು ಪ್ರಶ್ನೆ ಮಾಡಿದರು.
ಸೆ.8ಕ್ಕೆ ಜನೋತ್ಸವ: ಪೂರ್ವಭಾವಿ ಸಭೆ, ಸುಧಾಕರ್ ಹೇಳಿದ್ದೇನು?
ಸಮ್ಮಿಶ್ರ ಸರ್ಕಾರದ ಅಂತಿಮ ಸಂಪುಟ ಸಭೆಯಲ್ಲಿ ಯೋಜನೆ ಕುರಿತು ತೀರ್ಮಾನವಾದರೂ ಅದಕ್ಕೆ 60 ಕೋಟಿ ರುಪಾಯಿ ಅನುದಾನ ನೀಡಿದ್ದು ಬಿಜೆಪಿ ಸರ್ಕಾರ. ಹಿಂದಿನ ಯಾವ ಪಕ್ಷದ ಸರ್ಕಾರವೂ ಬಾಗೇಪಲ್ಲಿ ಅಭಿವೃದ್ಧಿಗೆ ಒತ್ತು ನೀಡಿಲ್ಲ. ಈಗ ನಮ್ಮ ಬಿಜೆಪಿ ಸರ್ಕಾರ ಹೆಚ್ಚಿನ ಒತ್ತು ನೀಡಿ, ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ ಎಂದು ಹೇಳಿದರು.
ವೈದ್ಯರ ರಕ್ಷಣೆಗೆ ಸರ್ಕಾರ ಬದ್ಧ, ವೈದ್ಯರ ಮೇಲೆ ಹಲ್ಲೆಗೈದವರ ವಿರುದ್ಧ ಕ್ರಮ:ಸುಧಾಕರ್
ಮಂಗಳೂರು ಕಾರ್ಯಕ್ರಮ ಬರೀ ಟ್ರೇಲರ್ ಮಾತ್ರ
ಶುಕ್ರವಾರ ಮಂಗಳೂರಿನಲ್ಲಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದಾರೆ. ಅವರು ರಾಜ್ಯದ ಹಲವು ಭಾಗಗಳಿಂದ ಬಂದ ಜನರಲ್ಲ, ಬದಲಿಗೆ ಕೇವಲ ಒಂದು ಜಿಲ್ಲೆಯಿಂದ ಬಂದ ಜನ ಮಾತ್ರ. ಬಿಜೆಪಿ ಎಲ್ಲಿದೆ ಎಂದು ಕಾಂಗ್ರೆಸ್ನವರು ಕೇಳುತ್ತಾರೆ, ಅವರಿಗೆ ಕಣ್ಣಿದ್ದರೆ ನಿನ್ನೆಯ ಕಾರ್ಯಕ್ರಮ ನೋಡಲಿ, ಬಿಜೆಪಿ ಎಲ್ಲಿದೆ ಎಂದು ಕಾಣಿಸುತ್ತದೆ ಎಂದು ಲೇವಡಿ ಮಾಡಿದರು.
ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಕೇವಲ ಟ್ರೇಲರ್ ಮಾತ್ರ. ಮತ್ತೊಂದು ಟ್ರೇಲರ್ ಸೆಪ್ಟೆಂಬರ್ 8 ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬಾಗೇಪಲ್ಲಿ ಕ್ಷೇತ್ರವೊಂದರಿಂದಲೇ 20 ಸಾವಿರ ಮಂದಿ ಬರಬೇಕು. ಹಬ್ಬಗಳೆಲ್ಲ ಮುಗಿದಿವೆ, ಹಾಗಾಗಿ ಹೆಚ್ಚಿನ ಜನ ಆಗಮಿಸಿ ಬಿಜೆಪಿ ಸರ್ಕಾರದ ಜೊತೆ ಇದ್ದೇವೆ ಎಂದು ಸಾಬೀತುಪಡಿಸಬೇಕು ಎಂದು ಮನವಿ ಮಾಡಿದರು.
ಶೀಘ್ರದಲ್ಲೇ ಎತ್ತಿನಹೊಳೆ ನೀರು ಬಾಗೇಪಲ್ಲಿದೆ
ಬಿಜೆಪಿ ಡಬಲ್ ಇಂಜಿನ್ ಸರ್ಕಾರ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ರೈತರಿಗೆ ಸೇರಿದಂತೆ ಪ್ರತಿಯೊಂದು ವರ್ಗದ ಜನರಿಗೂ ಒಂದಲ್ಲ ಒಂದು ಕಾರ್ಯಕ್ರಮ ನೀಡಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಸಮೃದ್ಧವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಇಡೀ ವಿಶ್ವದಲ್ಲೇ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ನಾಯಕ ಎಂದು ಈಗಾಗಲೇ ಸಾಬೀತಾಗಿದೆ ಎಂದು ಹೇಳಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕರಾಗಿ ಆಯ್ಕೆಯಾಗಬೇಕು. ಇದಕ್ಕೆ ಸೆಪ್ಟೆಂಬರ್ 8 ರಂದು ನಡೆಯಲಿರುವ ಜನೋತ್ಸವ ಕಾರ್ಯಕ್ರಮ ಮುನ್ನುಡಿಯಾಗಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಚ್ಎನ್ ವ್ಯಾಲಿ ನೀರು ಜಿಲ್ಲೆಗೆ ಬರಲಿದ್ದು, ಶೀಘ್ರದಲ್ಲಿಯೇ ಎತ್ತಿನಹೊಳೆ ನೀರೂ ಕೂಡ ಬಾಗೇಪಲ್ಲಿಗೆ ಬರಲಿದೆ ಎಂದು ಸಚಿವ ಸುಧಾಕರ್ ಭರವಸೆ ನೀಡಿದರು.
ಬಾಗೇಪಲ್ಲಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ
ಬಾಗೇಪಲ್ಲಿ ಕ್ಷೇತ್ರ ಹಿಂದುಳಿದ ಕ್ಷೇತ್ರವಾಗಿದೆ. ಯಾವುದೇ ಕೈಗಾರಿಕೆಗಳಿಲ್ಲದ ಕಾರಣ ಯುವಕರು ಉದ್ಯೋಗಕ್ಕಾಗಿ ನಗರಗಳಿಗೆ ಗುಳೆ ಹೋಗುವಂತಾಗಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಮೂಲಕ ಉದ್ಯೋಗವಕಾಶ ಕಲ್ಪಿಸಲಾಗುವುದು. ಕೈಗಾರಿಕೆಗಳಿಗಾಗಿ ಭೂಸ್ವಾಧಿನ ಪ್ರಕ್ರಿಯೆಗೆ ಇದ್ದ ತಾಂತ್ರಿಕ ತೊಂದರೆಗಳನ್ನು ಶೀಘ್ರವೇ ಬಗೆಹರಿಸಿ, ಕೈಗಾರಿಕೆಗಳ ಸ್ಥಾಪನೆಗೆ ಕ್ರಮಕೈಗೊಳ್ಳುವುದಾಗಿ ಸಚಿವ ಸುಧಾಕರ್ ತಿಳಿಸಿದರು.
ಬಾಗೇಪಲ್ಲಿ ಕ್ಷೇತ್ರಕ್ಕೆ ಶಾಶ್ವತ ನೀರಾವರಿ, ಕೈಗಾರಿಕೆಗಳ ಸ್ಥಾಪನೆಯಾಗಬೇಕಿದ್ದರೆ ಅದು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ಹಾಗಾಗಿ ಪಕ್ಷದ ಮುಖಂಡರು ಪ್ರತಿ ಗ್ರಾಪಂಗೆ ಭೇಟಿ ನೀಡಿ, ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಸಂಘಟನೆ ಮಾಡಬೇಕು. ಆ ಮೂಲಕ ಪಕ್ಷ ಬಲಿಷ್ಠವಾಗಲು ಸಹಕಾರ ನೀಡಬೇಕು ಎಂದರು.
ಇದೇ ಮೊದಲ ಬಾರಿಗೆ ರೈತರ ಮಕ್ಕಳಿಗೆ ಧನಸಹಾಯ
ದೇಶದಲ್ಲಿ ಪ್ರಥಮ ಬಾರಿಗೆ ರೈತರಿಗೆ ವಾರ್ಷಿಕ ಧನಸಹಾಯ ನೀಡಿದ ಏಕೈಕ ಸರ್ಕಾರ ಬಿಜೆಪಿ, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ ಏಕೈಕ ಸರ್ಕಾರ, ಮಹಿಳೆಯರ ಆರ್ಥಿಕ ಚೈತನ್ಯಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಸಮೃದ್ಧಿ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಮೂಲಕ ಮಹಿಳೆಯರಿಗೆ ಧನ ಸಹಾಯ ಮಾಡುವ ಜೊತೆಗೆ ಅವರ ಸ್ವಾವಲಂಬಿ ಜೀವನಕ್ಕಾಗಿ ವಿಶೇಷ ತರಬೇತಿ ನೀಡಿ, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟನೆ ಮಾಡಬೇಕು, ನಾನು ಸಚಿವನಾಗಿರಬಹುದು ಆದರೆ ನನ್ನ ಬೂತ್ನಲ್ಲಿ ಹೆಚ್ಚಿನ ಮತಗಳನ್ನು ತಂದರೆ ಮಾತ್ರ ನಾನು ನಾಯಕನಾಗಲು ಸಾಧ್ಯ. ಪ್ರತಿ ಬೂತಿನ ಮುಖ್ಯಸ್ಥರು ಪಕ್ಷವನ್ನು ಬಲಪಡಿಸಲು ಕೆಲಸ ಮಾಡಬೇಕು, ಆಗ ಮಾತ್ರ ಪಕ್ಷ ಬಲಿಷ್ಠವಾಗಲಿದೆ ಎಂದು ಸಚಿವ ಕೆ. ಸುಧಾಕರ್ ಕರೆ ನೀಡಿದರು.