ಡಿಸಿಸಿ ಬ್ಯಾಂಕ್ ರಮೇಶ್ ಕುಮಾರ್ ಅವರದ್ದಲ್ಲ; ಸುಧಾಕರ್
ಚಿಕಬಳ್ಳಾಪುರ, ಅಕ್ಟೋಬರ್ 20; "ಡಿಸಿಸಿ ಬ್ಯಾಂಕ್ ಯಾರಪ್ಪನ ಆಸ್ತಿಯೂ ಅಲ್ಲ. ಬ್ಯಾಂಕ್ ಗೋವಿಂದೇಗೌಡರದ್ದೂ ಅಲ್ಲ, ರಮೇಶ್ ಕುಮಾರ್ ಅವರದ್ದೂ ಅಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಗೆ ಸಿಗಬೇಕಾದ ಪಾಲನ್ನು ನ್ಯಾಯಯುತವಾಗಿ ತಂದುಕೊಡುತ್ತೇನೆ. ಇಲ್ಲದಿದ್ದರೆ ಸಚಿವನಾಗಿ ಮುಂದುವರಿಯುವುದಿಲ್ಲ" ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಡಿಸಿಸಿ ಬ್ಯಾಂಕ್ ನಡಿ ಎರಡೂವರೆ ಸಾವಿರ ಸಂಘಗಳನ್ನು ರಚಿಸಲಾಗಿದೆ. ಇದಕ್ಕೆ ಎಷ್ಟು ಸಾಲ ನೀಡಲಾಗಿದೆ ಎಂದು ಕೇಳಬೇಕಿದೆ. ಕೆಜಿಎಫ್ ಹಾಗೂ ಶ್ರೀನಿವಾಸಪುರಕ್ಕೆ 300-400 ಕೋಟಿ ರೂ. ನೀಡಲಾಗುತ್ತಿದೆ" ಎಂದು ದೂರಿದರು.
"ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣವಾಗಿದೆ. ಡಿಸಿಸಿ ಬ್ಯಾಂಕ್ ಯಾರಪ್ಪನ ಆಸ್ತಿಯೂ ಅಲ್ಲ. ಡಿಸಿಸಿ ಬ್ಯಾಂಕ್ ಗೋವಿಂದೇಗೌಡರದ್ದೂ ಅಲ್ಲ, ರಮೇಶ್ ಕುಮಾರ್ ಅವರದ್ದೂ ಅಲ್ಲ. ಜಿಲ್ಲೆಗೆ ಸಿಗಬೇಕಾದ ಪಾಲನ್ನು ನ್ಯಾಯಯುತವಾಗಿ ತಂದುಕೊಡುತ್ತೇನೆ" ಎಂದು ಘೋಷಣೆ ಮಾಡಿದರು.

"ಬ್ಯಾಂಕ್ನ ತನಿಖೆಗೂ ಅಡ್ಡಿಪಡಿಸಿದ್ದಾರೆ. ಇದಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಿಂಗ್ ಮಾಸ್ಟರ್ ಆಗಿದ್ದು, ಅವರಂತಹ ಡಂಭಾಚಾರದ ವ್ಯಕ್ತಿಯನ್ನು ಜೀವನದಲ್ಲೇ ನೋಡಿಲ್ಲ. ಶ್ರೀನಿವಾಸಪುರದ ಜನರು ಅಮಾಯಕರಾಗಿ ಅವರನ್ನು ನಂಬುತ್ತಿದ್ದಾರೆ" ಎಂದು ಆರೋಪಿಸಿದರು.
ನಿವೇಶನ ನೀಡಲಾಗುತ್ತದೆ; "ಜಿಲ್ಲೆಯ ಬಲಹೀನ ವರ್ಗದ ರೈತರಿಗೆ ಉಚಿತ ನಿವೇಶನ ನೀಡಲು ಜಿಲ್ಲಾಧಿಕಾರಿಗೆ ಫಲಾನುಭವಿಗಳ ಪಟ್ಟಿ ಮಾಡಲು ಸೂಚಿಸಲಾಗಿದೆ. ಬೋರ್ ವೆಲ್ ಸೌಲಭ್ಯ, ಸಾಲ ಸೌಲಭ್ಯ ಮೊದಲಾದವುದನ್ನು ಮಾಡಬೇಕು. ಭೂ ಚೇತನ, ಕಿಸಾನ್ ಸಮ್ಮಾನ್ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕು" ಎಂದು ಸೂಚಿಸಲಾಗಿದೆ ಎಂದು ಹೇಳಿದರು.
"ಪ್ರಧಾನಿ ನರೇಂದ್ರ ಮೋದಿ ರೈತ ವಿರೋಧಿ ಎಂದು ಟೀಕೆ ಮಾಡಲಾಗುತ್ತಿದೆ. ಆದರೆ ಯಾವುದೇ ಸರ್ಕಾರ ಮಾಡದ ಕೆಲಸವನ್ನು ಮೋದಿ ಮಾಡಿದ್ದಾರೆ. ಕಿಸಾನ್ ಸಮ್ಮಾನ್ ನಡಿ ರೈತರ ಖಾತೆಗೆ ಹಣ ನೀಡಿದ್ದಾರೆ. ಎಪಿಎಂಸಿಯನ್ನು ಸ್ವತಂತ್ರಗೊಳಿಸಿ ದಲ್ಲಾಳಿಗಳಿಂದ ರೈತರನ್ನು ಮುಕ್ತ ಮಾಡಿದ್ದಾರೆ. ಬಲಹೀನ ವರ್ಗದ ಪರವಾಗಿ ಸರ್ಕಾರ ಈ ಕೆಲಸ ಮಾಡಿದೆ. ರಾಮರಾಜ್ಯವನ್ನು ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ" ಎಂದರು.
"ಆದಿಕವಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ 24,000 ಶ್ಲೋಕಗಳಿವೆ. ಸಾಮಾನ್ಯ ಬೇಡರ ಕುಲದ ವ್ಯಕ್ತಿ ವಾಲ್ಮೀಕಿ, ಕುಟುಂಬ ಸಲಹಲು ದರೋಡೆಕೋರನಾಗುತ್ತಾರೆ. ನಾರದ ಮುನಿ ಅವರನ್ನು ಕಂಡು, ದರೋಡೆ ಪಾಪದ ಕೆಲಸ ಹಾಗೂ ಈ ಪಾಪದ ಪಾಲನ್ನು ಕುಟುಂಬದವರು ಪಡೆಯುತ್ತಾರೆಯೇ ಎಂದು ಕೇಳುತ್ತಾರೆ. ವಾಲ್ಮೀಕಿ ಮನೆಗೆ ಹೋಗಿ ಇದೇ ಪ್ರಶ್ನೆ ಕೇಳಿದಾಗ ಅವರನ್ನು ಪಾಪದ ಪಾಲು ಪಡೆಯಲು ಒಪ್ಪುವುದಿಲ್ಲ. ಇದರಿಂದ ವಾಲ್ಮೀಕಿ ಮನಸ್ಸು ಪರಿವರ್ತನೆಯಾಗುತ್ತದೆ. ಒಬ್ಬ ವ್ಯಕ್ತಿ ಜ್ಞಾನದಿಂದ ಎತ್ತರಕ್ಕೇರಲು ಸಾಧ್ಯ ಎಂಬುದು ವಾಲ್ಮೀಕಿ ಜೀವನದಿಂದ ತಿಳಿಯುತ್ತದೆ" ಎಂದು ಹೇಳಿದರು.
"ವಾಲ್ಮೀಕಿ ಜನಾಂಗ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರುವ ಪ್ರಯತ್ನ ಮಾಡಬೇಕು. ಪರಿಶಿಷ್ಟ ಪಂಗಡದೊಂದಿಗೆ ಸರ್ಕಾರ ಸದಾ ಇರುತ್ತದೆ. ದೇವರು ಅಥವಾ ಯಾರೂ ತಮ್ಮನ್ನು ಮೇಲಕ್ಕೆತ್ತುತಾರೆ ಎಂಬ ನಂಬಿಕೆ ಬೇಡ, ಜ್ಞಾನದಿಂದಾಗಿ ವಿಕಾಸ ಸಾಧ್ಯ ಎಂದು ಡಾ. ಬಿ. ಆರ್. ಅಂಬೇಡ್ಕರ್ ಹೇಳಿದ್ದರು. ಲಕ್ಷ್ಮಣನ ಸಹೋದರತೆ, ರಾಮರಾಜ್ಯ, ತಂದೆಯ ಆದೇಶದ ಮೇರೆಗೆ ಶ್ರೀರಾಮ ವನವಾಸ ಮಾಡುವ ಪಿತೃವಾಕ್ಯಪರಿಪಾಲನೆ ಮುಂತಾದವುಗಳನ್ನು ತಿಳಿಯಲು ರಾಮಾಯಣವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು" ಎಂದು ಕರೆ ನೀಡಿದರು.
ಸಮುದಾಯ ಭವನಕ್ಕೆ 30 ಗುಂಟೆ; "ಜಿಲ್ಲಾ ಮಟ್ಟದ ಸಮುದಾಯ ಭವನಕ್ಕೆ ನಿವೇಶನ ಬೇಕೆಂದು ಪರಿಶಿಷ್ಟ ಪಂಗಡದ ಸಮುದಾಯದವರು ಕೇಳಿದ್ದರು. ಇದಕ್ಕಾಗಿ ಚಿಕ್ಕಬಳ್ಳಾಪುರ ನಗರದ ಹೃದಯಭಾಗದಲ್ಲಿ 30 ಗುಂಟೆ ಜಮೀನನ್ನು ಇಂದು ನೀಡಲಾಗುತ್ತಿದೆ. ಒಂದೇ ವಾರದಲ್ಲಿ ಸಮುದಾಯ ಭವನಕ್ಕೆ ಜಮೀನು ಮಂಜೂರು ಮಾಡಲಾಗಿದೆ" ಎಂದು ಸಚಿವ ಸುಧಾಕರ್ ಹೇಳಿದರು.
"ಜಿಲ್ಲಾಮಟ್ಟದ ಭವನ ಇದೇ ವರ್ಷ ನಿರ್ಮಿಸಬೇಕೆಂದು ಕೂಡ ಮುಖ್ಯಮಂತ್ರಿಗಳಿಗೆ ಕೋರಲಾಗಿದೆ. ಕಾನೂನು ಪ್ರಕಾರ ಸಿಗಬೇಕಾದ ಸೌಲಭ್ಯಗಳನ್ನು ಜನಾಂಗದ ಸಹೋದರನಾಗಿ ಮಾಡಿಕೊಡುತ್ತಿದ್ದೇನೆ. ಯಾವುದೇ ದುರ್ಬಲ ವರ್ಗಗಳ ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದರು.
"ಚಿಕ್ಕಬಳ್ಳಾಪುರದಲ್ಲಿ ಹೈನುಗಾರಿಕೆ ಉಪಕಸುಬಾಗಿದ್ದು, ಇದಕ್ಕಾಗಿ ಕೋಮುಲ್ ವಿಭಜಿಸಬೇಕಿದೆ. ಇದಕ್ಕೆ ಯಾವ ದೊಣ್ಣೆನಾಯಕರ ಅಪ್ಪಣೆ ಬೇಕಿಲ್ಲ. ಆದರೆ ಇಂದು ಕೆಲ ಸ್ವಾರ್ಥಿಗಳು ಅವರ ಕಪಿಮುಷ್ಠಿಯಲ್ಲಿ ಡಿಸಿಸಿ ಬ್ಯಾಂಕ್, ಕೋಮುಲ್ ಅನ್ನು ಇಟ್ಟುಕೊಂಡು ಅದರಿಂದ ರಾಜಕೀಯ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ" ಎಂದು ಸಚಿವರು ತಿಳಿಸಿದರು.












Click it and Unblock the Notifications