ಬಾಯಿಗೆ ಬಂದಂತೆ ಮಾತನಾಡಿದರೆ ಊರು ಬಿಡಬೇಕಾಗುತ್ತೆ: ಶಾಸಕ ಎಸ್ಎನ್ ಸುಬ್ಬಾರೆಡ್ಡಿ
ಚಿಕ್ಕಬಳ್ಳಾಪುರ ಸೆಪ್ಟೆಂಬರ್ 11: ನನ್ನ ಕ್ಷೇತ್ರಕ್ಕೆ ಬೇಕಾದ ಯೋಜನೆಗಳಿಗಾಗಿ ಅನುದಾನಕ್ಕಾಗಿ ವಿರೋಧ ಪಕ್ಷದಲ್ಲಿದ್ದಾಗಲೂ ಬಿಜೆಪಿ ಸರಕಾರದ ಬಳಿಯೂ ಅನುದಾನಕ್ಕಾಗಿ ಗುರುತಿಸಿಕೊಂಡವರಿಗೆ ಪಕ್ಷಬೇದ ಮರೆತು ಪ್ರತಿಯೊಬ್ಬರಿಗೂ ಸರಕಾರದ ಸೌಲಭ್ಯ ಕಲ್ಪಿಸುವುದು ನನ್ನ ಕರ್ತವ್ಯವಾಗಿದೆ ಎಂದು ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಂದಾಯ ಇಲಾಖೆ ಹಾಗೂ ತಾಲೂಕು ಪಂಚಾಯತಿ ಗುಡಿಬಂಡೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ ಸಣ್ಣತನದಿಂದ ನಾನು ಆ ಪಕ್ಷದವನು ಅವರಿಂದ ಯಾವ ಕೆಲಸವೂ ನನಗೆ ಬೇಡ ಎಂದು ಯೋಚಿಸಬೇಡಿ ನಾನು ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಮಾಡುತ್ತೇನೆ ಉಳಿದ ಸಮಯದಲ್ಲಿ ನಾನು ಎಲ್ಲರ ಸೇವೆ ಮಾಡುತ್ತೇನೆ ಎಂದರು.

ಸೋಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತರಿಗಾಗಿ ಒಟ್ಟು 188 ವಸತಿಗಳನ್ನು ಮಂಜೂರು ಮಾಡಲಾಗಿದೆ, ನಿವೇಶನ ರಹಿತರಿಗಾಗಿ 15 ಎಕರೆ ಪ್ರದೇಶವನ್ನು ಜಾಗ ಕಾಯ್ದಿರಿಸಲಾಗಿದೆ, ಸುತ್ತ ಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಬಾಕಿ ರಸ್ತೆ ನಿರ್ಮಾಣ, ಕೆಲ ಗ್ರಾಮಗಳ ರಸ್ತೆಗಳಿಗೆ ಸ್ವಂತ ಹಣ ಹಾಕಿ ಕಾಮಗಾರಿ ಮಾಡಿಸಿದ್ದು, ಇದುವರೆಗೂ ಸರಕಾರ ಅನುದಾನ ನೀಡದಿದ್ದರೂ ಸಹ ಸಿಸಿ ರಸ್ತೆ ಮಾಡಿಸಿದ್ದೇನೆ ಎಂದರು.
ಊರು ಬಿಟ್ಟು ಹೋಗಬೇಕಾಗುತ್ತೆ ಎಂದ ಶಾಸಕರು -
ಚುನಾವಣೆ ವೇಳೆ ಬಿಟ್ಟು ಉಳಿದ ಸಂದರ್ಭದಲ್ಲಿ ರಾಜಕೀಯ ಮಾಡದೇ ನಿಮ್ಮ ಸೇವೆ ಮಾಡುತ್ತಾ ಬಂದಿದ್ದೆನೇ, ಆದರೆ ಕೆಲವರು ಅಲ್ಲಿ ಇಲ್ಲಿ ನನ್ನ ಬಗ್ಗೆ ಕೇವಲವಾಗಿ ಮಾತನಾಡುತ್ತ, ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು, ಬೇಕಾಬಿಟ್ಟಿಯಾಗಿ ನನ್ನ ಬಗ್ಗೆ ಮಾತನಾಡಿದರೆ, ನಾನು ಸಹ ರಾಜಕೀಯ ಮಾಡಬೇಕಾಗುತ್ತದೆ ಆಗ ನೀವು ನಿಮ್ಮ ಊರನ್ನೇ ಬಿಡಬೇಕಾಗುತ್ತದೆ ಎಂದು ತಮ್ಮ ರಾಜಕೀಯ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.
ಈ ಹಿಂದೆಯೂ ಸೋಮೇನಹಳ್ಳಿ ಗ್ರಾಮದಲ್ಲಿ ಜನಸ್ಪಂದನಾ ಕಾರ್ಯಕ್ರಮ ಮಾಡಿದ್ದಾಗ ಅನೇಕರು ಅಹವಾಲು ಸಲ್ಲಿಸಿದ್ದರು, ಅವುಗಳಲ್ಲಿ ಬಹುತೇಕ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ, ಅದೇ ರೀತಿ ಇಂದು ಸಾರ್ವಜನಿಕರಿಂದ ಬಂದ ಅಹವಾಲು ಸ್ವೀಕರಿಸಿ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಯೋಜನೆಯ ಅಡಿ ಆಯ್ಕೆಯಾದ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಸಲಕರಣೆಗಳನ್ನು ವಿತರಿಸಲಾಯಿತು.

ತಹಸೀಲ್ದಾರ್ ಸಿಗ್ಬತ್ ವುಲ್ಲಾ ಮಾತನಾಡಿ ತಲೆ ತಾಲಂತರಗಳಿಂದ ಅಣ್ಣ-ತಮ್ಮಂದಿರು ಜಮೀನು ಇಬ್ಬಾಗ ಸಮಸ್ಯೆ ಯಿಂದ ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಫವತಿ ಖಾತೆ ಆಂದೋಲನ ಹಮ್ಮಿಕೊಂಡಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಹಾಕಿಕೊಂಡ ರೈತರಿಗೆ ಸಾಗುವಳಿ ಚೀಟಿ ವಿತರಣೆ ಮಾಡಲು ಕ್ರಮ ಜರುಗಿಸಲಾಗುವುದು ಎಂದರು. ಮಾಸಾಶನ, ವೃದ್ದಾಪ್ಯ ವೇತನ, ಪಡಿತರ ಚೀಟಿ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರು ಅಹವಾಲು ಸಲ್ಲಿಸಿದರೆ ಕೂಡಲೇ ಇತ್ಯರ್ಥ ಪಡಿಸುವ ಭರವಸೆ ನೀಡಿದರು.
ಸೋಮೇನಹಳ್ಳಿ ಗ್ರಾಮದ ಮುಖಂಡ ಅಶ್ವತ್ತಪ್ಪ ಮಾತನಾಡಿ ಸೋಮೇನಹಳ್ಳಿ ಹೋಬಳಿ ಕೇಂದ್ರಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ, ಪೊಲೀಸ್ ಹೊರ ಠಾಣೆ, ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರ ಮರು ಸ್ಥಾಪನೆ, ಆಸ್ಪತ್ರೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಗಮನ ಚೆಲ್ಲಿದರು. ಸೋಮೇನಹಳ್ಳಿ ಕೆರೆಯಲ್ಲಿದ್ದ ಜಾಲಿ ಮರಗಳನ್ನು ಹರಾಜು ಮಾಡಿದ ಅರಣ್ಯ ಇಲಾಖೆಯವರು ಗ್ರಾಮ ಪಂಚಾಯತಿಗೆ ಹಿಂತಿರುಗಿಸಬೇಕಾದ 6 ಲಕ್ಷ ಹಣವನ್ನು ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.
ಗ್ರಾಪಂ ಅಧ್ಯಕ್ಷರಾದ ಸುಮಂಗಳಮ್ಮ ಮಾತನಾಡಿ ಸಾರ್ವಜನಿಕರು ಗ್ರಾಮ ಪಂಚಾಯತಿ ಅಧ್ಯಕ್ಷರ ಬಳಿ ಬಂದು ಚರಂಡಿ ನಿರ್ಮಿಸಿಲ್ಲ, ರಸ್ತೆ ಹಾಕಿಲ್ಲ, ಮನೆ ಕೊಟ್ಟಿಲ್ಲ, ನಿವೇಶನ ಇಲ್ಲ ಎಂದು ಗಲಾಟೆ ಮಾಡುತ್ತೀರಿ, ಸರಕಾರದ ವತಿಯಿಂದ ಒಂದೇ ಒಂದು ಬಿಡಿಗಾಸು ಅನುದಾನ ಬಂದಿಲ್ಲ ಹೀಗಿದ್ದಾಗ ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಹೇಗೆ, ಶಾಸಕರ ಬಳಿ ಬಂದು ನಿಮ್ಮ ಸಮಸ್ಯೆಗಳನ್ನು ಕೇಳಿ ನಾನು ನಿಮ್ಮ ಜೊತೆ ಧ್ವನಿಗೂಡಿಸುತ್ತೇನೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ತಾಲೂಕು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ವತಿಯಿಂದ ಮಳಿಗೆಗಳನ್ನು ತೆರೆಯಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷರಾದ ಸೋಮಣ್ಣ, ತಹಶೀಲ್ದಾರ್ ಸಿಗ್ಬತ್ ವುಲ್ಲಾ, ವೃತ್ತ ನಿರೀಕ್ಷಕ ನಾಯಜ್ ಬೇಗ್, ಪೆರೇಸಂದ್ರ ಠಾಣೆಯ ಉಪ ನಿರೀಕ್ಷಕ ಜಗದೀಶ್ ರೆಡ್ಡಿ, ಗ್ರಾ.ಪಂ ಸದಸ್ಯರು, ಗ್ರಾಪಂ ಮುಖಂಡರು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೇಶವರೆಡ್ಡಿ, ಪಶು ವೈದ್ಯಾಧಿಕಾರಿ ಡಾ. ರವೀಂದ್ರ, ಸಿಡಿಪಿಓ ರಫೀಕ್, ತೋಟಗಾರಿಕೆ ಅಧಿಕಾರಿ ದಿವಾಕರ್, ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಕಸಾಪ ಅಧ್ಯಕ್ಷ ಬಿ. ಮಂಜುನಾಥ್, ತಾಪಂ ವ್ಯವಸ್ಥಾಪಕ ರಾಮಾಂಜಿನಪ್ಪ, ಕೋಚಿಮುಲ್ ನಿರ್ದೇಶಕ ಆದಿನಾರಾಯಣರೆಡ್ಡಿ, ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಆಧಿರೆಡ್ಡಿ, ಕೆಡಿಪಿ ಸದಸ್ಯರಾದ ರಿಯಾಜ್ ಪಾಷಾ, ಎಚ್. ಪಿ. ಲಕ್ಷ್ಮಿನಾರಾಯಣ, ಇಂದಿರಾ ಅಶ್ವಥ್ ರೆಡ್ಡಿ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಹಾಜರಿದ್ದ ನೂರಾರು ಸಾರ್ವಜನಿಕರು ಹಾಜರಿದ್ದರು.












Click it and Unblock the Notifications