ದೇಶ ಕಾಯುವ ಯೋಧನಿಂದ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ರೆವಿನ್ಯೂ ಇನ್ಸ್ಪೆಕ್ಟರ್ !
ಚಿಕ್ಕಬಳ್ಳಾಪುರ, ಏಪ್ರಿಲ್ 23: ಆತ ವರ್ಷಗಳ ಕಾಲ ದೇಶದ ಗಡಿ ಕಾದು ಬಂದಿದ್ದ ಯೋಧ. ನಿವೃತ್ತಿ ಬಳಿಕ ಬದುಕನ್ನು ಕಟ್ಟಿಕೊಳ್ಳೋಕೆ ಭೂಮಿ ಮಂಜೂರು ಮಾಡುವಂತೆ ಸರ್ಕಾರವನ್ನು ಕೇಳಿಕೊಂಡಿದ್ದ. ಸರ್ಕಾರವೂ ಮಂಜೂರು ಮಾಡಿತ್ತು. ಆದರೆ, ಈ ಮಾಜಿ ಸೈನಿಕ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿ ವರದಿ ನೀಡಲಿಕ್ಕೆ ಎರಡು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಿಡ್ಲಘಟ್ಟ ತಾಲೂಕಿನ ಕಂದಾಯ ನಿರೀಕ್ಷಕ. ಯೋಧನಿಂದ ಒಂದು ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಚಿಕ್ಕಬಳ್ಳಾಪುರ ಎಸಿಬಿ ಪೊಲೀಸರು ಕಾರ್ಯಚರಣೆ ನಡೆಸಿ ಕಂದಾಯ ನಿರೀಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಬಾಶೆಟ್ಟಿಹಳ್ಳಿ ಹೋಬಳಿ ರಾಜಸ್ವ ನಿರೀಕ್ಷಕ ವೇಣುಗೋಪಾಲ ಲಂಚ ಸ್ವೀಕರಿಸಿ ಜೈಲಿಗೆ ಹೋದ ಆರೋಪಿ. ಈತನಿಂದ ಒಂದು ಲಕ್ಷ ರೂ. ಲಂಚದ ಹಣ ವಶಪಡಿಸಿಕೊಂಡಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರಿನ ಕಲ್ಯಾಣ ನಗರದ ನಿವಾಸಿ ದೂರು ನೀಡಿದ ಮಾಜಿ ಸೈನಿಕ. ದೇಶ ಸೇವೆ ಮಾಡಿ ಬರುವ ಸೈನಿಕರಿಗೆ ನಿವೃತ್ತಿ ನಂತರ ಜೀವನೋಪಾಯಕ್ಕೆ ಅವರು ಬಯಸಿದ ಪ್ರದೇಶದಲ್ಲಿ ಕೃಷಿ ಜಮೀನು ಮಂಜೂರು ಮಾಡುವ ಕಾನೂನು ಅಸ್ತಿತ್ವದಲ್ಲಿದೆ.
ಅದರಂತೆ ಬೆಂಗಳೂರಿನ ಕಲ್ಯಾಣ ನಗರದಲ್ಲಿ ವಾಸವಾಗಿರುವ ಮಾಜಿ ಸೈನಿಕ ಸರ್ಕಾರಿ ಜಮೀನು ಮಂಜೂರು ಮಾಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ್ದ ಜಿಲ್ಲಾಧಿಕಾರಿಗಳು ವರದಿ ನೀಡುವಂತೆ ಬಾಶೆಟ್ಟಿಹಳ್ಳಿ ಹೋಬಳಿ ರಾಜಸ್ವ ನಿರೀಕ್ಷಕರಿಗೆ ಅರ್ಜಿ ವರ್ಗಾಯಿಸಿದ್ದರು.

ಅರ್ಜಿ ಪರಿಶೀಲಿಸಿ ಜಮೀನು ಮಂಜೂರು ಮಾಡುವ ಬಗ್ಗೆ ವರದಿ ನೀಡಲು ಎರಡು ಲಕ್ಷ ರೂ. ಲಂಚ ನೀಡುವಂತೆ ಮಾಜಿ ಯೋಧನ ಬಳಿಯೇ ಕಂದಾಯ ನಿರೀಕ್ಷಕ ಬೇಡಿಕೆ ಇಟ್ಟಿದ್ದಾನೆ. ದೇಶಕಾಯುವ ಯೋಧ ಎಂಬುದನ್ನೂ ನೋಡದೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಮಾಜಿ ಯೋಧ ಚಿಕ್ಕಬಳ್ಳಾಪುರ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಶುಕ್ರವಾರ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.












Click it and Unblock the Notifications