ಕೊರೊನಾದಿಂದಾಗಿ ಕೋಚಿಮುಲ್ ಗೆ 20 ಕೋಟಿ ರೂಪಾಯಿ ನಷ್ಟ
ಚಿಕ್ಕಬಳ್ಳಾಪುರ, ನವೆಂಬರ್ 16: ಕೊರೊನಾ ಸೋಂಕಿನ ಕಾರಣದಿಂದಾಗಿ ಕೋಚಿಮುಲ್ ಗೆ ಅಂದಾಜು 20 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ತಿಳಿಸಿದ್ದಾರೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೋಚಿಮುಲ್ ಗೆ ಭಾರೀ ನಷ್ಟ ಉಂಟಾಗಿದೆ. ಆದರೂ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇವೆ ಎಂದು ನಲ್ಲಕದ್ರೇನಹಳ್ಳಿ ಎಂಪಿಸಿಎಸ್ ಅಧ್ಯಕ್ಷರೂ ಆಗಿರುವ ಅವರು ತಿಳಿಸಿದರು. ಸೋಮವಾರ ತಾಲೂಕಿನ ನಲ್ಲಕದ್ರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಸದಸ್ಯರಿಗೆ ಬೋನಸ್ ಹಣ ವಿತರಿಸಿ ಅವರು ಮಾತನಾಡಿದರು.

ಈ ಸಂದರ್ಭ ಕೋಚಿಮುಲ್ ನ ವಹಿವಾಟಿನ ಕುರಿತು ಮಾಹಿತಿ ಹಂಚಿಕೊಂಡರು. ಕೊರೊನಾದಿಂದಾಗಿ ರಾಜ್ಯದಲ್ಲಿ ಸಾಕಷ್ಟು ಕಷ್ಟ ನಷ್ಟಗಳು ಸಂಭವಿಸಿವೆ. ಲಾಕ್ ಡೌನ್ ಕಾರಣವಾಗಿ ಹಾಲು ಮಾರಾಟದಲ್ಲೂ ಭಾರೀ ಇಳಿಕೆಯಾಗಿತ್ತು. ಹಾಲಿನ ವಹಿವಾಟಿನ ಮೇಲೆ ಕೋವಿಡ್ ಲಾಕ್ ಡೌನ್ ಸಮಯ ಪರಿಣಾಮ ಬೀರಿತ್ತು. ಇದರಿಂದ ನಷ್ಟವನ್ನು ಅನುಭವಿಸಬೇಕಾಯಿತು. ಎರಡು ತಿಂಗಳಿಂದೀಚೆಗೆ ಪರಿಸ್ಥಿತಿ ಸುಧಾರಿಸಿದೆ. ಲಾಭ ಕಂಡುಬರುತ್ತಿದೆ. ಹೀಗಾಗಿ ಹಾಲು ಮಾರಾಟ ಪ್ರಮಾಣ ಇನ್ನಷ್ಟು ಹೆಚ್ಚಿದ ಬಳಿಕ ಹಾಲಿನ ದರ ಏರಿಕೆ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.












Click it and Unblock the Notifications