ಬಿಜೆಪಿಗೆ ರಜನಿಕಾಂತ್ ಬೆಂಬಲ ನೀಡುತ್ತಾರಾ, ಇಲ್ಲವಾ?
ಚೆನ್ನೈ, ಡಿಸೆಂಬರ್ 26 : ಅಧಿಕಾರದಲ್ಲಿರುವ ಎಐಎಡಿಎಂಕೆ ಪಕ್ಷವನ್ನು ಬೆಂಬಲಿಸಬೇಕಾ, ಆಡಳಿತ ಚುಕ್ಕಾಣಿ ಹಿಡಿಯಲು ತವಕಿಸುತ್ತಿರುವ ಡಿಎಂಕೆ ಪಕ್ಷಕ್ಕೆ ಬೆಂಬಲ ನೀಡಬೇಕಾ, ಆರೋಪ ಎದುರಿಸುತ್ತಿರುವ ದಿನಕರನ್ ರಂಥವರನ್ನು ಬೆಂಬಲಿಸಬೇಕಾ, ಇನ್ನೂ ಪಕ್ಷವೇ ಕಟ್ಟಿರದ ಕಮಲ್ ಅಥವಾ ರಜನಿಕಾಂತ್ ಅವರ ಬೆಂಬಲಕ್ಕೆ ನಿಲ್ಲಬೇಕಾ?
ಇಂಥಹದೊಂದು ಅಸ್ಪಷ್ಟ ಚಿತ್ರಣವನ್ನು ನೀಡಲು ತಮಿಳುನಾಡು ರಾಜಕೀಯಕ್ಕೆ ಮಾತ್ರ ಸಾಧ್ಯ. ಪ್ರಮುಖ ಪಕ್ಷಗಳಲ್ಲದೆ ಇನ್ನೂ ಹಲವಾರು ಸಣ್ಣಪುಟ್ಟ ಟೊಂಗೆಗಳಂಥ ಪಕ್ಷಗಳು ತಮಿಳುನಾಡಿನ ರಾಜಕೀಯವೆಂಬ ಬೃಹತ್ ಮರದಲ್ಲಿ ಟಿಸಿಲೊಡೆದಿವೆ. ಯಾವ ಟೊಂಗೆಗೆ ಜೋತುಬೀಳುವುದು?
ರಜನಿ ರಾಜಕೀಯ ಪ್ರವೇಶ, ಡಿ 31ಕ್ಕೆ ಅಧಿಕೃತ ಘೋಷಣೆ
ಇದೆಲ್ಲ ಅತ್ಲಾಗಿರಲಿ, ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವುದಕ್ಕೆ ನಾನಾ ಕಸರತ್ತು ಮಾಡುತ್ತಿರುವ ಭಾರತೀಯ ಜನತಾ ಪಕ್ಷ ಯಾವ ಪಕ್ಷಕ್ಕೆ ಬೆಂಬಲ ನೀಡುತ್ತದೆ ಎಂಬುದೂ ಸ್ಪಷ್ಟವಿಲ್ಲ. ಒಮ್ಮೆ ಎಐಎಡಿಎಂಕೆ ಪಕ್ಷದ ಕೈಹಿಡಿದಿದ್ದರೆ, ಮತ್ತೊಮ್ಮೆ ಡಿಎಂಕೆ ಪಕ್ಷದ ಕೈಕುಲುಕಿದಂತೆ ವರ್ತಿಸುತ್ತಿದೆ.
ರಜನಿಕಾಂತ್ ರಾಜಕೀಯಕ್ಕೆ ಏಕೆ ಧುಮುಕಬೇಕು : 5 ಕಾರಣ
ತಮಿಳುನಾಡಿನ ಭಕ್ತರ ಆರಾಧ್ಯ ದೈವ, ದಕ್ಷಿಣ ಭಾರತದ ಸೂಪರ್ ಸ್ಟಾರ್, ಕನ್ನಡಿಗ 67 ವರ್ಷದ ರಜನಿಕಾಂತ್ ಅವರು ಡಿಸೆಂಬರ್ 31ರಂದು ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸುವುದಾಗಿ ಹೇಳಿ ಸಂಚಲನವನ್ನು ಉಂಟು ಮಾಡಿದ್ದಾರೆ. ಈರೀತಿ ಅವರು ಹೇಳಿಕೆ ನೀಡುತ್ತಿರುವುದು ಅದೆಷ್ಟನೇ ಬಾರಿಯೋ?
ಗೆಲ್ಲಲೆಂದೇ ಯುದ್ಧಕ್ಕೆ ಇಳಿಯಬೇಕು : ರಜನಿ
"ಯುದ್ಧದಲ್ಲಿ ಬಾಗವಹಿಸುವುದೇ ಆದರೆ, ಅದನ್ನು ಗೆಲ್ಲಲೆಂದೇ ಯುದ್ಧಕ್ಕೆ ಇಳಿಯಬೇಕು" ಎಂದು ರಜನಿಕಾಂತ್ ಅವರು ಮಂಗಳವಾರ ತಮ್ಮ ಸಹಸ್ರಾರು ಅಭಿಮಾನಿಗಳೆದಿರು ವಿಸ್ವಾಸದಿಂದ ಹೇಳಿದ್ದಾರೆ. "ದೇವರು ಇಷ್ಟಪಟ್ಟರೆ ರಾಜಕೀಯಕ್ಕೆ ಬಂದೇ ಬರುತ್ತೇನೆ" ಎಂದು ಹೇಳಿ ಅಭಿಮಾನಿಗಳಲ್ಲಿ, ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಹುಟ್ಟಿಸಿದ್ದಾರೆ.
ರಜನಿ ಸ್ವತಂತ್ರ ಪಕ್ಷ ಕಟ್ಟುತ್ತಾರಾ?
ಒಂದು ವೇಳೆ ಅವರು ಸಕ್ರಿಯರಾಗಿ ರಾಜಕೀಯಕ್ಕೆ ಧುಮುಕುತ್ತಾರೆ ಅಂದುಕೊಳ್ಳೋಣ. ಆಗ, ಅವರು ಸ್ವತಂತ್ರ ಪಕ್ಷ ಕಟ್ಟುತ್ತಾರಾ? ಅಥವಾ ಬೇರೆ ಪಕ್ಷದೊಡನೆ ವಿಲೀನವಾಗುತ್ತಾರಾ? ಅಥವಾ ಬೇರೆ ಪಕ್ಷಗಳೇ ಇವರಲ್ಲಿ ವಿಲೀನವಾಗುತ್ತವಾ? ಎಂಬ ಬಗ್ಗೆ ಭಾರೀ ಚರ್ಚೆಗಳು ಈಗಾಗಲೆ ಶುರುವಾಗಿವೆ. ಕೆಲ ರಾಜಕೀಯ ಪಕ್ಷಗಳಿಗೆ ಸಣ್ಣಗೆ ನಡುಕ ಆರಂಭವಾಗಿದ್ದರೂ ಅಚ್ಚರಿಯಿಲ್ಲ.
ಬಿಜೆಪಿ ವಿರುದ್ಧ ರಜನಿ ಎಂದೂ ಗುಟುರು ಹಾಕಿಲ್ಲ
ರಜನಿಕಾಂತ್ ಅವರು ಮತ್ತೊಬ್ಬ ಮಹತ್ವಾಕಾಂಕ್ಷಿ ರಾಜಕಾರಣಿ ಕಮಲ್ ಹಾಸನ್ ಅವರಂತೆ ಭಾರತೀಯ ಜನತಾ ಪಕ್ಷದ ವಿರುದ್ಧ ಬಹಿರಂಗವಾಗಿ ಗುಟುರು ಹಾಕಿಲ್ಲವಾದರೂ, ತಾವು ಇಂಥಹುದೇ ಸಿದ್ಧಾಂತಕ್ಕೆ ಮನ್ನಣೆ ನೀಡುವುದಾಗಿ ಎಂದು ಸ್ಪಷ್ಟವಾಗಿ ತಿಳಿಸಿಲ್ಲ. ಆದ್ದರಿಂದ ಅವರು ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂಬುದರ ಬಗ್ಗೆಯೂ ಸ್ಪಷ್ಟತೆಯಿಲ್ಲ.
ಬಿಜೆಪಿ ಬನ್ನಿ ಎಂದು ಆಹ್ವಾನಿಸಿದ್ದ ಮೋದಿ
ಅವರಿವರಿರಲಿ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹಲವಾರು ಬಾರಿ ರಜನಿಕಾಂತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಜನಿಕಾಂತ್ ಅವರು ಭಾರತೀಯ ಜನತಾ ಪಕ್ಷ ಸೇರುವುದೇ ಆದರೆ, ಅವರಿಗೆ ಯಾವತ್ತೂ ದ್ವಾರ ತೆರೆದೇ ಇರುತ್ತದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೂಡ ಮುಕ್ತ ಹೇಳಿಕೆ ನೀಡಿದ್ದರು. ಇದಕ್ಕೆ ರಜನಿಯವರದು ಮೌನದ ನಗುವೇ ಉತ್ತರ.
ರಜನಿ ತಮಿಳಿಗನೇ ಅಲ್ಲ ಎಂದಿದ್ದ ಸ್ವಾಮಿ
ಹಿಂದೆ, ತಮಿಳುನಾಡಿನ ಹಿರಿಯ ರಾಜಕಾರಣಿ, ಬಿಜೆಪಿಯವರೇ ಆದ ಡಾ. ಸುಬ್ರಮಣಿಯನ್ ಸ್ವಾಮಿಯವರು, ರಜನಿಕಾಂತ್ ಅವರು ತಮಿಳಿಗನೇ ಅಲ್ಲ, ಅನಕ್ಷರಸ್ಥ, ಅವರು ರಾಜಕೀಯಕ್ಕೆ ನಾಲಾಯಕ್ ಎಂಬ ಅಭಿಪ್ರಾಯವನ್ನು ಮಂಡಿಸಿದ್ದರು. ಇದಕ್ಕೆ ನಾನು ಅಪ್ಪಟ ತಮಿಳಿಗ ಎಂದು ರಜನಿಕಾಂತ್ ಅವರು ಸುಬ್ರಮಣಿಯನ್ ಸ್ವಾಮಿ ಅವರಿಗೆ ತಿರುಗೇಟು ನೀಡಿದ್ದರು.
ರಾಜಕೀಯಕ್ಕೆ ಬರಬೇಡಿ ಅಂದಿದ್ದ ಅಮಿತಾಭ್
ರಜನಿ ಅವರು ರಾಜಕೀಯಕ್ಕೆ ಧುಮುಕುತ್ತಾರೆ ಎಂದು ಮೊದಲ ಬಾರಿಗೆ ಮಾತು ಕೇಳಿ ಬಂದಿದ್ದಾಗ, ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು 'ದಯವಿಟ್ಟು ಹೋಗಬೇಡಿ' ಎಂದು ಉಪದೇಶ ನೀಡಿದ್ದರು. ಆದರೆ, ಶತ್ರುಘ್ನ ಸಿನ್ಹಾ ಅವರು, ರಾಜಕೀಯಕ್ಕೆ ಬನ್ನಿ, ಆದರೆ ಯಾವುದೇ ಪಕ್ಷದೊಡನೆ ಗುರುತಿಸಿಕೊಳ್ಳಬೇಡಿ, ಬೇಕಿದ್ದರೆ ಇತರ ಪಕ್ಷಗಳೇ ನಿಮ್ಮ ಪಕ್ಷ ಸೇರಿಕೊಳ್ಳಲಿ ಎಂದು ಬಿಟ್ಟಿ ಉಪದೇಶ ಕೊಟ್ಟಿದ್ದರು.