'ಶುಭಶ್ರೀಯನ್ನು ಕೊಂದಿದ್ದು ಯಾರು?' ಟೆಕ್ಕಿ ಸಾವಿಗೆ ಟ್ವಿಟ್ಟಿಗರ ಆಕ್ರೋಶ
Recommended Video
ಚೆನ್ನೈ, ಸೆಪ್ಟೆಂಬರ್ 13: ದ್ವಿಚಕ್ರ ವಾಹನದಲ್ಲಿ ಆಫೀಸಿನಿಂದ ಮನೆಗೆ ತೆರಳುತ್ತಿದ್ದ ಶುಭಶ್ರೀ ಎಂಬ 23 ವರ್ಷ ವಯಸ್ಸಿನ ಟೆಕ್ಕಿಯ ದಾರುಣ ಸಾವಿಗೆ ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಭಶ್ರೀ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಅಕ್ರಮ ಫ್ಲೆಕ್ಸ್ ಬಿದ್ದಿತ್ತು. ಕೂಡಲೇ ಅವರು ತಮ್ಮ ದ್ವಿಚಕ್ರವಾಹನದಿಂದ ಬಿದ್ದಿದ್ದರು.ಅದೇ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಟ್ರಕ್ ವೊಂದು ಅವರಿಗೆ ಗುದ್ದಿದ್ದ ಪರಿಣಾಮ ಆಕೆ ಸಾವನ್ನಪ್ಪಿದ್ದರು.
ಆಕೆ ಹೆಲ್ಮೆಟ್ ಧರಿಸಿಯೇ ಇದ್ದರೂ ಅವರು ಸಾವನ್ನಪ್ಪಿದ್ದು, "#WhoKilledSubhasree", #JusticeForSubhasree ಎಂಬ ಹ್ಯಾಶ್ ಟ್ಯಾಗ್ ಗಳು ಸದ್ಯಕ್ಕೆ ಟ್ರೆಂಡಿಂಗ್ ಆಗಿವೆ.
ಚೆನ್ನೈಯ ಶುಭಶ್ರೀ ಐಟಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಗುರುವಾರ ಸಂಜೆ ಆಫೀಸಿನಿಂದ ಮನೆಗೆ ಹೊರಟಿದ್ದ ಶುಭಶ್ರೀ ಪಲ್ಲವರಂ-ತೋರೈಪಕ್ಕಂ ರೇಡಿಯಲ್ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.
ಈ ಫ್ಲೆಕ್ಸ್ ಎಐಎಡಿಎಂಕೆ ನಾಯಕರೊಬ್ಬರ ಪುತ್ರನ ಮದುವೆಗೆ ಶುಭಕೋರಿ ಹಾಕಿದ್ದಾಗಿತ್ತು.
ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ದಂಡ ಹಾಕುತ್ತೀರಿ, ಸರಿ. ಆದರೆ ರಸ್ತೆಯಲ್ಲಿ ಹೊಂಡಬಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಅಕ್ರಮವಾಗಿ ಫ್ಲೆಕ್ಸ್ ಹಾಕಿ ಅದರಿಂದಾಗಿ ಜನರು ಸಾವನ್ನಪ್ಪಿದರೆ ಅದಕ್ಕಾಗಿ ಸರ್ಕಾರಕ್ಕೆ ದಂಡ ವಿಧಿಸುವುದಿಲ್ಲವೇ..? ಹೆಲ್ಮೆಟ್ ಹಾಕಿದ್ದರೂ ಹೀಗೆ ಸಾವು ಸಂಭವಿಸುವುದಾದರೆ ನಿಮ್ಮ ದುಬಾರಿ ರೂಲ್ಸ್ ಗಳು ಯಾಕೆ ಬೇಕು? ಎಂದು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಆಕೆ ನನ್ನ ಸಹೋದ್ಯೋಗಿ
ಆಕೆ ನನ್ನ ಸಹೋದ್ಯೋಗಿ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಫೀಸಿನಲ್ಲಿ ಆಕೆ ಕೂರುತ್ತಿದ ಜಾಗದ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ ಅನ್ಬಝಂಗನ್ ಶೇಖರ್.

ಮುಂದಿನ ಸಾವು ಯಾರದು?
"ಈ ಬ್ಯಾನರ್ ಮತ್ತು ಹೋರ್ಡಿಂಗ್ ಸಂಸ್ಕೃತಿಯನ್ನು ಮೊದಲು ಬಿಡಿ. ಮುಂದಿನ ಸಾವು ಯಾರದು? ನೀವೋ, ನಾನೋ?" ಎಂದು ಪ್ರಶ್ನಿಸಿದ್ದಾರೆ ಪ್ರಭು ಭಾಸ್ಕರನ್.

ಶಿಕ್ಷೆಯಾಗದಿದ್ದರೆ ಏನು ಪ್ರಯೋಜನ?
ಪಕ್ಷಗಳು ಇದನ್ನು ವಿರೋಧಿಸಬಹುದು, ನ್ಯಾಯಾಲಯಗಳು ಇದನ್ನು ವಿರೋಧಿಸಬಹುದು, ಜನರೂ ವಿರೋಧಿಸಬಹುದು. ಆದರೆ ಈ ಘಟನೆಗೆ ಕಾರಣರಾದವರ ವಿರುದ್ಧ ಯಾವುದಾದರೂ ಕ್ರಮ ಕೈಗೊಳ್ಳುತ್ತಾರೆಯೇ? ಅವರಿಗೆ ಶಿಕ್ಷೆಯೇ ಆಗದಿದ್ದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ ರಿಜ್ವಾನ್ ರಾಫಿಯುದ್ದೀನ್

ರಾಜಕಾರಣಿಗಳಿಗೆ ನಾಚಿಕೆಯಾಗಬೇಕು!
"ರಾಜಕಾರಣಿಗಳೇ ನಿಮಗೆ ನಾಚಿಕೆಯಾಗಬೇಕು! ನೀವು ಜನರ ಸೇವೆ ಮಾಡುತ್ತಿಲ್ಲ, ಸೇವೆಯ ಹೆಸರಿನಲ್ಲಿ ದಯವಿಟ್ಟು ಜನರನ್ನು ಕೊಲ್ಲಬೇಡಿ" ಎಂದಿದ್ದಾರೆ ಜೆಎಸ್

ನಮಗೂ ಇಂಥದೇ ಗತಿ ಬರಬಹುದು
ಕಾನೂನಿಗೆ ಗೌರವ ನೀಡದಿರುವುದರ ಫಲ ಇದು. ಫ್ಲೆಕ್ಸ್ ಗಳನ್ನು ಅಕ್ರಮವಾಗಿ ಹಾಕುವುದು ಈ ಯುವತಿಯ ಜೀವಕ್ಕಿಂತ ಹೆಚ್ಚಾಗಿತ್ತು. ಅದು ನಮ್ಮ ಯಾರದೇ ಜೀವವಾಗಿರಬಹುದು. ಈ ಯುವತಿಯ ಜೀವಹಾನಿಗೆ ಯಾರಾದರೂ ಹೊಣೆಗಾರರಾಗಲೇಬೇಕಲ್ಲವೆ ಎಂದು ಆರ್ಕ್ಟಿಕ್ ಬೋನ್ ಫೈರ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.












Click it and Unblock the Notifications