ವಿದ್ಯಾಸಾಗರ್ ಮತ್ತು ಶಶಿಕಲಾ ನಡುವೆ ನಡೆದಿದ್ದಾದರೂ ಏನು?
ನನ್ನ ಬಳಿ ಬಹುಮತ ಗಳಿಸುವಷ್ಟು ಶಾಸಕರಿದ್ದಾರೆ ಎಂದು ಶಶಿಕಲಾ ನಟರಾಜನ್ ಅವರು ತಮಿಳುನಾಡಿನ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರಿಗೆ ಸಹಿಗಳ ಪಟ್ಟಿ ನೀಡಿದ್ದರೂ ಶಶಿಕಲಾ ಅವರನ್ನು ಸರಕಾರ ರಚಿಸಲು ಏಕೆ ಆಹ್ವಾನಿಸಿಲ್ಲ?
ಚೆನ್ನೈ, ಫೆಬ್ರವರಿ 10 : ತಮಿಳುನಾಡಿನ ರಾಜ್ಯಪಾಲ ವಿದ್ಯಾಸಾಗರ ರಾವ್ ಯಾರಿಗೆ ಸರಕಾರ ರಚಿಸಲು ಆಹ್ವಾನ ನೀಡಲಿದ್ದಾರೆ? ಅವರು ಮತ್ತು ಶಶಿಕಲಾ ನಡುವೆ ನಡೆದಿರುವ ಮಾತುಕತೆ ಏನು? ಕಾನೂನು ತಜ್ಞರಿಂದ ಏನು ಸಲಹೆ ಪಡೆದಿದ್ದಾರೆ? ಇತ್ಯಾದಿ ಪ್ರಶ್ನೆಗಳು ಭಾರೀ ಕುತೂಹಲ ಮೂಡಿಸಿವೆ.
ಭೇಟಿಗೆ ಮುನ್ನ ವಿದ್ಯಾಸಾಗರ್ ಅವರು ಉಭಯ ನಾಯಕರಿಗೆ ಸ್ಪಷ್ಟಪಡಿಸಿದ್ದರು. ಬರುವುದೇನಿದ್ದರೂ ಕೇವಲ 10 ಎಂಎಲ್ಎಗಳನ್ನು ಕಟ್ಟಿಕೊಂಡು ಮಾತ್ರ ಬನ್ನಿ. ಇಲ್ಲಿ ಬಂದು ನಿಮ್ಮ ಬಲಪ್ರದರ್ಶನ ಮಾಡುವ ಅಗತ್ಯವಿಲ್ಲ ಎಂದು ತಾಕೀತುಪಡಿಸಿದ್ದರು.
ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ವಿದ್ಯಾಸಾಗರ್ ಅವರು ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಕೂಡ, ಶಶಿಕಲಾ ಅವರು ತಮ್ಮನ್ನು ಬೆಂಬಲಿಸುತ್ತಿರುವ ಶಾಸಕರ ಪಟ್ಟಿ ನೀಡಿದ್ದರಿಂದ ಶಶಿಕಲಾ ಅವರಿಗೇ ಅವಕಾಶ ನೀಡಬೇಕು ಎಂದು ಲಾ ಪಾಯಿಂಟ್ ಹಾಕಿದ್ದಾರೆ. [ತಮಿಳ್ನಾಡು ಬೃಹನ್ನಾಟಕ : ರಾಜ್ಯಪಾಲರ ಮುಂದಿರುವ ಆಯ್ಕೆಗಳು]
ದಂಗೆಯೆದ್ದಿರುವ ಪನ್ನೀರ್ ಸೆಲ್ವಂ ಅವರು ತಾನೂ ಸರಕಾರ ರಚಿಸಲು ಸಿದ್ಧ ಎಂದು ಮೊದಲಿಗೇ ವಿದ್ಯಾಸಾಗರ್ ಅವರನ್ನು ಭೇಟಿಯಾದರು. ಆದರೆ, ಅವರೇನು ತಮ್ಮ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿಲ್ಲ. ಆದರೂ, ರಾಜ್ಯಪಾಲರು ಶಶಿಕಲಾ ಅವರನ್ನು ಆಹ್ವಾನಿಸಲು ಹಿಂದೇಟು ಹಾಕುತ್ತಿರುವುದು? ಇದು ಈಗಿನ ಚರ್ಚೆಯ ವಿಷಯ. [ಮುಖ್ಯಮಂತ್ರಿ ಗಾದಿಗೆ ಶಶಿಕಲಾ ಹಾದಿಯಲ್ಲಿ 3 ಮುಳ್ಳು!]
ಉಭಯ ಕುಶಲೋಪರಿ ವಿಚಾರಿಸದ ನಂತರ ಶಶಿಕಲಾ ಅವರು ಸರಕಾರ ರಚಿಸಲು ನಾನು ಸಿದ್ಧ ಎಂಬ ಮಾತನ್ನು ನೇರವಾಗಿ ಹೇಳಿದ್ದಾರೆ. ಅವರೊಂದಿಗಿದ್ದ ಹತ್ತು ಜನ ಹಿರಿಯ ಶಾಸಕರು ಕೂಡ ಸರಕಾರ ರಚಿಸಲು ತಮಗೇ ಏಕೆ ಅವಕಾಶ ನೀಡಬೇಕು, ಶಶಿಕಲಾ ಅವರೇ ಏಕೆ ಮುಖ್ಯಮಂತ್ರಿಯಾಗಬೇಕು ಎಂಬ ವಿವರಣೆಯನ್ನು ನೀಡಿದ್ದಾರೆ. [ಶಶಿಕಲಾಗೇ ಆಹ್ವಾನ ನೀಡಬೇಕು : ಸುಬ್ರಮಣಿಯನ್ ಸ್ವಾಮಿ ವಾದ]
ಶಶಿಕಲಾಗೆ ಯಾಕೆ ಇನ್ನೂ ಆಹ್ವಾನ ನೀಡಿಲ್ಲ?
ಇಷ್ಟೆಲ್ಲ ಆದರೂ ವಿದ್ಯಾಸಾಗರ್ ಅವರು ಶಶಿಕಲಾಗೆ ಆಹ್ವಾನ ನೀಡಿಲ್ಲ? ಯಾಕೆ ಹಿಂದೇಟು ಹಾಕುತ್ತಿದ್ದಾರೆ? ತಮ್ಮ ಬಳಿ ಬಹುಮತವಿದೆ ಎಂದು ಶಶಿಕಲಾ ಅವರು ನೀಡಿರುವ ಪಟ್ಟಿಯಿಂದ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಅಷ್ಟೊಂದು ಸಂತುಷ್ಟರಾಗಿಲ್ಲ.
ಶಶಿಕಲಾ ಮಾತು ನಂಬಬೇಡಿ ಎಂಬ ಪನ್ನೀರ್ ಕಿವಿಮಾತು
ಸಂಜೆ 5 ಗಂಟೆಗೆ ರಾಜ್ಯಪಾಲರೊಂದಿಗೆ ಆದ ಭೇಟಿಯಲ್ಲಿ ಪನ್ನೀರ್ ಸೆಲ್ವಂ ಅವರು, ಶಶಿಕಲಾ ನೀಡುವ ಶಾಸಕರ ಪಟ್ಟಿಯನ್ನು ನಂಬಬಾರದು ಎಂಬ ಕಿವಿಮಾತನ್ನು ಹೇಳಿದ್ದರು. ಹಲವಾರು ಶಾಸಕರನ್ನು ಶಶಿಕಲಾ ಹಿಡಿದಿಟ್ಟಿದ್ದಾರೆ. ಅವರನ್ನು ಬಿಟ್ಟರೆ ಅವರಲ್ಲನೇಕರು ತಮಗೇ ಬೆಂಬಲ ನೀಡುತ್ತಾರೆ ಎಂಬ ಮಾತನ್ನು ಹೇಳಿದ್ದರು.
ಖಾಲಿ ಹಾಳೆಯ ಮೇಲೆ ಶಾಸಕರ ಸಹಿ?
ಎಲ್ಲ ಶಾಸಕರ ಸಹಿಯನ್ನು ಖಾಲಿ ಹಾಳೆಯ ಮೇಲೆ ತೆಗೆದುಕೊಳ್ಳಲಾಗಿತ್ತು ಎಂಬ ಪನ್ನೀರ್ ಅವರ ಮಾತು ರಾಜ್ಯಪಾಲರ ಮೇಲೆ ಪರಿಣಾಮ ಬೀರಿದೆ ಮತ್ತು ದ್ವಂದ್ವದಲ್ಲಿ ಕೆಡವಿದೆ. ಎಲ್ಲ ಸಹಿಗಳನ್ನು ಪರಿಶೀಲಿಸಬೇಕೆಂದು ರಾಜ್ಯಪಾಲರು ನಿರ್ಧರಿಸಿದ್ದಾರೆ. ಅಲ್ಲದೆ, ಬಲಪ್ರದರ್ಶನಕ್ಕೆ ಇಬ್ಬರಿಗೂ ಅವಕಾಶ ನೀಡಬೇಕೆಂಬ ಆಲೋಚನೆಯೂ ಬಂದಿದೆ.
ಯಾವುದು ಸತ್ಯ, ಯಾವುದು ಮಿಥ್ಯ
ಖಾಲಿ ಹಾಳೆಯ ಮೇಲೆ ಸಹಿ ಪಡೆದಿರುವ ಬಗ್ಗೆ ವಿದ್ಯಾಸಾಗರ್ ಅವರು ಶಶಿಕಲಾರನ್ನು ವಿಚಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಎಲ್ಲ ಸಹಿಗಳ ಪರಿಶೀಲನೆಗೆ ತಾವು ಸಿದ್ಧ ಎಂಬ ಮಾತನ್ನು ಶಶಿಕಲಾ ಹೇಳಿದ್ದಾರೆ. ಯಾವುದು ಸತ್ಯ, ಯಾವುದು ಮಿಥ್ಯ ಎಂಬುದು ಸದನದಲ್ಲಿಯೇ ತಿಳಿದುಬರಲಿದೆ.
ಗೊಂದಲ ಪರಿಹರಿಸಿಕೊಳ್ಳಲು 5 ದಿನ ಕಾಲಾವಕಾಶ
ಆರಂಭದಲ್ಲಿ ಸದನದಲ್ಲಿ ತಮ್ಮ ಬಲ ಪ್ರದರ್ಶಿಸಲು ಶಶಿಕಲಾ ಸಿದ್ಧರಿರಲಿಲ್ಲ. ಆದರೆ, ಕಾನೂನಾತ್ಮಕವಾಗಿ ಸದನದಲ್ಲಿಯೇ ಬಲಪ್ರದರ್ಶನ ಮಾಡಬೇಕು ಎಂದು ವಿದ್ಯಾಸಾಗರ್ ಅವರು ತಿಳಿಸಿದಾಗ ಶಶಿಕಲಾ ಒಪ್ಪಿಕೊಳ್ಳಲೇಬೇಕಾಯಿತು. ಈ ಎಲ್ಲ ಗೊಂದಲಗಳಿಗೆ ಪರಿಹಾರ ಹುಡುಕಿಕೊಳ್ಳಲು 5 ದಿನಗಳ ಕಾಲಾವಕಾಶ ನೀಡಲಾಗಿದೆ.