ಶಶಿಕಲಾ ಮೂರುಬಾರಿ ಕುಟ್ಟಿದ್ದರ ಹಿಂದೆ ಸ್ವಾರಸ್ಯಕರ ಕಥೆ
ಶಶಿಕಲಾ ನಟರಾಜನ್ ಕೂಡ ಇತಿಹಾಸದ ಪುಟ ಸೇರುವ ತವಕದಲ್ಲಿ ಅಥವಾ ಅಭಿಮಾನಿಗಳ ಅನುಕಂಪ ಗಿಟ್ಟಿಸುವ ನಿಟ್ಟಿನಲ್ಲಿ ಮೂರು ಬಾರಿ ಜಯಲಲಿತಾ ಗೋರಿಯನ್ನು ಕುಟ್ಟಿದ್ದಾರಾ?
ಚೆನ್ನೈ, ಫೆಬ್ರವರಿ 17 : ಅದೆಲ್ಲಿ ಅಡಗಿತ್ತೋ ಆ ಮಟ್ಟದ ಸಿಟ್ಟು, ಅದೆಷ್ಟು ದಿನ ಅದುಮಿಟ್ಟುಕೊಂಡಿದ್ದರೋ ಆಪರಿಯ ಆಕ್ರೋಶ, 'ನೀನು ಅಪರಾಧಿ' ಎಂದು ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡ್ತು ನೋಡಿ, ಠಪ್ ಠಪ್ ಠಪ್ ಅಂತ ಮೂರು ಬಾರಿ ಗೋರಿಯ ಮೇಲೆ ಬಡಿದಿದ್ದರು ಶಶಿಕಲಾ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಶಶಿಕಲಾ ನಟರಾಜನ್ ಅವರ ಕಟ್ಟಾ ಅಭಿಮಾನಿಗಳಿಗೆ ಇದು ಭಾವೋದ್ವೇಗದ ಸ್ಫೋಟದಂತೆ ಕಂಡಿತ್ತು, ಆಕೆಯ ವಿರೋಧಿಗಳಿಗೆ ಆ ಸಿಟ್ಟು ನಾಯಕೀಯವಾಗಿ ಕಾಣಿಸಿತ್ತು, ತಟಸ್ಥವಾಗಿದ್ದವರು ತಮಾಷೆ ಮಾಡಿಕೊಂಡು ನಕ್ಕಾಡಿದ್ದರು.[ಕಟಕಟನೆ ಹಲ್ಲು ಕಡಿದು ಸಮಾಧಿಗೆ ರಪ್ಪನೆ ಬಾರಿಸಿದ ಶಶಿ]
ಜಯಲಲಿತಾ ಅವರ ಗೋರಿಯ ಮೇಲೆ ಮೂರು ಬಾರಿ ಕುಟ್ಟುವ ಮುನ್ನ ಬಾಯಲ್ಲಿ ಪಿಟಿಪಿಟಿ ಮಂತ್ರ ಹೇಳಿದವರ ಹಾಗೆ ಶಶಿಕಲಾ ಏನೋ ಅಂದಿದ್ದು, ಇವರು ಮನದಲ್ಲಿಯೇ ಪನ್ನೀರ್, ಬಿಜೆಪಿ ಮತ್ತು ವಿರೋಧಿಗಳನ್ನು ಸರ್ವನಾಶ ಮಾಡುವ ಪಣ ತೊಟ್ಟಿದ್ದಾರೆ ಎಂದು ಹಲವರು ವ್ಯಾಖ್ಯಾನ ನೀಡಿದ್ದರು.
ಆದರೆ, ಮೂರು ಬಾರಿ ಗೋರಿ (ನೆಲ) ಕುಟ್ಟಿದ್ದರ ಹಿಂದೆ ಸ್ವಾರಸ್ಯಕರ ಕಥೆಗಳು ತಮಿಳುನಾಡಿನಲ್ಲಿ ಚಾಲ್ತಿಯಲ್ಲಿವೆ. ಮೂರು ಬಾರಿ ನೆಲ ಗುದ್ದುವ ಕ್ರಿಯೆಯ ಹಿನ್ನೆಲೆಯ ಬಗ್ಗೆ ದಿ ಹಿಂದೂ ಪತ್ರಿಕೆ ಬರೆದಿದೆ. ಶಶಿಕಲಾ ನಟರಾಜನ್ ಕೂಡ ಇತಿಹಾಸದ ಪುಟ ಸೇರುವ ತವಕದಲ್ಲಿ ಅಥವಾ ಅಭಿಮಾನಿಗಳ ಅನುಕಂಪ ಗಿಟ್ಟಿಸುವ ನಿಟ್ಟಿನಲ್ಲಿ ಹೀಗೆ ಮಾಡಿದ್ದಾರಾ?[ಎಐಎಡಿಎಂಕೆ ಪಕ್ಷದೊಳಗೆ ವಕ್ಕರಿಸಿಕೊಂಡು ಬಿಟ್ಟ ಶಶಿಕಲಾ ಸಂಬಂಧಿಗಳು!]
ಅದು ಅಂತಿಂಥ ಗುದ್ದಲ್ಲ ಸೇಡಿನ ಗುದ್ದು
ತಮಿಳುನಾಡಿನ ಸಂಪ್ರದಾಯ, ಇತಿಹಾಸ, ಸಾಹಿತ್ಯ ಬಗೆದು ನೋಡಿದಾಗ ಶವದ ಮುಂದೆ ಕುಳಿತು ಆಕ್ರೋಶದಿಂದ ನೆಲವನ್ನು ಮೂರು ಬಾರಿ ಗುದ್ದುವುದು ಆಶ್ಚರ್ಯದ ಸಂಗತಿಯೂ ಅಲ್ಲ, ಅತಿಶಯೋಕ್ತಿಯೂ ಅಲ್ಲ. ವ್ಯಕ್ತಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಹೀಗೆ ನೆಲ ಗುದ್ದುವುದು ಸರ್ವೇಸಾಮಾನ್ಯ.
ಜಾನಪದ ಕಥೆಗಳಲ್ಲಿ ಇದು ಜನಜನಿತ
ಜಾನಪದ ಕಥೆಗಳಲ್ಲಿ ಕೂಡ, ಹೀಗೆ ಪ್ರೀತಿಪಾತ್ರರು, ನಾಯಕರು, ರಾಜರು, ಸ್ನೇಹಿತರು, ಸಂಬಂಧಿಗಳು ಅಸುನೀಗಿದಾಗ, ಅದಕ್ಕೆ ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮೂರು ಬಾರಿ ನೆಲ ಗುದ್ದಿ ಪ್ರತಿಜ್ಞೆ ಕೈಗೊಳ್ಳುವುದು ಜನಜನಿತವಾಗಿದೆ. ಶಶಿಕಲಾ ಕೂಡ ತನ್ನ ದಯನೀಯ ಸ್ಥಿತಿಗೆ ಕಾರಣರಾದ ಡಿಎಂಕೆ, ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುವ ಪಣವಾಗಿ ಮೂರು ಬಾರಿ ಗೋರಿಯ ಮೇಲೆ ತಟ್ಟಿದ್ದಾರೆ.
ಚೋಳರನ್ನು ಸದೆಬಡಿಯುವ ಪಣ
ಇತಿಹಾಸದ ಪುಟಗಳನ್ನು ಕೆದಕಿದಾಗ, ಪಾಂಡ್ಯ ರಾಜನ ಬೆಂಬಲಿಗರು ಮಧ್ಯರಾತ್ರಿ ಪಲ್ಲಿಪಾಡೈ ದೇವಸ್ಥಾನದಲ್ಲಿ ಸೇರುತ್ತಾರೆ. ಅವರ ರಾಜನ ಹೆಣದ ಮೇಲೆ ದೇವಸ್ಥಾನ ಕಟ್ಟಿದ ಚೋಳರನ್ನು ಸದೆಬಡಿಯುವ ಪಣ ತೊಟ್ಟು ಮೂರು ಬಾರಿ ನೆಲವನ್ನು ಬಡಿಯುತ್ತಾರೆ. ಈ ಕಥೆಯನ್ನು ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ತೋರಿಸಲಾಗಿದೆ.
ಭೂತಾಯಿಯ ಮೇಲೆ ಆಣೆಪ್ರಮಾಣ
ಹಿಂದೆ ರಾಜರ ಕಾಲದಲ್ಲಿ ಹಳ್ಳಿಗಳಲ್ಲಿ ತಮ್ಮ ರಾಜನಿಗೆ ಕೇಡು ಬಗೆದವರನ್ನು ಮಟ್ಟಹಾಕಲು ಪಣ ತೊಡುವುದು ಸಾಮಾನ್ಯವಾಗಿತ್ತು ಎಂದು ಮದ್ರಾಸ್ ವಿಶ್ವವಿದ್ಯಾಲಯದ ವಿ ಅರಸು ಅವರು ಹೇಳುತ್ತಾರೆ. ಭೂಮಿಯ ಮೇಲೆ ಏಕೆ ಕುಟ್ಟುವುದೆಂದರೆ, ಭೂತಾಯಿಯ ಮೇಲೆ ಆಣೆಪ್ರಮಾಣ ಮಾಡಿ ಸೇಡು ತೀರಿಸಿಕೊಳ್ಳುವುದು. ಹೀಗೆ ಮಾಡಿದರೆ ಅವರ ಪಣ ಎಂದೂ ವಿಫಲವಾಗುವುದಿಲ್ಲ.
ರುದ್ರಭೂಮಿಯಲ್ಲಿ ಪ್ರತಿಜ್ಞೆ
ತಮ್ಮ ರಾಜನನ್ನು ಕಾಪಾಡಲು ವಿಫಲವಾದರೆ ತಮ್ಮ ತಲೆಯನ್ನೇ ದಂಡವಾಗಿ ನೀಡುತ್ತೇವೆ ಎಂದು ರಾಜನ ಅಂಗರಕ್ಷಕರು ಯುದ್ಧಭೂಮಿಯಲ್ಲಿ ಅಥವಾ ರುದ್ರಭೂಮಿಯಲ್ಲಿ ಪ್ರತಿಜ್ಞೆ ತೆಗೆದುಕೊಳ್ಳುತ್ತಿದ್ದರು ಎಂದು ಇತಿಹಾಸಕಾರರು ಬಣ್ಣಿಸಿದ್ದಾರೆ.
ವೀರಪಾಂಡ್ಯ ಕಟ್ಟಬೊಮ್ಮನ್ ಎಂಬ ವೀರ
ಹಿಂದೆ ತೂತುಕುಡಿಯ ಪಾಳೇಗಾರನಾಗಿದ್ದ ವೀರಪಾಂಡ್ಯ ಕಟ್ಟಬೊಮ್ಮನ್ ಎಂಬ ವೀರನ ಶವದ ಮುಂದೆ ನಿಂತು ಆತನ ಅಭಿಮಾನಿಗಳು ನೆಲ ಕುಟ್ಟಿ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಬಾರದೆಂದು ಬ್ರಿಟಿಷರು ಆತನ ಶವ ಮತ್ತು ನೇಣು ಹಾಕಲು ಬಳಸಿದ್ದ ಹಗ್ಗವನ್ನು ನಾಶ ಮಾಡಿದ್ದರ ಬಗ್ಗೆಯೂ ಇತಿಹಾಸದ ಪುಟಗಳಲ್ಲಿ ವಿವರಣೆಯಿದೆ.