ನೀರಿನ ಮಹತ್ವ ಸಾರುವ ಚಿತ್ರ ಪ್ರದರ್ಶನಕ್ಕೆ ಚಾಲನೆ
ಚೆನ್ನೈ, ಫೆಬ್ರವರಿ 10: 'ನೀರು ಬಹುಮೂಲ್ಯ' (ವಾಟರ್ ಮ್ಯಾಟರ್ಸ್) ವಿಷಯ ಕುರಿತ ಚಿತ್ರ ಪ್ರದರ್ಶನ ಚೆನ್ನೈನಲ್ಲಿ ಇಂದು ಉದ್ಘಾಟನೆಗೊಂಡಿತು.
ಅಮೆರಿಕ ಕಾನ್ಸುಲೇಟ್ ಜನರಲ್ ರಾಬರ್ಟ್ ಬರ್ಗೆಸ್ 'ನೀರು ಅವಶ್ಯ' ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ಪ್ರದರ್ಶನವನ್ನು ಕೇರ್ ಅರ್ಥ್ ಟ್ರಸ್ಟ್, ತಮಿಳುನಾಡು ಸರ್ಕಾರ, ಸ್ಮಿತ್ಸೋನಿಯನ್ ಇನ್ಸ್ಟಿಟ್ಯೂಷನ್ ಟ್ರಾವಲಿಂಗ್ ಎಕ್ಸಿಬಿಶನ್ ಸರ್ವೀಸ್ (ಎಸ್ಐಟಿಇಎಸ್) ಜಂಟಿ ಸಹೋಗದೊಂದಿಗೆ ಆಯೋಜಿಸಲಾಗಿದೆ.
ಉದ್ಘಾಟನೆ ಮಾಡಿ ಮಾತನಾಡಿದ ಅಮೆರಿಕ ಕಾನ್ಸುಲೇಟ್ ಜನರಲ್ ರಾಬರ್ಟ್ ಬರ್ಗೆಸ್, 'ನೀರಿನ ಸುಸ್ಥಿರ ನಿರ್ವಹಣೆ ಕುರಿತಂತೆ ಹೊಸ ಯೋಚನೆಗಳು, ಯೋಜನೆಗಳನ್ನು ಹೊರಗೆ ತರಲೆಂದು ಈ ಪ್ರದರ್ಶನ ಆಯೋಜಿಸಲಾಗಿದೆ' ಎಂದರು.
ತಮಿಳುನಾಡು ಉನ್ನತ ಶಿಕ್ಷಣ ಮಂತ್ರಿ ಕೆ.ಪಿ.ಅನ್ಬಲಗನ್ ಮಾತನಾಡಿ, 'ಇಂತಹಾ ಉತ್ತಮ ಕಾರ್ಯ ಮಾಡುತ್ತಿರುವ ಅಮೆರಿಕ ಧೂತಾವಾಸಕ್ಕೆ ಹಾಗೂ ಸ್ಮಿತ್ಸೋನಿಯನ್ ಇನ್ಸ್ಟಿಟ್ಯೂಷನ್ ಟ್ರಾವಲಿಂಗ್ ಎಕ್ಸಿಬಿಶನ್ ಸರ್ವೀಸ್ ಗೆ ನಾವು ಧನ್ಯವಾದಗಳು' ಎಂದರು.
ಆಸ್ಕರ್ ಪ್ರಶಸ್ನಿ ವಿಜೇತ ಸಂಗೀತನಿರ್ದೇಶಕ ಎ.ಆರ್.ರೆಹಮಾನ್ ಮಾತನಾಡಿ, 'ನಮ್ಮ ಸಂಪನ್ಮೂಲಗಳನ್ನು ನಾವು ಕಾಪಾಡಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಶುದ್ಧ ನೀರು ಉಳಿಸಿಹೋಗುವುದು ಬಹುಮುಖ್ಯ. ಈ ಪ್ರದರ್ಶನವು ನೀರನ್ನು ನ್ಯಾಯಯುತವಾಗಿ ಬಳಸಲು ಜನರನ್ನು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದರು.
ಎಸ್ಐಟಿಇಎಸ್ ಸಂಸ್ಥೆಯು ದಕ್ಷಿಣ ಭಾರತದಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಬಹು ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಪರಿಣಿತರ 53 ತಂಡವು ವಿಜ್ಞಾನ, ನಾವೀನ್ಯತೆ ಮತ್ತು ಸುಸ್ಥಿರ ನೀರಿನ ನಿರ್ವಹಣೆ, ಮಾಹಿತಿ ಕುಠೀರ ಮತ್ತು ಸಂವಾದಾತ್ಮಕ ಶೈಕ್ಷಣಿಕ ಪ್ರಯೋಗಗಳನ್ನು ನಡೆಸುತ್ತಿದೆ.
ನೀರಿನ ಮಹತ್ವ ಸಾರುವ ಉಪನ್ಯಾಸಗಳು, ವಿಜ್ಞಾನ ಕಾರ್ಯಾಗಾರಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಈ ಕಾರ್ಯಕ್ರಮಗಳಿಗೆ ಹಾಜರಾಗಲು ಸಾರ್ವಜನಿಕರನ್ನು ಪ್ರೇರೇಪಿಸಲಾಗುತ್ತಿದೆ. ಅಮೆರಿಕ ರಾಯಭಾರಿ ಕಚೇರಿ ಚೆನ್ನೈನ ವೆಬ್ಸೈಟ್ನಲ್ಲಿ ಸಂಸ್ಥೆಯ ಕಾರ್ಯಕ್ರಮಗಳ ಪಟ್ಟಿ ಲಭ್ಯವಿದೆ.
ಪ್ರದರ್ಶನವು ಫೆಬ್ರವರಿ 11 ರಿಂದ 29 ರವರೆಗೆ ಪೆರಿಯಾರ್ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ, ಕೊಟ್ಟೂರ್ಪುರಂ, ಚೆನ್ನೈ ಇಲ್ಲಿ ನಡೆಯಲಿದೆ.